ಅಸ್ಸಾಂನಲ್ಲಿ ನಿಲ್ಲದ ಪ್ರವಾಹ: ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಹಿಮಂತ್ ಶರ್ಮಾ ಭೇಟಿ
ಗುವಾಹಟಿ, ಜೂನ್ 29: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮಂಗಳವಾರವೂ ಭೀಕರವಾಗಿದೆ. ಕಳೆದ 24 ಗಂಟೆಗಳಲ್ಲಿ ಇನ್ನೂ ಐದು ಜನರು ಸಾವನ್ನಪ್ಪಿದ ನಂತರ ರಾಜ್ಯದಲ್ಲಿ ಪ್ರವಾಹದಿಂದಾಗಿ ಸಾವಿನ ಸಂಖ್ಯೆ 139 ಕ್ಕೆ ಏರಿದೆ. ಕ್ಯಾಚಾರ್ ಜಿಲ್ಲೆಯಲ್ಲಿ ಮೂರು ಮತ್ತು ಮೋರಿಗಾಂವ್ ಮತ್ತು ಧುಬ್ರಿಯಲ್ಲಿ ತಲಾ ಒಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ಅಸ್ಸಾಂನ 28 ಜಿಲ್ಲೆಗಳಲ್ಲಿ 24.92 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸೋಮವಾರ ರಾಜ್ಯದ 22 ಜಿಲ್ಲೆಗಳಲ್ಲಿ 21.52 ಲಕ್ಷ ಜನರು ಪ್ರವಾಹ ಪೀಡಿತರಾಗಿದ್ದರು.
ಅಸ್ಸಾಂ ಪ್ರವಾಹ: 4 ಮಕ್ಕಳು ಸೇರಿ 5 ಜನ ಸಾವು- 22 ಲಕ್ಷ ಜನ ಸಂತ್ರಸ್ತರು
ಬ್ರಹ್ಮಪುತ್ರ, ಬೇಕಿ, ಕೊಪಿಲಿ, ಬರಾಕ್, ಕುಶಿಯಾರ ನದಿಗಳು ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಆದರೆ, ಅಸ್ಸಾಂನ ಇತರ ಬಹುತೇಕ ನದಿಗಳಲ್ಲಿ ನೀರು ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ.
ಮಂಗಳವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತೀವ್ರವಾಗಿ ಬಾಧಿತವಾಗಿರುವ ಬಜಾಲಿ ಮತ್ತು ಬರ್ಪೇಟಾ ಜಿಲ್ಲೆಗಳಿಗೆ ಭೇಟಿ ನೀಡಿದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಅವರು ಪರಿಹಾರ ಕಾರ್ಯದ ಭರವಸೆ ನೀಡಿದರು.
ಪ್ರವಾಹದಿಂದ ಭೂಕುಸಿತ, ಬೆಳೆನಾಶ
ಪಹುಮಾರಾ ನದಿಯ ಒಡ್ಡು ಬಲಪಡಿಸಲು ಮತ್ತು ಅದರ ಮೇಲೆ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಂಬತ್ತು ಕೋಟಿ ರುಪಾಯಿ ಮಂಜೂರು ಮಾಡಿದೆ ಎಂದು ವರದಿಯಾಗಿದೆ. ರಾಜ್ಯ ಪ್ರವಾಸೋದ್ಯಮ ಸಚಿವ ಜಯಂತ ಮಲ್ಲ ಬರುವಾ ಸಿಲ್ಚಾರ್ನಲ್ಲಿ ಪ್ರವಾಹ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.
ರಾಷ್ಟ್ರೀಯ ಆರೋಗ್ಯ ಮಿಷನ್ (NHM) ತಂಡವು ಸಹ ಸಿಲ್ಚಾರ್ಗೆ ಭೇಟಿ ನೀಡಿ ಸಂತ್ರಸ್ತರಿಗೆ ಸರಿಯಾದ ವೈದ್ಯಕೀಯ ಸೌಲಭ್ಯವನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಿದೆ. ರಾಜ್ಯಾದ್ಯಂತ 72 ಕಂದಾಯ ವೃತ್ತಗಳಲ್ಲಿರುವ ಒಟ್ಟು 2,389 ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ ಎಂದು ವರದಿಯಾಗಿದೆ.
ರಾಜ್ಯಾದ್ಯಂತ 555 ಪರಿಹಾರ ಶಿಬಿರಗಳಲ್ಲಿ 1.70 ಲಕ್ಷ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ ಒಟ್ಟು 155 ರಸ್ತೆಗಳು ಮತ್ತು ಐದು ಸೇತುವೆಗಳು ಹಾನಿಗೊಳಗಾಗಿವೆ. ಮಂಗಳವಾರ, ಕರೀಂಗಂಜ್ ಮತ್ತು ಲಖಿಂಪುರದಲ್ಲಿ ಎರಡು ಭೂಕುಸಿತಗಳು ವರದಿಯಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 85,673.62 ಹೆಕ್ಟೇರ್ ನಲ್ಲಿರುವ ಬೆಳೆ ಪ್ರವಾಹದಿಂದ ನಾಶವಾಗಿದೆ.
Recommended Video
ಈಶಾನ್ಯ ಭಾರತದಲ್ಲಿ ಮಳೆ ಮುಂದುವರೆದಿದೆ, ಆದರೆ ಭಾರಿ ಪ್ರಮಾಣದಲ್ಲಿ ಮಳೆಯಾಗದಿರುವುದು ಅಸ್ಸಾಂನ ಪ್ರವಾಹ ಕಡಿಮೆಯಾಗುವ ಭರವಸೆ ಮೂಡಿಸಿದೆ. ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಜನರ ಜೊತೆ ಪ್ರಾಣಿಗಳೂ ಸಂಕಷ್ಟಕ್ಕೆ ಸಿಲುಕಿವೆ. ಕಾಜಿರಂಗ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಪ್ರವಾಹ ಮಾರಕವಾಗಿದೆ.