ಮಿಜೋರಾಂ ವಿವಾದದ ನಡುವೆ ನಾಗಾಲ್ಯಾಂಡ್ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ ಹಾಡಿದ ಅಸ್ಸಾಂ
ಗುವಾಹಟಿ, ಜು.31: ಈಶಾನ್ಯ ರಾಜ್ಯವಾದ ಅಸ್ಸಾಂ ಮತ್ತು ಮಿಜೋರಾಂನ ಗಡಿಯಲ್ಲಿ ಎರಡೂ ರಾಜ್ಯಗಳ ಪೊಲೀಸರ ನಡುವೆ ರಕ್ತಸಿಕ್ತ ಘರ್ಷಣೆ ನಡೆದ ಬಳಿಕ ಉಭಯ ರಾಜ್ಯಗಳ ನಡುವೆ ಗಡಿ ವಿವಾದವು ತೀವ್ರಗೊಂಡಿದೆ. ಈ ನಡುವೆ ಅಸ್ಸಾಂ ಹಾಗೂ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ರಾಜ್ಯಗಳ ನಡುವಿನ ಉದ್ವಿಗ್ನತೆಯನ್ನು ತಗ್ಗಿಸುವ ಸಲುವಾಗಿ ಗಡಿ ಸ್ಥಳಗಳಿಂದ ತಮ್ಮ ಪಡೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಒಪ್ಪಂದಗಳಿಗೆ ಉಭಯ ರಾಜ್ಯಗಳು ಶನಿವಾರ ಸಹಿ ಹಾಕಿವೆ.
ಅಸ್ಸಾಂ ಹಾಗೂ ನಾಗಾಲ್ಯಾಂಡ್ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಪ್ರಯತ್ನಗಳಿಗಾಗಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊರನ್ನು ಗೌರವಿಸಿದ ಅಸ್ಸಾ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ "ಐತಿಹಾಸಿಕ" ಹೆಜ್ಜೆಯ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಮಿಜೋರಾಂ ಪೊಲೀಸರು
ಅಸ್ಸಾಂ ತನ್ನ ಇನ್ನೊಂದು ನೆರೆಯ ರಾಜ್ಯವಾದ ಮಿಜೋರಾಂನೊಂದಿಗೆ ದಶಕಗಳಷ್ಟು ಹಳೆಯ ಭೂವಿವಾದದಲ್ಲಿ ತೊಡಗಿದೆ. ಇಬ್ಬರೂ ನೆರೆಹೊರೆಯವರು ಅಸ್ಸಾಂನ ಕ್ಯಾಚಾರ್ ಮತ್ತು ಮಿಜೋರಾಂನ ಕೊಲಾಸಿಬ್ ಡಿಸ್ಟ್ರಿಕ್ ನಡುವಿನ ಗಡಿಯಲ್ಲಿ ಭೂಮಿಯನ್ನು ಹೊಂದಿದ್ದಾರೆ ಮತ್ತು ಪರಸ್ಪರ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಉಭಯ ರಾಜ್ಯಗಳ ವಿವಾದ ಜುಲೈ 26 ರಂದು ರಕ್ತಸಿಕ್ತ ಸಂಘರ್ಷವಾಗಿ ಭುಗಿಲೆದ್ದಿತು. ಅಸ್ಸಾಂನ ಆರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
ಈ ಬೆನ್ನಲ್ಲೇ ಪ್ರಸ್ತುತ ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಘರ್ಷಣೆಯ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಹಿಂಸಾತ್ಮಕ ಘರ್ಷಣೆಯ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಪೊಲೀಸ್ನ ನಾಲ್ಕು ಹಿರಿಯ ಅಧಿಕಾರಿಗಳು ಮತ್ತು ಇನ್ನೂ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮೀಜೋರಾಂ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಏನಿದು ಅಸ್ಸಾಂ-ಮಿಜೋರಾಂ ಗಡಿ ವಿವಾದ: ಇಲ್ಲಿದೆ ಸಂಪೂರ್ಣ ಮಾಹಿತಿ
