"ಅಸ್ಸಾಂ ಸಮಾಜ ಒಡೆಯುವಂಥ ಪ್ರಚಾರ ಮಾಡುತ್ತಿದೆ ಬಿಜೆಪಿ"
ಗುವಾಹಟಿ, ಏಪ್ರಿಲ್ 5; ಅಸ್ಸಾಂನಲ್ಲಿ ಬಿಜೆಪಿ ನಕಾರಾತ್ಮಕವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಬಳಸಿರುವ ಭಾಷೆ ಅಸ್ಸಾಂ ಸಮಾಜವನ್ನು ಒಡೆಯುವಂತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜಿತೇಂದ್ರ ಸಿಂಗ್ ಟೀಕೆ ಮಾಡಿದ್ದಾರೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಮೈತ್ರಿಯು ದೊಡ್ಡ ಗೆಲುವನ್ನು ಸಾಧಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿರುವ ಅವರು, ಈಚೆಗೆ ಬಿಜೆಪಿ ಸಚಿವ ಹಿಮಂತ ಬಸ್ವಾ ಶರ್ಮಾ ಅವರ ಪ್ರಚಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧದ ಅವಧಿಯನ್ನು ಕಡಿತಗೊಳಿಸುವುದು ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ನಂತೆ ಕೆಲಸ ಮಾಡುತ್ತಿರುವುದನ್ನು ತೋರುತ್ತಿದೆ ಎಂದು ಆರೋಪಿಸಿದರು.
ಸಚಿವ ಹಿಮಾಂತ ಮೇಲಿನ ನಿಷೇಧದ ಬಳಿಕ ಅವರ ಸಹೋದರ, ಎಸ್ಪಿ ಸುಶಾಂತ ವರ್ಗಾವಣೆ
ಅಸ್ಸಾಂನಲ್ಲಿ ಏಪ್ರಿಲ್ 6ರಂದು ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ಭಾನುವಾರ ಚುನಾವಣಾ ಪ್ರಚಾರ ಮುಕ್ತಾಯಕ್ಕೆ ಮುನ್ನ ಪ್ರತಿಪಕ್ಷಗಳ ಮೈತ್ರಿಕೂಟದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಚಿತ. 101 ಸೀಟುಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ 2001ರಿಂದಲೂ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ಕಣದಲ್ಲಿದೆ. ಎಐಯುಡಿಎಫ್, ಬಿಪಿಎಫ್, ಸಿಪಿಐ (ಎಂ), ಸಿಪಿಐ, ಸಿಪಿಐ (ಎಂಎಲ್), ಎಜಿಎಂ, ಆರ್ಜೆಡಿ, ಎಎನ್ಪಿ, ಜಿಮೊಚಯಾನ್, ಜೆಜೆಪಿ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ.
"ಮೋದಿ ಮತ್ತು ಅಮಿತ್ ಶಾ ಅವರ ಭಾಷೆ ಅಸ್ಸಾಂ ಸಮಾಜ, ಸಂಸ್ಕೃತಿ, ಇತಿಹಾಸವನ್ನು ಒಡೆಯುವಂತಿದೆ. ಚುನಾವಣೆ ಸಮಯದಲ್ಲಿ ಮಾತ್ರ ಇವರಿಬ್ಬರೂ ಅಸ್ಸಾಂನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಸ್ಸಾಂ ಜನ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾಗ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಚಳವಳಿಯಲ್ಲಿ ಅಸ್ಸಾಂ ಹೊತ್ತಿ ಉರಿಯುತ್ತಿದ್ದಾಗ ಇವರಿಬ್ಬರು ಎಲ್ಲಿದ್ದರು" ಎಂದು ಜಿತೇಂದ್ರ ಸಿಂಗ್ ಪ್ರಶ್ನಿಸಿದ್ದಾರೆ.