ಕಾರಿನಲ್ಲಿ ಇವಿಎಂ ಪತ್ತೆ: ಆರೋಪ ನಿರಾಕರಿಸಿದ ಬಿಜೆಪಿ ಅಭ್ಯರ್ಥಿ
ಗುವಾಹಟಿ, ಏಪ್ರಿಲ್ 2: ತಮ್ಮ ಕಾರ್ನಲ್ಲಿ ಇವಿಎಂ ದೊರಕಿದ ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್ ಸ್ಪಷ್ಟೀಕರಣ ನೀಡಿದ್ದಾರೆ. ವಿದ್ಯುನ್ಮಾನ ಮತ ಯಂತ್ರಗಳನ್ನು ಕದ್ದ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.
ಗುರುವಾರ ಸಂಜೆ ಎರಡನೆಯ ಹಂತದ ಚುನಾವಣೆ ಮುಗಿದ ಬಳಿಕ ಕೃಷ್ಣೇಂದು ಅವರ ಕಾರಿನಲ್ಲಿ ಇವಿಎಂ ಯಂತ್ರಗಳು ರವಾನೆಯಾಗಿರುವುದು ಬಹಿರಂಗವಾಗಿತ್ತು. ಇದು ಭಾರಿ ವಿವಾದ ಸೃಷ್ಟಿಸಿದೆ. ಆದರೆ ಕಾರಿನಲ್ಲಿ ತಮ್ಮ ಚಾಲಕ ಇದ್ದಿದ್ದಾಗಿ ಮತ್ತು ಚುನಾವಣಾ ಅಧಿಕಾರಿಗಳು ಸಹಾಯ ಕೋರಿದ್ದರಿಂದ ಆತ ನೆರವು ನೀಡಿದ್ದಾಗಿ ಕೃಷ್ಣೇಂದು ತಿಳಿಸಿದ್ದಾರೆ.
ಬಿಜೆಪಿ ಶಾಸಕನ ಕಾರಿನಲ್ಲಿ ಇವಿಎಂ ಪತ್ತೆ ಪ್ರಕರಣ: ನಾಲ್ವರ ಅಮಾನತು
'ನನ್ನ ಚಾಲಕ ಕಾರಿನಲ್ಲಿದ್ದ. ಚುನಾವಣಾ ಅಧಿಕಾರಿಗಳು ಸಹಾಯ ಕೋರಿದರು ಮತ್ತು ಆತ ಅದಕ್ಕೆ ಸ್ಪಂದಿಸಿದ್ದ. ನನ್ನ ಕಾರಿನ ಮುಂದೆಯೇ ನಾನು ಬಿಜೆಪಿ ಅಭ್ಯರ್ಥಿ ಎಂದು ತಿಳಿಸುವ ಪಾಸ್ ಅಂಟಿಸಲಾಗಿತ್ತು. ಅದು ಚುನಾವಣಾ ಅಧಿಕಾರಿಗಳಿಗೆ ತಿಳಿದಿತ್ತೋ, ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ನಾವು ಅವರಿಗೆ ಸಹಾಯ ಮಾಡಿದ್ದೇವಷ್ಟೇ' ಎಂದು ಹೇಳಿದ್ದಾರೆ.
Patharkandi BJP candidate Krishnendu Paul caught red-handed stealing EVM's.
— Rofl Republic (@i_the_indian_) April 1, 2021
Will EC wake-up and and suspend the BJP candidate or remain a mute spectator?#AssamAssemblyPollspic.twitter.com/LtnZB0iiGT
ಕಾರಿನಲ್ಲಿ ಪತ್ತೆಯಾದ ಇವಿಎಂ ಯಂತ್ರಗಳ ಸೀಲುಗಳು ತೆರೆದಿರಲಿಲ್ಲ. ಹಾಗಿದ್ದರೂ ಇಂದಿರಾ ಎಂವಿ ಶಾಲೆಯ ಎಲ್ಎಸಿ 1 ರತಾಬರಿ (ಎಸ್ಸಿ) ಮತಗಟ್ಟೆಯಲ್ಲಿ ಹೆಚ್ಚಿನ ಎಚ್ಚರಿಕೆಯೊಂದಿಗೆ ಮರು ಮತದಾನ ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇವಿಎಂ ಪತ್ತೆಯಾದ ಬೊಲೆರೋ ಕಾರು ಕೃಷ್ಣೇಂದು ಅವರ ಪತ್ನಿಯ ಹೆಸರಿನಲ್ಲಿದೆ. ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ದೊರಕಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದ್ದು, ವಿಪಕ್ಷಗಳು ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.