'ನಾನು ತಲೆಬಾಗಲ್ಲ': ಪುಷ್ಪಾ ಸ್ಟೈಲ್ನಲ್ಲಿ ಹೇಳಿದ ಜಿಗ್ನೇಶ್
ಗುವಾಹಟಿ, ಏಪ್ರಿಲ್ 29: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಇಂದು ತನ್ನ ವಿರುದ್ಧ "ಕೇಸ್ ಹಾಕಲು ಮಹಿಳೆಯನ್ನು ಬಳಸಿಕೊಳ್ಳುವ" ಮೂಲಕ ಆಡಳಿತಾರೂಢ ಬಿಜೆಪಿ "ಹೇಡಿತನದ ಕೆಲಸ" ಮಾಡಿದೆ ಎಂದು ಆರೋಪಿಸಿದ್ದಾರೆ. ಅಸ್ಸಾಂ ಪೊಲೀಸ್ನ ಮಹಿಳಾ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಅಸ್ಸಾಂನ ನ್ಯಾಯಾಲಯ ಜಾಮೀನು ನೀಡಿದ ಕೆಲವೇ ಗಂಟೆಗಳ ನಂತರ ಮೇವಾನಿ ಈ ಹೇಳಿಕೆಯನ್ನು ನೀಡಿದ್ದಾರೆ. ಹಾಗೆಯೇ "ನಾನು ತಲೆಬಾಗುವುದಿಲ್ಲ (ಝುಕೆಗಾ ನಹಿ)," ಎಂದು ಮೇವಾನಿ ಪುಷ್ಪಾ ಚಲನಚಿತ್ರದಲ್ಲಿ ಅಲ್ಲು ಶೈಲಿಯಲ್ಲಿ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧವಾಗಿ ಟ್ವೀಟ್ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ನೀಡಿದ ಕೆಲವೇ ಕ್ಷಣದಲ್ಲಿ ಮೇವಾನಿ ಅವರನ್ನು ಬಂಧನ ಮಾಡಲಾಗಿತ್ತು. ಹಲ್ಲೆ ಆರೋಪದ ಮೇಲೆ ಎರಡನೇ ಬಾರಿಗೆ ಬಂಧನ ಮಾಡಲಾಗಿತ್ತು.
Breaking; ಜಿಗ್ನೇಶ್ ಮೇವಾನಿಗೆ ಜಾಮೀನು ನೀಡಿದ ಅಸ್ಸಾಂ ಕೋರ್ಟ್
"ನನ್ನ ಬಂಧನವು ಸರಳವಾದ ವಿಷಯವಲ್ಲ. ಇದು ಪಿಎಂಒ (ಪ್ರಧಾನ ಮಂತ್ರಿ ಕಚೇರಿ) ನಲ್ಲಿನ ರಾಜಕೀಯ ಮೇಲಧಿಕಾರಿಗಳ ಸೂಚನೆಯ ಮೇರೆಗೆ ನಡೆದಿರಬೇಕು," ಎಂದು ಕೂಡಾ ಜಿಗ್ನೇಶ್ ಮೇವಾನಿ ಆರೋಪ ಮಾಡಿದ್ದಾರೆ. "ನಾನು ಮಾಡಿದ ಟ್ವೀಟ್ನ ಬಗ್ಗೆ ನನಗೆ ಇನ್ನೂ ಹೆಮ್ಮೆ ಇದೆ. ಟ್ವೀಟ್ನಲ್ಲಿ, ಕೋಮು ವರ್ಗಗಳು ಸಂಭವಿಸಿದಂತೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ನಾನು ಪ್ರಧಾನ ಮಂತ್ರಿಯವರನ್ನು ಕೇಳಿದೆ," ಎಂದು ಮತ್ತೆ ಮೇವಾನಿ ತನ್ನ ಟ್ವೀಟ್ಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
