ಅಸ್ಸಾಂ: ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರ ಮೇಲೆ ಪೊಲೀಸ್ ಗುಂಡಿನ ದಾಳಿ; ಇಬ್ಬರು ಸಾವು
ಗುವಾಹಾಟಿ, ಸೆಪ್ಟೆಂಬರ್ 23: ಅಸ್ಸಾಂನ ದರಾಂಗ್ ಜಿಲ್ಲೆಯ ಸಿಪಜರ್ ಪ್ರದೇಶದ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪೊಲೀಸರು ಸ್ಥಳೀಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಅಸ್ಸಾಂ ಪೋಲಿಸರು ವ್ಯಕ್ತಿಯ ಮೇಲೆ ಗುಂಡು ಹಾರಿಸಿ, ಆತನನ್ನು ಥಳಿಸಿದ್ದು, ಅಪರಿಚಿತ ಛಾಯಾಗ್ರಾಹಕ ಕೂಡ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾನೆ. ವ್ಯಕ್ತಿಯ ಎದೆಗೆ ಗುಂಡು ಹಾರಿ ಗಾಯಗೊಂಡಿದ್ದಾನೆ.
ಪೊಲೀಸ್ ಮತ್ತು ಸ್ಥಳೀಯ ನಿವಾಸಿಗಳ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿದ್ದರೆ, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ಎನ್ಡಿಟಿವಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. ಇಬ್ಬರು ನಾಗರಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಭತ್ತು ಪೊಲೀಸರು ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಕೃಷಿ ಯೋಜನೆಗೆ ಅಸ್ಸಾಂ ಸರ್ಕಾರ ಮರು ಸ್ವಾಧೀನಪಡಿಸಿಕೊಳ್ಳಲು ಬಯಸುವ ಭೂಮಿಯಿಂದ "ಅಕ್ರಮ ಅತಿಕ್ರಮಣಕಾರರನ್ನು' ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಘರ್ಷಣೆ ನಡೆದಿದೆ ಎನ್ನಲಾಗಿದೆ. ಪೊಲೀಸರು ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ನಂತರ ಆತನನ್ನು ಥಳಿಸಿದ್ದಾರೆ ಎಂದು ವೈರ್ ವರದಿ ಮಾಡಿದೆ.
ಇನ್ನು ಸ್ಕ್ರಾಲ್ ವರದಿ ಪ್ರಕಾರ, "ಅಸ್ಸಾಂ ಸರ್ಕಾರವು ಬುಧವಾರ ತಡರಾತ್ರಿ ಕಿರಾಕೋಟಾಚಾರ್ ನಿವಾಸಿಗಳಿಗೆ ಹೊರಹೋಗುವಂತೆ ಸೂಚನೆ ನೀಡಿತ್ತು. ಅದನ್ನು ವಿರೋಧಿಸಿ ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿತು. ಗ್ರಾಮಸ್ಥರನ್ನು ಹೊರಹಾಕುವ ಮೊದಲು ಪುನರ್ವಸತಿ ಮಾಡಲಾಗುವುದು ಎಂದು ಸ್ಥಳೀಯ ಆಡಳಿತ ಭರವಸೆ ನೀಡಿತ್ತು ಎಂದು ವರದಿ ಮಾಡಿದೆ. ಆದರೆ ನಿವಾಸಿಗಳು ಪ್ರದೇಶವನ್ನು ತೊರೆಯುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು," ಎಂದು ಅಲ್ಲಿನ ನಿವಾಸಿಗಳು ಸ್ಕ್ರಾಲ್ಗೆ ತಿಳಿಸಿದ್ದಾರೆ.
ಎನ್ಡಿಟಿವಿ ವರದಿ ಪ್ರಕಾರ, "ಸ್ಥಳೀಯರು ಪೊಲೀಸರ ಮೇಲೆ ಕಲ್ಲುಗಳಿಂದ ದಾಳಿ ಮಾಡಿದ್ದಾರೆ ಇದರಿಂದ ಪೊಲೀಸ್ ಬಲ ಪ್ರಯೋಗಿಸಬೇಕಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ನಮ್ಮ ಒಂಭತ್ತು ಪೊಲೀಸರು ಗಾಯಗೊಂಡಿದ್ದು, ಇಬ್ಬರು ನಾಗರಿಕರು ಕೂಡ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಈಗ ಪರಿಸ್ಥಿತಿ ತಿಳಿಯಾಗಿದೆ," ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅವರು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಸಹೋದರನಾಗಿದ್ದಾರೆ.
ಎಸ್ಪಿ ಸುಶಾಂತ ಬಿಸ್ವಾ ಶರ್ಮಾ ಮಾತನಾಡಿ, "ಘರ್ಷಣೆ ನಡೆದ ಸ್ಥಳದಲ್ಲಿದ್ದೆ ಮತ್ತು ಅಲ್ಲಿನ ನಿವಾಸಿಗಳನ್ನು ಹೊರಹಾಕುವ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಪ್ರದೇಶವು ದೊಡ್ಡದಾಗಿದ್ದು, ನಾನು ಇನ್ನೊಂದು ಕಡೆ ಇದ್ದೆ. ನಾನು ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ," ಎಂದು ಪೊಲೀಸರು ಗುಂಡು ಹಾರಿಸಿದ ಬಗ್ಗೆ ಹಾರಿಕೆ ಉತ್ತರ ನೀಡಿದರು.
