ಪ್ರವಾಹ ಪೀಡಿತ ಸ್ಥಳದಲ್ಲಿ ಬಿಜೆಪಿ ಶಾಸಕನ ಹೈಡ್ರಾಮ, ನೆಟ್ಟಿಗರು ಗರಂ
ಗುವಾಹಟಿ, ಮೇ 19: ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಬಿಜೆಪಿ ಶಾಸಕರೊಬ್ಬರು ನೀರಿಗಳಿಯಲು ನಿರಾಕರಿಸಿದ್ದು, ಪ್ರವಾಹ ರಕ್ಷಣಾ ಕಾರ್ಯಕರ್ತನ ಬೆನ್ನಮೇಲೆ ಕೂತು ಸಂಚಾರ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಶಾಸಕರ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದು, ಟೀಕಿಸಿದ್ದಾರೆ.
ಭಾರೀ ಮಳೆಯಿಂದ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈವರೆಗೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜನರ ಸಂಕಷ್ಟದ ಸಮಯದಲ್ಲಿ ಜೊತೆ ಇದ್ದು ಧೈರ್ಯ ನೀಡಬೇಕಾದ್ದು ಜನಪ್ರತಿನಿಧಿಗಳ ಕರ್ತವ್ಯ. ಆದರೆ ಅಸ್ಸಾಂನ ಲಂಬ್ಡಿಂಗ್ ವಿಧಾನಸಭಾ ಕ್ಷೇತ್ರದ ಶಾಸಕ ಶಿಬು ಮಿಶ್ರಾ ಹೋಜೈ ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮ ವರ್ತನೆಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
#WATCH | Assam: BJP MLA from Lumding Assembly, Sibu Misra was seen taking a piggyback ride to a boat, on the back of a flood rescue worker yesterday, May 18th. He was in Hojai to review the flood situation in the area. pic.twitter.com/Rq0mJ8msxt
— ANI (@ANI) May 19, 2022
ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಶಾಸಕರು ಮೊಣಕಾಲುದ್ದ ನೀರಿನಲ್ಲಿ ನಡೆದುಹೋಗಿ ದೋಣಿ ಹತ್ತಲು ನಿರಾಕರಿಸಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪರಿಹಾರ ರಕ್ಷಣಾ ಕಾರ್ಯದ ವ್ಯಕ್ತಿಯೊಬ್ಬರು ಶಾಸಕರನ್ನು ಬೆನ್ನಮೇಲೆ ಕೂರಿಸಿಕೊಂಡು ಹೋಗಿ ದೋಣಿ ಹತ್ತಿಸಿದ್ದಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಬು ಮಿಶ್ರಾ ವರ್ತನೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ವರ್ತನೆಯನ್ನು ಕಾಂಗ್ರೆಸ್ ಖಂಡಿಸಿದ್ದು, ಅಸ್ಸಾಂ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ "ದುಬಾರಿ ಶೂಗಳನ್ನು ಧರಿಸಿದ್ದರಿಂದ ಶಾಸಕ ಶಿಬುಶರ್ಮಾ ನೀರಿಗೆ ಇಳಿಯಲ್ಲ ಎಂದಿದ್ದಾರೆ" ಎಂದು ಟ್ವೀಟ್ ಮಾಡಿದೆ.
ಪ್ರವಾಹಕ್ಕೆ ತತ್ತರಿಸಿದ ಅಸ್ಸಾಂ; ಪ್ರವಾಹದಿಂದಾಗಿ ಅಸ್ಸಾಂನ 27 ಜಿಲ್ಲೆಗಳಲ್ಲಿ 6.6 ಲಕ್ಷ ಜನ ಬಾಧಿತರಾಗಿದ್ದಾರೆ. ಪ್ರವಾಹದಿಂದ ರಾಜ್ಯದಲ್ಲಿ ಈವರೆಗೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 48 ಸಾವಿರಕ್ಕೂ ಹೆಚ್ಚು ಜನರನ್ನು 248 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ರಾಜ್ಯ ಹೂಜೈ ಮತ್ತು ಕ್ಯಾಚಾರ್ ಜಿಲ್ಲೆಗಳಲ್ಲಿ ಪ್ರವಾಹದಿಂದ ಅತಿ ಹೆಚ್ಚಿನ ಹಾನಿಯಾಗಿದೆ. ಪ್ರತಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ. ಹೂಜೈ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 2 ಸಾವಿರ ಜನರನ್ನು ಸೇನೆ ರಕ್ಷಣೆ ಮಾಡಿದ್ದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಉಕ್ಕಿ ಹರಿಯುತ್ತಿದೆ ಬ್ರಹ್ಮಪುತ್ರ ನದಿ; ದಕ್ಷಿಣ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಐದನೇ ದಿನವೂ ಸಂಪರ್ಕ ಕಡಿತಗೊಂಡಿದೆ. ಮಳೆಯ ಕಾರಣ ಉಂಟಾದ ಭೂಕುಸಿತದಿಂದ ದಿಮಾ ಹಾಸವೊಗೆ ರಸ್ತೆ ಮತ್ತು ರೈಲು ಸಂಪರ್ಕ ಕಡಿತವಾಗಿದೆ. ಭಾರೀ ಮಳೆಯಿಂದಾಗಿ ವಿಶ್ವದ ಅತಿದೊಡ್ಡ ನದಿಗಳಲ್ಲಿ ಒಂದಾದ ಬ್ರಹ್ಮಪುತ್ರ ಉಕ್ಕಿಹರಿಯುತ್ತಿದೆ. ನದಿ ಪಾತ್ರದ ಹಳ್ಳಿಗಳು ಜಲಾವೃತವಾಗಿದ್ದು ಹಲವು ಮನೆಗಳಿಗೂ ಹಾನಿಯಾಗಿದೆ.
ಭಾನುವಾರದಿಂದ ಬರಾಕ್ ಕಣಿವೆ ಮತ್ತು ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದ ಪ್ರಮುಖ ಭಾಗಗಳಿಗೆ ರಸ್ತೆ ಮತ್ತು ರೈಲು ಸಂಪರ್ಕವನ್ನು ಕಡಿತಗೊಳಿಸಿದೆ. ಮೃತರ ಕುಟುಂಬಗಳಿಗೆ ಅಸ್ಸಾಂ ಸರ್ಕಾರ ತಲಾ 4 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.