"ಭಾರತದ ಪ್ರಜೆಯಾಗಿ, ನನಗೆ ಪ್ರಶ್ನೆ ಮಾಡುವ ಹಕ್ಕು ಇದೆ. ಹಾಗೆಯೇ ಒಬ್ಬ ಶಾಸಕನಾಗಿ ಪ್ರಧಾನಿಯನ್ನು ಪ್ರಶ್ನೆ ಮಾಡುವ ಹಕ್ಕು ಇದೆ. ನಮ್ಮ ಕರ್ತವ್ಯ ಏನು? ಶಾಂತಿ ಕಾಪಾಡಲು ಜನರನ್ನು ಒತ್ತಾಯಿಸುವುದು, ಹಾಗಾಗಿ ನಾನು ಮಾಡಿದ್ದೇನೆ," ಎಂದು ಹೇಳಿಕೊಂಡಿದ್ದಾರೆ. "ಎರಡನೇ ಪ್ರಕರಣದಲ್ಲಿ, ಅವರು ಮಹಿಳೆಯನ್ನು ಬಳಸಿಕೊಂಡು ಪ್ರಕರಣವನ್ನು ರೂಪಿಸಲು ಕಥೆಯನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರವು ಎಷ್ಟು ಹೇಡಿಯಾಗಿದೆ, ಅದು ನನ್ನ ವಿರುದ್ಧ ಮಹಿಳೆಯನ್ನು ಬಳಸಿಕೊಂಡಿದೆ. ಇದು ಅಂತಹ ಹೇಡಿತನದ ಕೃತ್ಯ," ಎಂದು ಜಿಗ್ನೇಶ್ ಮೇವಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಮೀನು ಪಡೆದ ಬೆನ್ನಲ್ಲೇ ಶಾಸಕ ಜಿಗ್ನೇಶ್ ಮೇವಾನಿ ಮತ್ತೆ ಬಂಧನ
ಚುನಾವಣೆ ಹಿನ್ನೆಲೆ ಈ ಕೃತ್ಯ: ಮೇವಾನಿ ಆರೋಪ
"ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ಇದೆಲ್ಲವನ್ನೂ ಮಾಡುತ್ತಿದೆ," ಎಂದು ಆರೋಪಿಸಿದ್ದಾರೆ. "ಇದೊಂದು ಷಡ್ಯಂತ್ರ. ಇದು ದಲಿತರಲ್ಲಿ, ಗುಜರಾತ್ನ ಜನರಿಗೆ ಆತಂಕದ ಸಂಗತಿ. ಜನರು ಇದನ್ನು ಗಮನಿಸುತ್ತಿದ್ದಾರೆ. ಬಿಜೆಪಿ ತನ್ನ ಈ ಕೃತ್ಯಕ್ಕೆ ಬೆಲೆ ತೆರಲಿದೆ. ನನ್ನ ವಿರುದ್ಧದ ಎರಡೂ ಪ್ರಕರಣಗಳು ಸುಳ್ಳು ಮತ್ತು ಕ್ಷುಲ್ಲಕ," ಎಂದರು. "ಪ್ರಕರಣದ ಸಮಯವೂ ಎಲ್ಲವನ್ನೂ ಹೇಳುತ್ತದೆ, ಗುಜರಾತ್ನಲ್ಲಿ ಚುನಾವಣೆಗಳು ಬರುತ್ತಿವೆ, ಆದ್ದರಿಂದ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಜನರು ಈ ತಂತ್ರವನ್ನು ಅರ್ಥಮಾಡಿಕೊಂಡಿದ್ದಾರೆ. ನನ್ನನ್ನು ವಿವಿಧ ಪ್ರಕರಣಗಳಲ್ಲಿ ಸಿಲುಕಿಸಲು ಯೋಜಿಸುತ್ತಿದ್ದಾರೆಂದು ನನಗೆ ತಿಳಿದಿದೆ. ಅಸ್ಸಾಂನಲ್ಲಿ ಗುಜರಾತ್ನ ಶಾಸಕರೊಬ್ಬರನ್ನು ಗುರಿಯಾಗಿಸಿಕೊಂಡಿರುವುದು ದೊಡ್ಡ ಸಂಚಿನ ಭಾಗವಾಗಿದೆ," ಎಂದು ಹೇಳಿದರು.
"ತಮ್ಮನ್ನು ಪ್ರಶ್ನಿಸುವವರ ವಿರುದ್ಧ, ಸತ್ಯಕ್ಕಾಗಿ ಮಾತನಾಡುವ ಯಾರಿಗಾದರೂ ಅವರು ಕೇಸ್ ಹಾಕುತ್ತಾರೆ ... ಅಸ್ಸಾಂನ ಜನರು ಮತ್ತು ಕಾಂಗ್ರೆಸ್ ನನ್ನನ್ನು ಬೆಂಬಲಿಸಿದ ರೀತಿ ಬಹಳ ಸಹಾಯ ಮಾಡಿದೆ," ಎಂದು ಶ್ಲಾಘಿಸಿದರು.