ಭೂ ಮಾಫಿಯಾ ವರದಿಗಾರಿಕೆ: ಹಾಡಹಗಲೇ ಲೈಟ್ ಕಂಬಕ್ಕೆ ಕಟ್ಟಿ ಪತ್ರಕರ್ತನ ಮೇಲೆ ಹಲ್ಲೆ
ಗುವಾಹಟಿ, ನವೆಂಬರ್ 19: ಅಕ್ರಮ ಚಟುವಟಿಕೆಯ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತನನ್ನು ಲೈಟ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಅಸ್ಸಾಂ ರಾಜಧಾನಿ ಗುವಾಹಟಿಯಿಂದ 45 ಕಿಮೀ ದೂರದಲ್ಲಿರುವ ಮಿರ್ಜಾದಲ್ಲಿ ನಡೆದಿದೆ.
ಭೂ ಮಾಫಿಯಾದ ಕುರಿತು ವರದಿ ಮಾಡಲು ಮಿರ್ಜಾಕ್ಕೆ ಭಾನುವಾರ ತೆರಳಿದ್ದ ಪತ್ರಕರ್ತ ಮಿಲನ್ ಮಹಾಂತ ಅವರನ್ನು ಗ್ಯಾಂಬ್ಲರ್ಗಳು ಮತ್ತು ಭೂಮಾಫಿಯಾ ಗ್ಯಾಂಗ್ನ ಸದಸ್ಯರು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದರು. 42 ವರ್ಷದ ಮಿಲನ್, ಈ ಘಟನೆ ನಡೆದ ಸ್ಥಳದಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಅಮ್ರಂಗಾ ಗ್ರಾಮದವರಾಗಿದ್ದಾರೆ. ಅವರು 20 ವರ್ಷಗಳಿಂದ ಅಸೋಮಿಯಾ ಪ್ರತಿದಿನ್ ಎಂಬ ಅಸ್ಸಾಂ ದಿನಪತ್ರಿಕೆಯ ವರದಿಗಾರರಾಗಿದ್ದಾರೆ.
'ಅವರು ನನ್ನನ್ನು ಕೊಲ್ಲಲು ಬಯಸಿದ್ದರು ಎನಿಸುತ್ತದೆ. ನಾನು ಅವರ ವಿರುದ್ಧ ಸರಣಿ ವರದಿಗಳನ್ನು ಬರೆದಿದ್ದೆ. ನನ್ನನ್ನು ರಕ್ಷಿಸಲು ಬಂದ ಜನರ ಮೇಲೆಯೂ ಅವರು ದಾಳಿ ಮಾಡಲು ಮುಂದಾಗಿದ್ದರು. ಘಟನೆ ನಡೆದು ಮೂರು ದಿನಗಳಾದರೂ ಪೊಲೀಸರು ನನ್ನ ಮನೆಗೆ ಬಂದು ಯಾವ ವಿವರವನ್ನೂ ಕೇಳಿಲ್ಲ' ಎಂದು ಮಿಲನ್ ಆರೋಪಿಸಿದ್ದಾರೆ.
ಭಾನುವಾರ ನಡೆದ ಹಲ್ಲೆಯೇ ಕೊನೆಯಾಗದೆ ಇರಬಹುದು ಎಂದು ಅವರ ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಖಂಡಿಸಿ ಸ್ಥಳೀಯ ಪತ್ರಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮೂರು ದಿನಗಳಲ್ಲಿ ಕೇವಲ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
'ಒಬ್ಬ ವರದಿಗಾರನನ್ನು ಹಾಡ ಹಗಲೇ ಹಿಡಿದು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರಿಗೆ ಇನ್ನೂ ಪ್ರಮುಖ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ. ಪತ್ರಕರ್ತರ ರಕ್ಷಣೆಗೆ ನಮಗೆ ಹೊಸ ಕಾನೂನು ಬೇಕಾಗಿದೆ' ಎಂದು ಮಿರ್ಜಾ ಮೂಲದ ಪತ್ರಕರ್ತ ನಿರೆನ್ ಮಾಲಿ ಹೇಳಿದ್ದಾರೆ.