ಗಡಿ ವಿವಾದ: ಗುವಾಹಟಿಯಲ್ಲಿ ಸಭೆ ನಡೆಸಿದ ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿಗಳು
ಗುವಾಹಟಿ, ಆ.06: ಅಸ್ಸಾಂ ಮತ್ತು ಮೇಘಾಲಯ ಆಗಸ್ಟ್ 6 ರಂದು ಅಂತರ್ ರಾಜ್ಯ ಗಡಿ ವಿವಾದ ಸಮಸ್ಯೆಗಳನ್ನು ಹಂತ-ಹಂತದ ರೀತಿಯಲ್ಲಿ ಪರಿಹರಿಸಲು ನಿರ್ಧರಿಸಿದೆ. ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುವಾಹಟಿಯಲ್ಲಿ ಭೇಟಿಯಾಗಿ ಗಡಿ ವಿವಾದದ ಕುರಿತು ಎರಡನೇ ಹಂತದ ಮುಖ್ಯಮಂತ್ರಿ ಮಟ್ಟದ ಮಾತುಕತೆ ನಡೆಸಿದರು. ವಿವಾದಿತ 12 ಪ್ರದೇಶಗಳಲ್ಲಿ ಆರು ಗುರುತಿಸಲಾಗಿದೆ ಮತ್ತು ಆದ್ಯತೆಯ ಆಧಾರದ ಮೇಲೆ ಪರಿಹರಿಸಲಾಗುವುದು ಎಂದು ಮುಖ್ಯುಮಂತ್ರಿಗಳು ತಿಳಿಸಿದರು.
ಎರಡೂ ರಾಜ್ಯಗಳು ಸಂಪುಟ ಸಚಿವರುಗಳ ನೇತೃತ್ವದಲ್ಲಿ ಪ್ರತಿ ಕಡೆಯಿಂದ ಮೂರು ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ. ಗುರುತಿಸಲಾದ ಆರು ಸ್ಥಳಗಳಿಗೆ ಸಮಿತಿಗಳು ಭೇಟಿ ನೀಡುತ್ತವೆ, ಸಭೆ ನಿರ್ಧರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ''ನಮ್ಮ ಪರಸ್ಪರ ಸ್ನೇಹದ ಮನೋಭಾವವನ್ನು ಮುಂದುವರಿಸುತ್ತಾ, ಜುಲೈ 23 ರಂದು ಶಿಲ್ಲಾಂಗ್ನಲ್ಲಿ ನಡೆದ ಸಭೆಯ ನಂತರ ಅಸ್ಸಾಂ ಮತ್ತು ಮೇಘಾಲಯ ನಡುವಿನ ಮಹತ್ವದ ಗಡಿ ಸಮಸ್ಯೆಗಳನ್ನು ಪರಿಹರಿಸಲು, ಇಂದು ಗುವಾಹಟಿಯಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾರನ್ನು ಭೇಟಿ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಈ ದಿಕ್ಕಿನಲ್ಲಿ ನಡೆದ ಅತಿದೊಡ್ಡ ಸಮಾಲೋಚನೆ ಇದು,'' ಎಂದು ಹೇಳಿದ್ದಾರೆ.
ಗಡಿ ವಿವಾದ: ಪಡೆಗಳನ್ನು ಹಿಂಪಡೆಯಲು, ಶಾಂತಿಯುತ ಚರ್ಚೆಗೆ ಅಸ್ಸಾಂ, ಮಿಜೋರಾಂ ಅಸ್ತು
''ಈ ಸಭೆಯ ನಂತರ ನಾವು ಅಸ್ಸಾಂ ಮತ್ತು ಮೇಘಾಲಯದ ನಡುವಿನ ದೀರ್ಘಕಾಲದ ಸ್ನೇಹವನ್ನು ಬಲಪಡಿಸುವ ಒಂದು ಸಾಮಾನ್ಯ ಕಾರ್ಯಸೂಚಿಯನ್ನು ಹೊರತರಲು ಮತ್ತು ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇವೆ.ಎರಡೂ ಕಡೆಯ ಅನೇಕ ಹಿರಿಯ ಮಂತ್ರಿಗಳು, ಸಿಎಸ್ ಮತ್ತು ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಇದ್ದರು,'' ಎಂದು ಕೂಡಾ ತಿಳಿಸಿದ್ದಾರೆ.
