ಅಸ್ಸಾಂ ಪ್ರವಾಹ ಪರಿಸ್ಥಿತಿ ಚಿಂತಾಜನಕ: ಇದುವರೆಗೆ 55 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತ
ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ನೀರಿನ ಮಟ್ಟ ಏರಿಕೆಯಿಂದ ಅಸ್ಸಾಂ ಭೀಕರ ಪರಿಸ್ಥಿತಿಯಲ್ಲಿದೆ. ಇದರಿಂದಾಗಿ 89 ಜನರು ಪ್ರಾಣ ಕಳೆದುಕೊಂಡಿದ್ದು 32 ಜಿಲ್ಲೆಗಳಲ್ಲಿ 55 ಲಕ್ಷಕ್ಕೂ ಹೆಚ್ಚು ಜನರು ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ರೈಲಿನಲ್ಲಿ ನಾಗಾವ್ಗೆ ಪ್ರಯಾಣಿಸಿ, ಅವರು ಅಲ್ಲಿನ ಕೆಲವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಪ್ರವಾಹದ ಅಲೆಯಿಂದ ನಾಗಾಂವ್ ತೀವ್ರವಾಗಿ ಬಾಧಿತವಾಗಿದ್ದು, 4,57,381 ಕ್ಕೂ ಹೆಚ್ಚು ಜನರು ಪ್ರವಾಹದ ಪ್ರಭಾವಕ್ಕೆ ಒಳಗಾಗಿದ್ದಾರೆ ಮತ್ತು 15,188 ಸಂತ್ರಸ್ತರು 147 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
"ಗುವಾಹಟಿಯಿಂದ ಚಾಪರ್ಮುಖ್ ಮತ್ತು ಕಂಪುರ್ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ರೈಲು ಪ್ರಯಾಣವನ್ನು ಕೈಗೊಂಡಿದ್ದೇನೆ. ಈ ಪ್ರಯಾಣವು ರೈಲ್ವೆ ಹಳಿಗಳ ಉದ್ದಕ್ಕೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಹತ್ತಿರದಿಂದ ನೋಡಲು ನನಗೆ ಅನುವು ಮಾಡಿಕೊಟ್ಟಿತು, ಇದು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ಮಧ್ಯಪ್ರವೇಶಿಸಲು ನಮಗೆ ಸಹಾಯ ಮಾಡಿದೆ" ಶರ್ಮಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಪರಿಹಾರ ಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆದ ಸಿಎಂ
ಕೊಪಿಲಿಯ ಪ್ರವಾಹದಿಂದಾಗಿ ನಾಗಾ ಜಿಲ್ಲೆಯ ದೊಡ್ಡ ಪ್ರದೇಶಗಳು ಜಲಾವೃತಗೊಂಡಿದ್ದು, ಮುಂದೆ ಇಂತಹ ಅನಾಹುತ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಶರ್ಮಾ ಅವರು ಚಾಪರ್ಮುಖ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದರು ಮತ್ತು ಅವರಿಗೆ ಒದಗಿಸಲಾದ ಪರಿಹಾರ ಸಾಮಗ್ರಿಗಳ ಬಗ್ಗೆ ಮಾಹಿತಿ ನೀಡಿದರು.
"ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಿದ್ದೇವೆ ಜೊತೆಗೆ ಸಂತ್ರಸ್ತ ಜನರಿಗೆ ಸಾಕಷ್ಟು ಪರಿಹಾರವನ್ನು ನೀಡಲು ನಾನು ಜಿಲ್ಲಾಡಳಿತವನ್ನು ಕೇಳಿದೆ" ಎಂದು ಅವರು ಹೇಳಿದರು. ಬರಾಕ್ ಕಣಿವೆಯ ಮೂರು ಜಿಲ್ಲೆಗಳಲ್ಲಿ - ಕ್ಯಾಚಾರ್, ಕರೀಮ್ಗಂಜ್ ಮತ್ತು ಹೈಲಕಂಡಿನಲ್ಲಿ ಬರಾಕ್ ಮತ್ತು ಕುಶಿಯಾರಾ ನದಿಗಳ ಹೆಚ್ಚುತ್ತಿರುವ ನೀರಿನ ಮಟ್ಟದಿಂದ ಕಣಿವೆಯಲ್ಲಿನ ವಿಶಾಲವಾದ ಭೂಮಿಯನ್ನು ಮುಳುಗಿಸಿದೆ. ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅವರು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ರಕ್ಷಣಾ ಕಾರ್ಯ
ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಕ್ಯಾಚಾರ್ ಜಿಲ್ಲೆಗಳಲ್ಲಿ ಕಾರ್ಯ ನಿರತವಾಗಿದೆ. ಉಳಿದ ಎರಡು ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಇತರ ಏಜೆನ್ಸಿಗಳ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ.
