ಅಸ್ಸಾಂ ಪ್ರವಾಹ; ರಸ್ತೆ ಸಂಪರ್ಕ ಕಡಿತ, ಅಗತ್ಯ ವಸ್ತುಗಳ ಬೆಲೆ ಏರಿಕೆ
ಗುಹಾವಟಿ, ಮೇ 17: ಭಾರೀ ಮಳೆಯ ಹೊಡೆತಕ್ಕೆ ಅಸ್ಸಾಂ ತತ್ತರಿಸಿದೆ. ಭೂಕುಸಿತ, ಪ್ರವಾಹದಿಂದ ಈವರೆಗೆ 7 ಮಂದಿ ಸಾವನ್ನಪ್ಪಿದ್ದು, 20 ಲಕ್ಷಕ್ಕೂ ಅಧಿಕ ಜನ ಸಂತ್ರಸ್ತರಾಗಿದ್ದು, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಸಾವಿನ ವರದಿ ಖಚಿತಪಡಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ಕ್ಯಾಚಾರ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ದಿಮಾ ಹಸಾವೋ ಜಿಲ್ಲೆಯಲ್ಲಿ 4, ಲಖಿಂಪುರ ಜಿಲ್ಲೆಯಲ್ಲಿಒಬ್ಬರು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.
ಅಸ್ಸಾಂ: 20 ಜಿಲ್ಲೆಗಳಲ್ಲಿ ಪ್ರವಾಹ- ಭೂಕುಸಿತದಿಂದ 1.97 ಲಕ್ಷ ಜನರು ಸಂತ್ರಸ್ತ
ಪ್ರವಾಹ, ಭೂಕುಸಿತದಿಂದ ಕ್ಯಾಚಾರ್ ಜಿಲ್ಲೆಯಲ್ಲಿ 6 ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನ ದಕ್ಷಿಣ ಭಾಗವನ್ನು ದೇಶದ ಇತರ ಭಾಗಗಳ ಜೊತೆ ಸಂಪರ್ಕಿಸಲು ಅಸ್ಸಾಂನ ಲುಮ್ಡಿಂಗ್-ಬದರ್ಪುರ್ ಮಾರ್ಗ ಪ್ರಮುಖವಾಗಿದ್ದು, ನಾಲ್ಕು ದಿನಗಳಿಂದ ರೈಲು ಸಂಪರ್ಕ ಕಡಿತಗೊಂಡಿದೆ.
ಮೊದಲೇ ಪ್ರವಾಹದ ಹೊಡೆತದಿಂದ ಕಂಗೆಟ್ಟಿರುವ ಜನರಿಗೆ, ರೈಲ್ವೇ ಸಂಪರ್ಕ ಕಡಿತದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಚಾರ್, ದಿಮಾ ಹಸಾವೊ, ಹೂಜೈ ಮತ್ತು ಚರೈಡಿಯೋ ಜಿಲ್ಲೆಗಳಲ್ಲಿ ಪ್ರವಾಹ ತೀವ್ರ ಪರಿಣಾಮ ಬೀರಿದೆ. ಮಂಗಳವಾರವೂ ಮಳೆ ಮುಂದುವರೆದ ಪರಿಣಾಮ ದಿಮಾ ಹಸಾವೊ ಜಿಲ್ಲೆಯ ಗುಡ್ಡಗಾಡು ಭಾಗದ ರೈಲು ಮಾರ್ಗಕ್ಕೆ ಹಾನಿಯಾಗಿದೆ.
ಅಸ್ಸಾಂ; ಧಾರಾಕಾರ ಮಳೆ, ಪ್ರವಾಹದಂತಹ ಪರಿಸ್ಥಿತಿ
ರಾಜ್ಯದ ದಿಮಾ ಹಸಾವೊ ಜಿಲ್ಲೆಯ ಹ್ಯಾಫ್ಲಾಂಗ್ ರೈಲು ನಿಲ್ದಾಣ ಭಾರೀ ಮಳೆ ಮತ್ತು ಭೂ ಕುಸಿತದಿಂದಾಗಿ ಸಂಪೂರ್ಣ ಜಲಾವೃತವಾಗಿದ್ದು, ಈಶಾನ್ಯ ಗಡಿ ರೈಲ್ವೇ ವಿಭಾಗದ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಹೋಜೈ ಮತ್ತು ದಕ್ಷಿಣ ಅಸ್ಸಾಂನ ಕ್ಯಾಚಾರ್ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು. ಲುಮ್ಡಿಂಗ್-ಬದರ್ಪುರ್ ಪರ್ವತ ವಲಯದ ರೈಲು ಮಾರ್ಗಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.
ಮತ್ತಷ್ಟು ಮಳೆಯಾಗುವ ಸಾಧ್ಯತೆ; ಬ್ರಹ್ಮಪುತ್ರ, ಕೊಪಿಲಿ ನದಿಗಳು ಜೋರ್ಹತ್ ಮತ್ತು ನಾಗಾಂವ್ ಜಿಲ್ಲೆಗಳ ನೇಮತಿಘಾಟ್ ಮತ್ತು ಕಂಪುರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಸ್ಸಾಂ ರಾಜ್ಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು. ಮತ್ತಷ್ಟು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಸ್ಸಾಂನ 24 ಜಿಲ್ಲೆಗಳ 811 ಹಳ್ಳಿಗಳಲ್ಲಿ ಕನಿಷ್ಠ 20 ಲಕ್ಷ ಜನ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಸುಮಾರು 6,540 ಮನೆಗಳು ಭಾಗಶಃ ಮತ್ತು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತರಿಗಾಗಿ 27 ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. 33 ಸಾವಿರಕ್ಕೂ ಹೆಚ್ಚು ಮಂದಿ 72 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮುಳುಗಿದ ರೈಲು ನಿಲ್ದಾಣ; ದಿಮಾ ಹಸಾವೊ ಜಿಲ್ಲೆಯ ಹಾಫ್ಲಾಂಗ್ ನಿಲ್ದಾಣ ಮಳೆ ಮತ್ತು ಭೂಕುಸಿತದ ಪರಿಣಾಣ ಸಂಪೂರ್ಣವಾಗಿ ಜಲಾವೃತಗೊಂಡಿದೆ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಕುರಿತು ಟ್ವೀಟ್ ಮಾಡಿರುವ ಈಶಾನ್ಯ ರೈಲ್ವೆ "ಡಿಟೋಕ್ಚೆರಾದಲ್ಲಿ ಸಂಖ್ಯೆ 15616 ರೈಲಿನಲ್ಲಿ ಸಿಲುಕಿಕೊಂಡಿದ್ದ 180 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರವಾಹದ ಸಂದರ್ಭದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಎಲ್ಲಾ ವೀರರಿಗೆ ನಮನಗಳು ಎಂದು" ಹೇಳಿದೆ.