ಇನ್ನು ಈ ಮಾತುಕತೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, "ಈ ಮಾತುಕತೆಯ ಮೂಲಕ, ನಾವು ಗಡಿಯನ್ನು ಪುನಃ ರಚಿಸುವುದಿಲ್ಲ. ಆದರೆ ಆ ಪ್ರದೇಶಗಳು ಅಥವಾ ಹಳ್ಳಿಗಳ ಬಗ್ಗೆ ಗ್ರಹಿಕೆಯನ್ನು ಬದಲಾಯಿಸುತ್ತೇವೆ. ಗಡಿ ಪುನರ್ರಚನೆ ಅಗತ್ಯವಿದ್ದರೆ, ನಾವು ಅದನ್ನು ಸಂಸತ್ತಿಗೆ ಶಿಫಾರಸು ಮಾಡುತ್ತೇವೆ," ಎಂದಿದ್ದಾರೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮಾತನಾಡಿ, ''ಇಂದು ಸಭೆಯಲ್ಲಿ, ಅಸ್ಸಾಂ ಸರ್ಕಾರವು ವಿವಾದದ ಹನ್ನೆರಡು ಕ್ಷೇತ್ರಗಳಲ್ಲಿ ಆರರ ಕುರಿತು ವಿವರವಾದ ಮಾತುಕತೆ ನಡೆಸಿದ್ದೇವೆ. ಎರಡೂ ರಾಜ್ಯಗಳು ಕ್ಯಾಬಿನೆಟ್ ಮಂತ್ರಿಗಳ ನೇತೃತ್ವದಲ್ಲಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ,'' ಎಂದು ಮಾಹಿತಿ ನೀಡಿದ್ದಾರೆ.
ಮಿಜೋರಾಂ ವಿವಾದದ ನಡುವೆ ನಾಗಾಲ್ಯಾಂಡ್ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ ಹಾಡಿದ ಅಸ್ಸಾಂ
''ನಾವು ಮೂರು ಪ್ರದೇಶಗಳನ್ನು ಹೊಂದಿದ್ದೇವೆ, ಅಲ್ಲಿ ಈ ಆರು ಭಿನ್ನಾಭಿಪ್ರಾಯಗಳು ಸೇರುತ್ತವೆ. ಮೇಘಾಲಯದಿಂದ 3 ಮತ್ತು ಅಸ್ಸಾಂನ 3 ಸಮಿತಿಗಳು ಐತಿಹಾಸಿಕ ಸಂಗತಿಗಳು, ಜನಾಂಗೀಯತೆ, ಆಡಳಿತಾತ್ಮಕ ಅನುಕೂಲತೆ, ಇಚ್ಛೆ ಮತ್ತು ಸಾಂದರ್ಭಿಕತೆಯ ಮೇಲೆ ಕೇಂದ್ರೀಕರಿಸುತ್ತವೆ ಮತ್ತು 30 ದಿನಗಳಲ್ಲಿ ತಮ್ಮ ವರದಿಗಳನ್ನು ಸಲ್ಲಿಸುತ್ತವೆ,'' ಎಂದು ಕೂಡಾ ಹೇಳಿದ್ದಾರೆ.
ಅಸ್ಸಾಂ ತನ್ನ ಎಲ್ಲಾ ಗಡಿ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ. ಈಶಾನ್ಯ ರಾಜ್ಯವಾದ ಅಸ್ಸಾಂ ಮತ್ತು ಮಿಜೋರಾಂನ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರ ನಡುವೆ ರಕ್ತಸಿಕ್ತ ಘರ್ಷಣೆ ನಡೆದು ಅಸ್ಸಾಂನ ಆರು ಪೊಲೀಸರು ಸಾವನ್ನಪ್ಪಿದ ಬಳಿಕ ಅಸ್ಸಾಂ ಹಾಗೂ ಮಿಜೋರಾಂ ಗಡಿ ಸಂಘರ್ಷ ಹೆಚ್ಚಾಯಿತು. ಈ ನಡುವೆ ಅಸ್ಸಾಂ ನಾಗಾಲ್ಯಾಂಡ್ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ ಹಾಡುವಲ್ಲಿ ಮುಂದಡಿ ಇಟ್ಟಿತು. ಉಭಯ ರಾಜ್ಯಗಳು ಗಡಿ ವಿವಾದಕ್ಕೆ ಸಂಬಂಧಿಸಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಹಾಗೆಯೇ ಈ ಬೆನ್ನಲ್ಲೇ ಅಸ್ಸಾಂ ಹಾಗೂ ಮಿಜೋರಾಂ ಅಧಿಕಾರಿಗಳು ತಮ್ಮ ಗಡಿ ವಿವಾದದ ಪರಿಹಾರಕ್ಕೆ ಮಾತುಕತೆ ನಡೆಸಿದ್ದಾರೆ. ಈಗ ಮೇಘಾಲಯ ಗಡಿ ವಿವಾದವನ್ನು ಪರಿಹರಿಸುವತ್ತ ಅಸ್ಸಾಂ ಗಮನ ಹರಿಸಿದೆ.
(ಒನ್ಇಂಡಿಯಾ ಸುದ್ದಿ)