ಕ್ಯಾಚಾರ್ ಜಿಲ್ಲೆಯ 506 ಹಳ್ಳಿಗಳಲ್ಲಿ ಒಟ್ಟು 2,16,851 ಜನರು, ಕರೀಂಗಂಜ್ನಲ್ಲಿ 1,47,649 ಮತ್ತು ಹೈಲಕಂಡಿಯಲ್ಲಿ ಸುಮಾರು ಒಂದು ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಚಾಲ್ತಿಯಲ್ಲಿರುವ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ಸಿಲ್ಚಾರ್ಗೆ ಭೇಟಿ ನೀಡಲಿದ್ದಾರೆ.
ಸಾರಿಗೆ ಸಚಿವ ಪರಿಮಳಾ ಸುಕ್ಲಬೈದ್ಯ ಅವರು ಕ್ಯಾಚಾರ್ನ ಸಿಲ್ಚಾರ್ನಲ್ಲಿ ಮೊಕ್ಕಾಂ ಹೂಡಿದ್ದು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಮೂರು ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಬರಾಕ್ ಕಣಿವೆಯಲ್ಲಿನ ಪ್ರವಾಹ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಭಾರತದಲ್ಲಿನ ಜಪಾನ್ ರಾಯಭಾರಿ ಸತೋಶಿ ಸುಜುಕಿ ಅವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಮತ್ತು ಅಸ್ಸಾಂ ಮತ್ತು ಮೇಘಾಲಯದಲ್ಲಿ ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದರು.
ಅಂತಹ ಕಷ್ಟದ ಸಮಯದಲ್ಲಿ ಜಪಾನ್ ಯಾವಾಗಲೂ ಜನರೊಂದಿಗೆ ನಿಂತಿದೆ ಎಂದು ಸತೋಶಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಪ್ರವಾಹದ ಅಲೆಯಿಂದ ಹಾನಿಗೊಳಗಾದ ರಾಜ್ಯ ಮತ್ತು ಜನರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಕ್ಕಾಗಿ ಸಿಎಂ ಅವರಿಗೆ ಧನ್ಯವಾದ ಅರ್ಪಿಸಿದರು.
"ನಮ್ಮ ರಾಜ್ಯದ ಅಭಿವೃದ್ಧಿಗೆ ಜಪಾನ್ ಮತ್ತು ಅದರ ಸುಂದರ ಜನರ ಬೆಂಬಲ ಮತ್ತು ಸಹಕಾರವನ್ನು ನಾವು ಪ್ರಾಮಾಣಿಕವಾಗಿ ಅಂಗೀಕರಿಸುತ್ತೇವೆ" ಎಂದು ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಶರ್ಮಾ ಹೇಳಿದ್ದಾರೆ. ಜೊತೆಗೆ ಆಯಿಲ್ ಇಂಡಿಯಾ ಲಿಮಿಟೆಡ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ನೀಡಲಾಗಿದೆ.