ಸಂತಸ ವ್ಯಕ್ತಪಡಿಸಿದ ಅಸ್ಸಾಂ ಸಿಎಂ
ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಕೊನೆ ಹಾಡಿದ ಹಿನ್ನೆಲೆ ಉಭಯ ದೇಶಗಳ ಮುಖ್ಯಮಂತ್ರಿಗಳು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ''ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಉದ್ವಿಗ್ನತೆಯ ಬಗ್ಗೆ ಮಹತ್ವದ ಪ್ರಗತಿಯಲ್ಲಿ, ಇಬ್ಬರು ಮುಖ್ಯ ಕಾರ್ಯದರ್ಶಿಗಳು ಗಡಿ ಸ್ಥಳಗಳಿಂದ ಆಯಾ ಬೇಸ್ ಕ್ಯಾಂಪ್ಗಳಿಗೆ ರಾಜ್ಯಗಳ ಪಡೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಬಂದಿದ್ದಾರೆ,'' ಎಂದು ಹೇಳಿದ್ದಾರೆ. ಹಾಗೆಯೇ , ''ಇದು ನಮ್ಮ ಸಂಬಂಧದಲ್ಲಿ ಒಂದು ಐತಿಹಾಸಿಕ ಹೆಜ್ಜೆ. ಗಡಿಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಅಸ್ಸಾಂ ಜೊತೆ ಕೆಲಸ ಮಾಡಿದ ನೀಫ್ಯು ರಿಯೋಗೆ ನನ್ನ ಕೃತಜ್ಞತೆಗಳು,'' ಎಂದು ತಿಳಿಸಿದ್ದಾರೆ.
ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ ಡೆಸ್ಸೊಯ್ ವ್ಯಾಲಿ ಮೀಸಲು ಅರಣ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಅಸ್ಸಾಂ ಮತ್ತು ನಾಗಾಲ್ಯಾಂಡ್ನ ಮುಖ್ಯ ಕಾರ್ಯದರ್ಶಿಗಳ ನಡುವೆ ಜುಲೈ 31 ರಂದು ನಡೆದ ವಾಸ್ತವ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿವರವಾದ ಚರ್ಚೆಗಳ ನಂತರ, ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಮುಂದೆ ಓದಿ..
ಜನ್ಖಾನಾ ನಾಲಾದಲ್ಲಿ ತೆರವು
ಔಸೆಂದೆನ್ ಹಳ್ಳಿಯ ಪ್ರದೇಶವಾದ ಜನ್ಖಾನಾ ನಾಲಾದಲ್ಲಿ ನಾಗಾಲ್ಯಾಂಡ್ ಪೋಲಿಸ್ ಕೋವಿಡ್ ಕ್ಯಾಂಪ್ ಅನ್ನು ಸೆಪ್ಟೆಂಬರ್-ಅಕ್ಟೋಬರ್, 2020 ರಲ್ಲಿ ಸ್ಥಾಪಿಸಿದ್ದಾರೆ. ಅಸ್ಸಾಂ ಸರ್ಕಾರ ಮತ್ತು ನಾಗಾಲ್ಯಾಂಡ್ ಸರ್ಕಾರವು ತಮ್ಮ ಪಡೆಗಳು, ಆಯುಧಗಳು ಮತ್ತು ಶಿಬಿರ ಮೊದಲಾದವುಗಳನ್ನು (ಖಾಯಂ ಮತ್ತು ಅರೆ ಶಾಶ್ವತ) ಡೆಸ್ಸೊಯ್ ವ್ಯಾಲಿ ಮೀಸಲು ಅರಣ್ಯದಲ್ಲಿರುವ ಜನ್ಖಾನಾ ನಾಲಾ ಔಸೆಂದೆನ್ ಗ್ರಾಮ ಪ್ರದೇಶದಿಂದ ಹಿಂತೆಗೆದುಕೊಳ್ಳಬೇಕು ಎಂದು ಈ ಒಪ್ಪಂದದಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗಾಗಿ ನಾಗಾಲ್ಯಾಂಡ್ ಪೋಲಿಸ್ ಕೋವಿಡ್ ಕ್ಯಾಂಪ್ ಕೂಡಾ ತೆರವು ಮಾಡಬೇಕಾಗಬಹುದು.
