ಬಿಜೆಪಿ ಇಲ್ಲಿ ಸರ್ಕಾರವನ್ನು ಮಾಫಿಯಾದಂತೆ ನಡೆಸುತ್ತಿದೆ: ಪ್ರಿಯಾಂಕಾ ಗಾಂಧಿ
ಗುವಾಹಟಿ, ಮಾರ್ಚ್ 22: ಅಸ್ಸಾಂನಲ್ಲಿನ ಆಡಳಿತಾರೂಢ ಬಿಜೆಪಿ ಮಾಫಿಯಾದಂತೆ ಕೆಲಸ ಮಾಡುತ್ತಿದೆ ಮತ್ತು ಅದು ತನ್ನ ಗುಂಪುಗಳನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದರು.
ಸುರಾಪತ್ಥರ್ನಲ್ಲಿ ಚುನಾವಣಾ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಅವರು, ರಾಜ್ಯದಲ್ಲಿನ ಬಿಜೆಪಿ ಎರಡು ಪಂಗಡಗಳನ್ನು ಹೊಂದಿದೆ. ಅವೆರಡೂ ಜನರನ್ನು ವಂಚಿಸಿವೆ ಎಂದು ಆರೋಪಿಸಿದರು.
ಪ್ರಧಾನಿ ಎಂದಾದರೂ ಚಹಾ ತೋಟಕ್ಕೆ ಹೋಗಿದ್ದೀರಾ?: ಪ್ರಿಯಾಂಕಾ ಪ್ರಶ್ನೆ
ಅಸ್ಸಾಂ ಬಿಜೆಪಿ ನಾಯಕತ್ವವನ್ನು 'ದೃತರಾಷ್ಟ್ರ' ಮತ್ತು 'ಶಕುನಿ'ಗೆ ಹೋಲಿಸಿದ ಪ್ರಿಯಾಂಕಾ, ಯಾರನ್ನೂ ನೇರವಾಗಿ ಹೆಸರಿಸಲಿಲ್ಲ. 'ಅಸ್ಸಾಂ ಸರ್ಕಾರದಲ್ಲಿ ಶಕುನಿ ಮಾಮಾದಂತಹ ನಾಯಕ ಮತ್ತು ಒಬ್ಬ ದೃತರಾಷ್ಟ್ರ ಇದ್ದಾನೆ. ಅವರಿಬ್ಬರೂ ಮತ್ತು ಬಿಜೆಪಿ ಅಸ್ಸಾಂನ ಜನರಿಗೆ ದ್ರೋಹ ಮಾಡಿದ್ದಾರೆ' ಎಂದು ಟೀಕಿಸಿದರು.
'ಆ ದೃತರಾಷ್ಟ್ರನನ್ನು ಒಂದು ಕಾಲದಲ್ಲಿ 'ಜತೀಯ ನಾಯಕ್' (ಜನರ ನಾಯಕ) ಎಂದು ಕರೆಯಲಾಗಿತ್ತು. ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿ, ಆದರೆ ಅದನ್ನು ಮಾಡದೆ ಆರು ಸಮುದಾಯಗಳಿಗೆ ಅವರು ದ್ರೋಹ ಎಸಗಿದ್ದಾರೆ' ಎಂದು ಆರೋಪಿಸಿದರು.
'ಮತ್ತೊಬ್ಬ ನಾಯಕ ಶಕುನಿ ಮಾಮಾನಂತೆ. ಆತ ಜನರನ್ನು ವಂಚಿಸುವುದನ್ನೇ ಮಾಡುವ ಸರ್ಕಾರವನ್ನು ನಡೆಸುತ್ತಿದ್ದಾನೆ. ಬಿಜೆಪಿಗೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಇನ್ನೂ ನಿರ್ಧರಿಸಲು ಸಾಧ್ಯವಾಗಿಲ್ಲ. ಅವರಿಗೆ ತಮ್ಮದೇ ಮುಖ್ಯಮಂತ್ರಿಯನ್ನು ಗೌರವಿಸುವುದು ಸಾಧ್ಯವಾಗುತ್ತಿಲ್ಲ ಮತ್ತು ಹೆಸರು ಹೇಳಲು ಆಗುತ್ತಿಲ್ಲ. ಪಕ್ಷದಲ್ಲಿ ಸ್ಥಿರತೆ ಮತ್ತು ಏಕತೆ ಇಲ್ಲವೆಂದರೆ ಅವರು ಅಸ್ಸಾಂನಲ್ಲಿ ಹೇಗೆ ಸ್ಥಿರತೆ ತರುತ್ತಾರೆ ಮತ್ತು ಸ್ಥಿರ ಸರ್ಕಾರ ನಡೆಸುವುದಾಗಿ ಹೇಗೆ ಭರವಸೆ ನೀಡುತ್ತಾರೆ?' ಎಂದು ಪ್ರಶ್ನಿಸಿದರು.