ಸಾವಿನ ಸಂಖ್ಯೆ 89 ಕ್ಕೆ ಏರಿಕೆ
ರಾಜ್ಯದ 36 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ ಪ್ರವಾಹದಿಂದ ಒಟ್ಟು 55, 42,053 ಜನರು ಸಂತ್ರಸ್ತರಾಗಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಪ್ರವಾಹದಿಂದಾಗಿ ಏಳು ಜನರು ಸಾವನ್ನಪ್ಪಿದ್ದಾರೆ, ಸಾವಿನ ಸಂಖ್ಯೆ 89 ಕ್ಕೆ ತಲುಪಿದೆ ಮತ್ತು ಕಾಮ್ರೂಪ್ನಲ್ಲಿ ಒಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಅತಿ ಹೆಚ್ಚು ಬಾಧಿತ ಜಿಲ್ಲೆಗಳ ಪೈಕಿ ಬಾರ್ಪೇಟಾದಲ್ಲಿ 12,51,359 ಜನರು ಪ್ರವಾಹದ ಅಡಿಯಲ್ಲಿ ತತ್ತರಿಸಿದ್ದರೆ, ಧುಬ್ರಿ 5,94,708 ಮತ್ತು ಡರ್ರಾಂಗ್ 5,47,421 ಜನರು ಸಂತ್ರಸ್ತರಾಗಿದ್ದಾರೆ. ನಿರಂತರ ಮಳೆಯಿಂದ ಉಂಟಾದ ವಿನಾಶಕಾರಿ ಪ್ರವಾಹ 5,577 ಹಳ್ಳಿಗಳ ಮೇಲೆ ಪರಿಣಾಮ ಬೀರಿದರೆ, 2,62,155 ಜನ ಸಂತ್ರಸ್ತರಾಗಿದ್ದಾರೆ. 862 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅದು ಹೇಳಿದೆ.
108306.18 ಹೆಕ್ಟೇರ್ ಕೃಷಿ ಪ್ರದೇಶ ಹಾನಿ
ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯದ ಪ್ರವಾಹ ಪೀಡಿತ ಜನರಿಗೆ 825 ಡೆಲಿವರಿ ಪಾಯಿಂಟ್ಗಳಿಂದ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಕೇಂದ್ರೀಯ ಜಲ ಆಯೋಗದ (ಸಿಡಬ್ಲ್ಯುಸಿ) ಬುಲೆಟಿನ್ ಪ್ರಕಾರ, ಕೊಪಿಲಿ ನದಿಯು ನಾಗಾಂವ್ ಜಿಲ್ಲೆಯ ಕಂಪುರದಲ್ಲಿ ಮತ್ತು ಬ್ರಹ್ಮಪುತ್ರ ನಿಮತಿಘಾಟ್, ತೇಜ್ಪುರ್, ಗುವಾಹಟಿ, ಕಾಮ್ರೂಪ್, ಗೋಲ್ಪಾರಾ ಮತ್ತು ಧುಬ್ರಿಯಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ. ಪುತಿಮರಿ, ಪಗ್ಲಾಡಿಯಾ, ಬೇಕಿ ಬರಾಕ್ ಮತ್ತು ಕುಶಿಯಾರಾ ಮುಂತಾದ ಹಲವಾರು ನದಿಗಳಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟವನ್ನು ಮೀರಿದೆ. ರಾಜ್ಯದಲ್ಲಿ 108306.18 ಹೆಕ್ಟೇರ್ ಕೃಷಿ ಪ್ರದೇಶ ಹಾನಿಗೊಳಗಾಇದ್ದು ಮತ್ತು 36,60,173 ಪ್ರಾಣಿಗಳು ಸಂಕಷ್ಟದಲ್ಲಿವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಹದಿಂದ 11 ಪ್ರಾಣಿಗಳು ಮುಳುಗಿ ಸಾವನ್ನಪ್ಪಿವೆ.
ಏಳು ಒಡ್ಡುಗಳು ಒಡೆದಿದ್ದು, 316 ರಸ್ತೆಗಳು ಮತ್ತು 20 ಸೇತುವೆಗಳು ಹಾನಿಗೊಳಗಾಗಿವೆ ಎಂದು ಬುಲೆಟಿನ್ ಹೇಳಿದೆ.
Recommended Video