ಅಸ್ಸಾಂ-ಮಿಜೋರಾಂ ಗಡಿ ಸಂಘರ್ಷ; 6 ಬಲಿ, 40 ಜನರಿಗೆ ಗಾಯ
ಅರಣ್ಯ ಶಿಬಿರದ ಸ್ಥಳ ವಿಭಾಗದಲ್ಲಿ ತೆರವು
ಪಡೆಗಳ ಬೇರ್ಪಡುವಿಕೆ ಎರಡೂ ಕಡೆಯಿಂದ ಏಕಕಾಲದಲ್ಲಿ ಆರಂಭವಾಗುತ್ತದೆ. ಎಮದರೆ ವಿಕುಟೋ ಗ್ರಾಮ ಪ್ರದೇಶ ಮತ್ತು ಖೇರೆಮಿಯಾ ಟೀ ಎಸ್ಟೇಟ್ನಲ್ಲಿ. ಹಾಗೆಯೇ ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ಎರಡೂ ಪಡೆಗಳು ಈಗಿರುವ ಸ್ಥಳದಿಂದ ಹಿಂದೆ ಸರಿಯುತ್ತವೆ. ಎಲ್ಲಾ ಬಂಕರ್ಗಳು/ಡೇರೆ/ಮೂಲಸೌಕರ್ಯಗಳನ್ನು ತೆಗೆದುಹಾಕಲಾಗುತ್ತದೆ. ಅಸ್ಸಾಂ ಶಿಬಿರದ ಮುಂದೆ ಕೆಲವು ನಾಗ ಗ್ರಾಮಸ್ಥರು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ನಿರ್ಮಿಸಿದ ಗುಡಿಸಲುಗಳನ್ನು ತಕ್ಷಣವೇ ತೆಗೆದುಹಾಕಬೇಕು. ಅಸ್ಸಾಂ ಅರಣ್ಯ ಇಲಾಖೆಯು ಮೀಸಲು ಅರಣ್ಯ ಪ್ರದೇಶವನ್ನು ರಕ್ಷಿಸಲು ವಾಚ್ ಪೋಸ್ಟ್ ಸ್ಥಾಪಿಸಲು ಅನುಮತಿಯನ್ನು ಈ ಒಪ್ಪಂದವು ನೀಡುತ್ತದೆ.
ಉಭಯ ರಾಜ್ಯಗಳ ನಡುವೆ ಭವಿಷ್ಯದ ಗಡಿ ನಿರ್ವಹಣೆ
ಅಸ್ಸಾಂ ಮತ್ತು ನಾಗಾಲ್ಯಾಂಡ್ ಜಂಟಿಯಾಗಿ ಯುಎವಿ ಬಳಸಿ ಗಸ್ತು ಮತ್ತು ಕಣ್ಗಾವಲಿನ ಮೂಲಕ ಪ್ರದೇಶವನ್ನು ಮೇಲ್ವಿಚಾರಣೆ ಮಾಡಬೇಕಾಗಿದೆ. ಅಸ್ಸಾಂ ಅರಣ್ಯ ಅಧಿಕಾರಿಗಳು ಈ ಪ್ರದೇಶದಲ್ಲಿ ತಮ್ಮ ಗಸ್ತು ಮುಂದುವರಿಸಬೇಕು ಎಂದು ಒಪ್ಪಂದವು ತಿಳಿಸುತ್ತದೆ. ಗುಣಮಟ್ಟವಿಲ್ಲದ ವಸತಿ ಗೃಹಗಳಿಂದಾಗಿ ಅಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಡೆಸ್ಸೊಯ್ ವ್ಯಾಲಿ ಅರಣ್ಯದಲ್ಲಿ ಅಸ್ಸಾಂನ ದೀರ್ಘಕಾಲದಿಂದ ಸ್ಥಾಪಿಸಲಾದ ನ್ಯೂ ಚುಂಥಿಯಾ ಬಿಒಪಿಯ ನವೀಕರಣವನ್ನು ತಕ್ಷಣವೇ ಅನುಮತಿಸಲಾಗಿದೆ ಎಂದು ಒಪ್ಪಂದವು ಹೇಳುತ್ತದೆ. ಪ್ರದೇಶವು ಮೀಸಲು ಅರಣ್ಯವಾಗಿರುವುದರಿಂದ ನಾಗರಿಕರ ಪ್ರವೇಶವನ್ನು