ಮತ್ತೊಂದು ಕಳ್ಳಭಟ್ಟಿ ದುರಂತ : ಮದ್ಯ ಸೇವಿಸಿ ಸಾವನ್ನಪ್ಪಿದ ಕಾರ್ಮಿಕರ ಸಂಖ್ಯೆ 80ಕ್ಕೆ ಏರಿಕೆ
ಗುವಾಹಾಟಿ, ಫೆಬ್ರವರಿ 23 : ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ್ ನಲ್ಲಿ ವಿಷಪೂರಿತ ಮದ್ಯ ಸೇವಿಸಿ 100ಕ್ಕೂ ಹೆಚ್ಚು ಬಲಿಯಾದ ಎರಡೇ ವಾರಗಳಲ್ಲಿ, ಕಳ್ಳಭಟ್ಟಿ ಮದ್ಯ ಸೇವನೆಯಿಂದಾಗಿಯೇ ಮತ್ತೊಂದು ಭಾರೀ ದುರ್ಘಟನೆ ಉತ್ತರ ಭಾರತದಲ್ಲಿ ನಡೆದಿದೆ.
ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಆಸ್ಸಾಂನಲ್ಲಿ ಮೃತರಾಗಿದ್ದಾರೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಸತ್ತವರ ಸಂಖ್ಯೆ 80ಕ್ಕೆ ಏರಿದೆ. ಗೋಲಾಘಾಟ್ ಜಿಲ್ಲೆಯೊಂದರಲ್ಲಿಯೇ 39 ಬಡ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರ ಆರೋಗ್ಯ ಗಂಭೀರವಾಗಿದ್ದು, ಅವರನ್ನು ಜೋರ್ಹಟ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಗೋಲಘಾಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಲೇಖನ ಓದಿದ ಮೇಲೆ ಕುಡೀಬೇಕಾ, ಕುಡಿಯೋದ್ ಬೇಡ್ವಾ? ನಿರ್ಧಾರ ಮಾಡಿ
ಆಸ್ಸಾಂನ ರಾಜಧಾನಿ ಗುವಾಹಾಟಿಯಿಂದ 310 ಕಿ.ಮೀ. ದೂರದಲ್ಲಿರುವ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ಏಳು ಮಹಿಳೆಯರು ಕಳ್ಳಭಟ್ಟಿ ಮದ್ಯ ಸೇವನೆಯಿಂದ ಸಾವಿಗೀಡಾಗಿದ್ದಾರೆ. ಇವರೆಲ್ಲ ಗುರುವಾರವೇ ಮದ್ಯ ಸೇವಿಸಿದ್ದರು. ಸಾಯಂಕಾಲದ ಹೊತ್ತಿಗೆ ನಾಲ್ವರು ಮಹಿಳೆಯರು ಸತ್ತಿದ್ದರು. ಮುಂದಿನ ಹನ್ನೆರಡು ಗಂಟೆಯಲ್ಲಿ ಇನ್ನೂ ಎಂಟು ಜನರು ಸಾವಿಗೀಡಾದರು. ಇದೀಗ ಸತ್ತವರ ಸಂಖ್ಯೆ 66ಕ್ಕೇರಿದೆ. ಇದು ಇನ್ನೂ ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸುತ್ತಿವೆ.
ಚಹಾ ತೋಟದ ಹತ್ತಿರವೇ ಇರುವ ಜುಗಿಬಾರಿ ಪ್ರದೇಶದಲ್ಲಿರುವ ಮದ್ಯ ತಯಾರಿಕಾ ಫ್ಯಾಕ್ಟರಿಯ ಮಾಲಿಕರನ್ನು ಅನೈತಿಕವಾಗಿ ಮದ್ಯ ತಯಾರಿಸುತ್ತಿದ್ದಕ್ಕಾಗಿ ಬಂಧಿಸಲಾಗಿದೆ. ಬಂಧಿತರನ್ನು ಇಂದುಕಲ್ಪ ಬೊರ್ಡೊಲೋಯ್ ಮತ್ತು ದೇಬಾ ಬೋರಾ ಎಂದು ಗುರುತಿಸಲಾಗಿದೆ. ಈ ಕಳ್ಳಭಟ್ಟಿ ಮದ್ಯ ತಯಾರಿಕೆಯಲ್ಲಿ ಭಾಗಿಯಾಗಿರುವ ಇನ್ನೂ ಹಲವರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಈ ದುರ್ಘಟನೆ ನಡೆದ ನಂತರ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದೆ.
ವಿಷಪೂರಿದ ಮದ್ಯ ಸೇವಿಸಿ 30ಕ್ಕೂ ಹೆಚ್ಚು ಮಂದಿ ಸಾವು, 48 ಮಂದಿಗೆ ಚಿಕಿತ್ಸೆ
ಇಂಥ ಕಳ್ಳಭಟ್ಟಿ ತಯಾರಿಕಾ ಫ್ಯಾಕ್ಟರಿಗಳ ವಿರುದ್ಧ ಕ್ರಮ ಜರುಗಿಸದೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಇಬ್ಬರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಜ್ಯದಲ್ಲಿ ಮದ್ಯ ನಿಷೇಧಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟಗಾರನ ಮೇಲೆ ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ಹಲ್ಲೆ ಮಾಡಿದ್ದರು. ರಾಜ್ಯ ಸರಕಾರ ಮತ್ತು ಕಳ್ಳಭಟ್ಟಿ ತಯಾರಕರ ನಡುವೆ ಅನೈತಿಕ ಸಂಬಂಧ ಇದ್ದಾಗ ಇಂಥ ದುರ್ಘಟನೆ ನಡೆಯುತ್ತವೆ ಎಂದು ಅವರು ಆರೋಪಿಸಿದ್ದರು.
ಮದ್ಯ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಎಂಬುದು ಸುಳ್ಳು: ರವಿಕೃಷ್ಣಾ ರೆಡ್ಡಿ
ಇತ್ತೀಚೆಗೆ ಕರ್ನಾಟಕದಲ್ಲಿ ಕೂಡ, ಕರ್ನಾಟಕದಲ್ಲಿ ಮದ್ಯ ನಿಷೇಧಿಸಬೇಕೆಂದು ಸಹಸ್ರಾರು ಮಹಿಳೆಯರು ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಕಾಲ್ನಡಿಗೆಯಲ್ಲಿ ಜಾಥಾ ನಡೆಸಿದ್ದರು. ಸುಮಾರು ಹತ್ತು ದಿನಗಳ ಕಾಲ ನಡೆದುಕೊಂಡು ರಾಜ್ಯ ಸರಕಾರಕ್ಕೆ ಮದ್ಯ ನಿಷೇಧದ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲೂ ಇಂಥದೊಂದು ದುರ್ಘಟನೆ ನಡೆಯುವರೆಗೆ ಕನ್ನಡ ನಾಡಿನ ಜನರು ಕಾಯುತ್ತಿರಬೇಕೆ?