ಮಿಜೋರಾಂ ಗಡಿ ವಿವಾದ: ಸುಪ್ರೀಂ ಕೋರ್ಟ್ ಕದ ತಟ್ಟಲು ಮುಂದಾದ ಅಸ್ಸಾಂ
ನವದೆಹಲಿ, ಆ.01: ಅಸ್ಸಾಂ ಸರ್ಕಾರ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ಗೆ ಹೋಗಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಿಜೋರಾಂ ಗಡಿ ವಿವಾದದ ನಡುವೆ ಹೇಳಿದ್ದಾರೆ. ಮಿಜೋರಾಂ ಪೊಲೀಸರು ತಮ್ಮ ವಿರುದ್ಧ ಎಫ್ಐಆರ್ ದಾಖಲಿಸುವ ಕುರಿತು ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಎಫ್ಐಆರ್ ದಾಖಲಿಸಿದರೆ ಸಮಸ್ಯೆ ಬಗೆಹರಿಯುವುದಾದರೆ, ಪೊಲೀಸ್ ಠಾಣೆಗೆ ಹಾಜರಾಗಲು ಸಿದ್ದ ಎಂದಿದ್ದಾರೆ.
"ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದರಿಂದ ಸಮಸ್ಯೆ ಬಗೆಹರಿದರೆ ನನಗೆ ಸಂತೋಷವಾಗುತ್ತದೆ, ನಾನು ಹೋಗಿ ಯಾವುದೇ ಪೊಲೀಸ್ ಠಾಣೆಗೆ ಹಾಜರಾಗುತ್ತೇನೆ. ಆದರೆ ನಮ್ಮ ಅಧಿಕಾರಿಗಳನ್ನು ತನಿಖೆ ಮಾಡಲು ನಾನು ಅನುಮತಿಸುವುದಿಲ್ಲ," ಎಂದು ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಅಸ್ಸಾಂ-ಮಿಜೋರಾಂ ಗಡಿ ವಿವಾದ: ಇಲ್ಲಿದೆ ಸಂಪೂರ್ಣ ಮಾಹಿತಿ
ಅಸ್ಸಾಂ ಸರ್ಕಾರವು ನೆರೆಯ ರಾಜ್ಯದೊಂದಿಗಿನ ಗಡಿ ವಿವಾದವನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ಅನ್ನು ಶೀಘ್ರದಲ್ಲೇ ಸಂಪರ್ಕಿಸಲಿದೆ ಎಂದು ತಿಳಿಸಿದರು. ಹಾಗೆಯೇ ಮಿಜೋರಾಂ ಪೊಲೀಸರು ಎಫ್ಐಆರ್ನಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಯತ್ನದ ಆರೋಪ ಹೊರಿಸಿರುವ ಶರ್ಮಾ, ಟ್ವಿಟ್ಟರ್ ಪೋಸ್ಟ್ನಲ್ಲಿ ಈಶಾನ್ಯದ ಆತ್ಮವನ್ನು ಜೀವಂತವಾಗಿಡುವ ಬಗ್ಗೆ ಮಾತನಾಡಿದ್ದಾರೆ.
"ಈಶಾನ್ಯದ ಉತ್ಸಾಹವನ್ನು ಜೀವಂತವಾಗಿರಿಸುವುದರ ಮೇಲೆ ನಮ್ಮ ಮುಖ್ಯ ಗಮನವಿದೆ. ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಏನಾಯಿತು ಎಂಬುದು ಎರಡೂ ರಾಜ್ಯಗಳ ಜನರಿಗೆ ಸ್ವೀಕಾರಾರ್ಹವಲ್ಲ. ಮಿಜೋರಾಂ ಮುಖ್ಯಮಂತ್ರಿ ತಮ್ಮ ಕ್ವಾರಂಟೈನ್ ಬಳಿಕ ಕರೆ ಮಾಡುವುದಾಗಿ ತಿಳಿಸಿದ್ದಾರೆ. ಗಡಿ ವಿವಾದಗಳನ್ನು ಚರ್ಚೆಯ ಮೂಲಕ ಮಾತ್ರ ಪರಿಹರಿಸಬಹುದು," ಎಂದು ಶರ್ಮಾ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಈಶಾನ್ಯ ರಾಜ್ಯವಾದ ಅಸ್ಸಾಂ ಮತ್ತು ಮಿಜೋರಾಂನ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರ ನಡುವೆ ರಕ್ತಸಿಕ್ತ ಘರ್ಷಣೆ ನಡೆದಿತ್ತು. ಈ ಉಭಯ ರಾಷ್ಟ್ರಗಳ ನಡುವಿನ ಗುಂಡಿನ ಚಕಮಕಿಯಲ್ಲಿ 6 ಅಸ್ಸಾಂ ಪೊಲೀಸರು ಸಾವನ್ನಪ್ಪಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಮಿಜೋರಾಂ ಪ್ರಕರಣ ದಾಖಲು ಮಾಡಿದೆ. ಈ ಎಫ್ಐಆರ್ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ನೆರೆಯ ರಾಜ್ಯದ ಇತರ ಉನ್ನತ ಅಧಿಕಾರಿಗಳನ್ನು ಹೆಸರಿಸಿದೆ ಎಂದು ವರದಿ ತಿಳಿಸಿದೆ.
ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಮಿಜೋರಾಂ ಪೊಲೀಸರು
ಅಸ್ಸಾಂನ ಕ್ಯಾಚಾರ್ ನ ಗಡಿಭಾಗದಲ್ಲಿರುವ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗ್ಟೆ ಪೊಲೀಸ್ ಠಾಣೆಯಲ್ಲಿ "ಕೊಲೆ ಯತ್ನ" ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ಸಲ್ಲಿಸಲಾಗಿದೆ. ಅಸ್ಸಾಂ ಪೊಲೀಸ್ ಸಿಬ್ಬಂದಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಘಟನೆಯ ದಿನ ಮಿಜೋರಾಂ ಪೊಲೀಸರೊಂದಿಗೆ "ಸೌಹಾರ್ದಯುತ ಸಂವಾದ" ನಡೆಸಲು ನಿರಾಕರಿಸಿದರು ಎಂದು ವರದಿ ತಿಳಿಸಿದೆ.
"ಈ ಹಿಂಸಾಚಾರವು ಅಸ್ಸಾಂ ಮುಖ್ಯಮಂತ್ರಿ ಸೂಚನೆಯಂತೆ ನಡೆದಿದೆ. ಗುಡಾರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಅಸ್ಸಾಂ ಪೊಲೀಸರು ಶಿಬಿರ ನಿರ್ಮಾಣಕ್ಕಾಗಿ ಸ್ಥಳಕ್ಕೆ ಬಂದಿದ್ದರು. ಇದು ಮಿಜೋರಾಂ ಬಿಒಪಿಯನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವ ಉದ್ದೇಶವನ್ನು ಸ್ಪಷ್ಟವಾಗಿ ತೋರಿಸಿದೆ. ಏಕೆಂದರೆ ಅಸ್ಸಾಂ ಪೊಲೀಸರೊಂದಿಗೆ ವಾಹನಗಳ ಬೆಂಗಾವಲು ಆಂಬುಲೆನ್ಸ್ ಮತ್ತು ಸುಮಾರು 20 ವಾಹನಗಳು ಇದ್ದವು," ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಮಿಜೋರಾಂ ವಿವಾದದ ನಡುವೆ ನಾಗಾಲ್ಯಾಂಡ್ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ ಹಾಡಿದ ಅಸ್ಸಾಂ
ಈ ನಡುವೆ ಈ ವಿಚಾರದಲ್ಲಿ ಮಾತನಾಡಿರುವ ಮಿಜೋರಾಂ ಮುಖ್ಯಮಂತ್ರಿ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ಥಂಗಾ, ಅಸ್ಸಾಂನೊಂದಿಗಿನ ಗಡಿ ವಿವಾದವನ್ನು ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜೊತೆ ದೂರವಾಣಿ ಮೂಲಕ ಚರ್ಚಿಸಿದ ನಂತರ ಈ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಪರಿಸ್ಥಿತಿಯನ್ನು ಹದಗೆಡಿಸದಂತೆ ಮಿಜೋರಾಂ ಜನರಿಗೆ ಮನವಿ ಮಾಡಿದ್ದಾರೆ.
"ಕೇಂದ್ರ ಗೃಹ ಸಚಿವ ಮತ್ತು ಅಸ್ಸಾಂ ಮುಖ್ಯಮಂತ್ರಿಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿದಂತೆ, ಮಿಜೋರಾಂ-ಅಸ್ಸಾಂ ಗಡಿ ಸಮಸ್ಯೆಯನ್ನು ಅರ್ಥಪೂರ್ಣ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲು ನಾವು ಒಪ್ಪಿಕೊಂಡಿದ್ದೇವೆ," ಎಂದು ಮಿಜೋರಾಂ ಮುಖ್ಯಮಂತ್ರಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ಹಾಗೆಯೇ ಈ ಮಿಜೋರಾಂ ವಿವಾದದ ನಡುವೆ ನಾಗಾಲ್ಯಾಂಡ್ ಜೊತೆಗಿನ ಗಡಿ ವಿವಾದಕ್ಕೆ ಅಸ್ಸಾಂ ಅಂತ್ಯ ಹಾಡಿದೆ. ಉಭಯ ನಡುವಿನ ಉದ್ವಿಗ್ನತೆಯನ್ನು ತಗ್ಗಿಸುವ ಸಲುವಾಗಿ ಗಡಿ ಸ್ಥಳಗಳಿಂದ ತಮ್ಮ ಪಡೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಒಪ್ಪಂದಗಳಿಗೆ ಉಭಯ ರಾಜ್ಯಗಳು ಶನಿವಾರ ಸಹಿ ಹಾಕಿವೆ.
(ಒನ್ಇಂಡಿಯಾ ಸುದ್ದಿ)