ಚುನಾವಣೆ ಮುಗಿಯುತ್ತಿದ್ದಂತೆಯೇ 'ಆಪರೇಷನ್ ಕಮಲ' ಭೀತಿ: ಶುರುವಾಯ್ತು ರೆಸಾರ್ಟ್ ರಾಜಕಾರಣ
ಗುವಾಹಟಿ, ಏಪ್ರಿಲ್ 9: ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ 'ಆಪರೇಷನ್ ಕಮಲ'ದ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಏಪ್ರಿಲ್ 6ರಂದು ಮೂರನೇ ಹಾಗೂ ಅಂತಿಮ ಹಂತದ ಚುನಾವಣೆ ಮುಕ್ತಾಯವಾಗಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ವಿರೋಧಪಕ್ಷದ ಮೈತ್ರಿಕೂಟದಲ್ಲಿರುವ ಸುಮಾರು 22 ಅಭ್ಯರ್ಥಿಗಳು ಜೈಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚುನಾವಣೆ ಫಲಿತಾಂಶ ಘೋಷಣೆಗೆ ಮುನ್ನವೇ ಬಿಜೆಪಿ ಆಮಿಷವೊಡ್ಡಿ ಅವರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಬಹುದು ಎಂಬ ಭೀತಿಯಿಂದ ಅವರನ್ನು ಜೈಪುರದ ಹೋಟೆಲ್ ಒಂದರಲ್ಲಿ 'ಸುರಕ್ಷಿತ'ವಾಗಿ ಇರಿಸಲಾಗಿದೆ.
ಮಹಾಜೋತ್ ಎಂದು ಕರೆಯಲಾಗುವ ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷದ ಅಭ್ಯರ್ಥಿಗಳು 'ಆಪರೇಷನ್ ಕಮಲ'ದ ಮುನ್ಸೂಚನೆಯಿಂದ ರಾಜ್ಯ ತೊರೆದಿದ್ದಾರೆ ಎನ್ನಲಾಗಿದೆ. ಇದರಲ್ಲಿ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್), ಬೋಡೊಲ್ಯಾಂಡ್ ಪೀಪಲ್ಸ್ ಪ್ರಂಟ್ (ಬಿಪಿಎಫ್) ಮತ್ತು ಎಡಪಕ್ಷಗಳ ಅಭ್ಯರ್ಥಿಗಳು ಸೇರಿದ್ದಾರೆ.
ಅಸ್ಸಾಂ: 90 ಮತದಾರರ ಮತಗಟ್ಟೆಯಲ್ಲಿ 181 ಮತ ಚಲಾವಣೆ; 6 ಅಧಿಕಾರಿಗಳು ಅಮಾನತು!
ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜಸ್ಥಾನದ ರಾಜಧಾನಿ ಜೈಪುರದ ರೆಸಾರ್ಟ್ ಒಂದರಲ್ಲಿ ಅವರನ್ನು ಇರಿಸಲಾಗಿದೆ ಎನ್ನಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಕಾಂಗ್ರೆಸ್ನಲ್ಲಿ ಆಂತರಿಕ ಬಿಕ್ಕಟ್ಟು ತಲೆದೋರಿದ ಸಂದರ್ಭದಲ್ಲಿ ಕೂಡ ಪಕ್ಷದ ಶಾಸಕರನ್ನು ಈ ರೆಸಾರ್ಟ್ಗೆ ಕರೆತರಲಾಗಿತ್ತು.
'ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ಅನ್ನು ಒಡೆಯಲು ಬಿಜೆಪಿ ಪ್ರಯತ್ನಿಸುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗಾಗಿ ಮೈತ್ರಿಪಕ್ಷಗಳು ತಮ್ಮ ಸುರಕ್ಷತೆ ನೋಡಿಕೊಳ್ಳಲು ಬಯಸಿದ್ದಾರೆ' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ.
ಬಿಜೆಪಿಯೋ ಅಥವಾ ಎದುರಾಳಿಯೋ?: ಅಸ್ಸಾಂನಲ್ಲಿ ಬೋಡೊಲ್ಯಾಂಡ್ ಗೊಂದಲ
ಅಸ್ಸಾಂನಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಚುನಾವಣೆ ಕುತೂಹಲ ಕೆರಳಿಸಿದ್ದು, ಮೂರು ಹಂತಗಳಲ್ಲಿ ಮತದಾನ ನಡೆದಿದೆ. ವಿರೋಧಪಕ್ಷದಲ್ಲಿರುವ ಮಹಾಜೋತ್ ಮಹಾ ಒಕ್ಕೂಟವು 10 ಪಕ್ಷಗಳನ್ನು ಒಳಗೊಂಡಿದೆ.