ಇನ್ನು ಸಿಎಂ ಹಿಮಾಂತ ಬಿಸ್ವಾ ಶರ್ಮಾ ಮಾತನಾಡಿ, "ಸ್ಥಳೀಯರು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ, ಈಟಿಗಳಿಂದ ಮತ್ತು ಇತರ ವಸ್ತುಗಳಿಂದ ದಾಳಿ ಮಾಡಿದ್ದಾರೆ. ಹಿಂಸಾಚಾರದ ನಂತರ ಮತ್ತೆ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯ ಪುನರಾರಂಭಗೊಂಡಿದೆ ಮತ್ತು ನಾಳೆಯೂ ಮುಂದುವರಿಯುತ್ತದೆ," ಎಂದು ಗುವಾಹಟಿಯಲ್ಲಿ ಪತ್ರಕರ್ತರಿಗೆ ಹೇಳಿದರು.
ಪೂರ್ವ ಬಂಗಾಳ ಮೂಲದ ಮುಸ್ಲಿಂರು ಹೆಚ್ಚಾಗಿ ವಾಸಿಸುವ ಹಳ್ಳಿಯಾದ ಧಲ್ಪುರದಲ್ಲಿ ಕಳೆದ ಮೂರು ತಿಂಗಳಿನಿಂದ ಸರಣಿ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಅದೇ ರೀತಿ ಗುರುವಾರವೂ ಈ ಕಾರ್ಯಾಚರಣೆ ನಡೆದಿದೆ. ಸೋಮವಾರ ನಡೆಸಿದ ನಿವಾಸಿಗಳನ್ನು ತೆರವುಗೊಳಿಸುವ ಕಸರತ್ತಿನಲ್ಲಿ ಅಸ್ಸಾಂ ಸರ್ಕಾರವು 8000 ಬಿಘಾ ಭೂಮಿಯನ್ನು ಮರಳಿ ಪಡೆದುಕೊಂಡಿದೆ ಎಂದು ಹೇಳಿಕೊಂಡಿದ್ದು, ಕನಿಷ್ಠ 800 ಕುಟುಂಬಗಳು ನಿರಾಶ್ರಿತರಾಗಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂಪುಟ ಸಭೆಯಲ್ಲಿ 77,000 ಬಿಘಾ ಸರ್ಕಾರಿ ಭೂಮಿಯನ್ನು ಬಳಸಿಕೊಳ್ಳಲು ಸಮಿತಿಯೊಂದನ್ನು ಅನುಮೋದಿಸಿದ ನಂತರ, ಕೃಷಿ ಉದ್ದೇಶಗಳಿಗಾಗಿ ಕಳೆದ ಜೂನ್ನಲ್ಲಿ ಮೊದಲ ಸುತ್ತಿನ ತೆರವುಗೊಳಿಸುವ ಕಾರ್ಯ ನಡೆಸಲಾಯಿತು. ದರಾಂಗ್ನ ಸಿಪಜರ್, ಗೋರುಖುಟಿಯಲ್ಲಿನ ಅತಿಕ್ರಮಣಕಾರರಿಂದ ಮುಕ್ತಗೊಳಿಸಲಾಗಿದೆ.
ರಾಹುಲ್
ಗಾಂಧಿ
ಖಂಡನೆ
ಗುರುವಾರದ
ಪೊಲೀಸ್
ಮತ್ತು
ಸ್ಥಳೀಯ
ನಿವಾಸಿಗಳ
ಘರ್ಷಣೆಗೆ
ಕಾಂಗ್ರೆಸ್
ನಾಯಕ
ರಾಹುಲ್
ಗಾಂಧಿ
ಪ್ರತಿಕ್ರಿಯಿಸಿದ್ದು,
"ಪೊಲೀಸರ
ದೌರ್ಜನ್ಯವನ್ನು
ಖಂಡಿಸುತ್ತೇನೆ.
ಅಸ್ಸಾಂ
ರಾಜ್ಯ
ಸರ್ಕಾರದ
ಪ್ರಾಯೋಜಿಕತ್ವದಲ್ಲಿ
ಕಿಡಿ
ಹೊತ್ತಿಕೊಂಡಿದೆ,"
ಎಂದು
ಟ್ವೀಟ್
ಮಾಡಿದ್ದು,
"ನಾನು
ಅಸ್ಸಾಂ
ರಾಜ್ಯದ
ನಮ್ಮ
ಸಹೋದರ
ಸಹೋದರಿಯರ
ಜೊತೆ
ಒಗ್ಗಟ್ಟಿನಿಂದ
ನಿಂತಿದ್ದೇನೆ.
ಭಾರತದ
ಯಾವುದೇ
ಪುತ್ರರು
ಈ
ಘಟನೆಯನ್ನು
ಒಪ್ಪಿಕೊಳ್ಳಲ್ಲ,"
ಎಂದು
ರಾಹುಲ್
ಗಾಂಧಿ
ಹೇಳಿದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿವಾಸಿಗಳನ್ನು ತೆರವುಗೊಳಿಸುತ್ತಿರುವುದು ಅಮಾನವೀಯ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳ ಉಲ್ಲಂಘನೆಯಾಗಿದೆ ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಕೃಪೆ: ವೈರ್