ನ್ಯಾಯವ್ಯಾಪ್ತಿಯ ಅರಣ್ಯ ಅಧಿಕಾರಿಗಳು ನಿಯಂತ್ರಿಸುತ್ತಾರೆ. ಎರಡೂ ರಾಜ್ಯಗಳು ಜನರ ಅನಗತ್ಯ ನಿರ್ಮಾಣ ಕಾರ್ಯ, ಸಂಚಾರ ತಪ್ಪಿಸಲು ತಮ್ಮ ಕಡೆಯಿಂದ ಜನರ ಚಲನೆಯನ್ನು ತಡೆಯಬಹುದಾಗಿದೆ. ಮೀಸಲು ಅರಣ್ಯದಲ್ಲಿ ಜನರ ಅನಧಿಕೃತ ಮುಕ್ತ ಸಂಚಾರವನ್ನು ತಡೆಯಲು ನಾಗಾಲ್ಯಾಂಡ್ ಕಡೆಯಿಂದ ಇತ್ತೀಚೆಗೆ ನಿರ್ಮಿಸಲಾದ ಜಂಖಾನಾ ನದಿಯ ಮೇಲಿನ ಆರ್ಸಿಸಿ ಸೇತುವೆಯನ್ನು ತಕ್ಷಣವೇ ತೆರವು ಮಾಡಬೇಕು ಎಂದು ಒಪ್ಪಂದವು ಉಲ್ಲೇಖ ಮಾಡಿದೆ.
ಈ ನಡುವೆ ಅಸ್ಸಾಂ ಹಾಗೂ ಮೀಜೋರಾಂ ರಾಜ್ಯಗಳ ನಡುವಿನ ಗಡಿ ವಿವಾದ ಮತ್ತೆ ಭುಗಿಲೆದ್ದಿದೆ. ಅಸ್ಸಾಂ ಮತ್ತು ಮಿಜೋರಾಂ ನಡುವಿನ ಈ ಗಡಿ ವಿವಾದವು 146 ವರ್ಷಗಳ ಹಿಂದೆಯೇ ಆರಂಭವಾಗಿದೆ. ಈ ಮೊದಲು ಮಣಿಪುರ, ತ್ರಿಪುರ ಮತ್ತು ಅಸ್ಸಾಂ ರಾಜ್ಯಗಳು ಮಾತ್ರ ಈಶಾನ್ಯದಲ್ಲಿದ್ದರೆ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ಅಸ್ಸಾಂನ ಭಾಗವಾಗಿದ್ದವು. ಇದನ್ನು ಗ್ರೇಟರ್ ಅಸ್ಸಾಂ ಎಂದು ಕರೆಯಲಾಗುತ್ತಿತ್ತು. ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಗ್ರೇಟರ್ ಅಸ್ಸಾಂನಿಂದ ಬೇರ್ಪಡಿಸಿದ ಈಶಾನ್ಯ ಗಡಿನಾಡು ಸಂಸ್ಥೆ ಎಂದು ಕರೆಯಲಾಗುತ್ತಿತ್ತು. ವಿವಿಧ ಬುಡಕಟ್ಟು ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಆ ಜನರ ಭಾಷೆ, ಸಂಸ್ಕೃತಿ ಮತ್ತು ಗುರುತು ಪರಸ್ಪರ ಭಿನ್ನವಾಗಿ ಉಳಿದಿತ್ತು. ಸ್ವಾತಂತ್ರ್ಯದ ನಂತರ, ಈ ಆಧಾರದ ಮೇಲೆ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ಅಸ್ಸಾಂನಿಂದ ಪ್ರತ್ಯೇಕ ರಾಜ್ಯಗಳಾದವು. ಆದರೆ ಈ ರಾಜ್ಯಗಳ ನಡುವಿನ ಗಡಿಯ ನಿರ್ಣಯವು ಸ್ವಾತಂತ್ರ್ಯದ ನಂತರವೂ ವಿವಾದದ ವಿಷಯವಾಗಿ ಉಳಿದಿದೆ.
(ಒನ್ಇಂಡಿಯಾ ಸುದ್ದಿ)