ಮಹಾರಾಷ್ಟ್ರ 'ಸೇನಾ' ರೆಬಲ್ ಶಾಸಕರ ಏಳು ದಿನದ ವೆಚ್ಚ 1.12 ಕೋಟಿ ರೂ!
ಗುವಹಾಟಿ, ಜೂ. 24: ದೇಶಕ್ಕೆ ಪರಿಚಯಿಸಿದ ಕರ್ನಾಟಕದ ರೆಸಾರ್ಟ್ ರಾಜಕೀಯ ಇದೀಗ ಮಹಾರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ. ಶಿವಸೇನಾ ರೆಬೆಲ್ ಶಾಸಕ ಏಕನಾಥ್ ಶಿಂಧೆ ಜತೆ ಅಸ್ಸಾಂನ ಗುವಹಾಟಿಗೆ ತೆರಳಿದ ಬಂಡಾಯ ಶಾಸಕರು ಏಳು ದಿನ ತಂಗಿದ್ದ ರ್ಯಾಡಿಸನ್ ಬ್ಲೂ ಹೋಟೆಲ್ ನ ವೆಚ್ಚ ಇದೀಗ ಮಾಧ್ಯಮಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಅಸ್ಸಾಂನ ಗುವಹಾಟಿ ವಿಮಾನ ನಿಲ್ದಾಣದಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಐಶರಾಮಿ ಹೋಟೆಲ್ ರ್ಯಾಡಿಸನ್ ಬ್ಲೂನಲ್ಲಿ ಮಹಾರಾಷ್ಟ್ರ ಬಂಡಾಯ ಶಾಸಕರು ತಂಗಿದ್ದಾರೆ. ಸ್ಟಾರ್ ಹೋಟೆಲ್ ನಲ್ಲಿ 70 ರೂಮ್ ಬುಕ್ ಮಾಡಿದ್ದು ಇದರ ವೆಚ್ಚ 76 ಲಕ್ಷ ರೂ. ಆಗಿದೆ. ರೆಬೆಲ್ ಶಾಸಕರ ಏಳು ದಿನದ ವೆಚ್ಚ ಬರೋಬ್ಬರಿ 1.12 ಕೋಟಿ ರೂಪಾಯಿ ದಾಟಿದೆ.
ಮೈಸೂರಿನಲ್ಲಿ ರ್ಯಾಡಿಸನ್ ಸ್ಟಾರ್ ಹೋಟೆಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಿದ್ದರು. ಈ ಮೂಲಕ ರ್ಯಾಡಿಸನ್ ಹೋಟೆಲ್ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಇದೀಗ ಮಹಾರಾಷ್ಟ್ರದ ರೆಬಲ್ ಗ್ಯಾಂಗ್ ಕೂಡ ಅಸ್ಸಾಂನ ಗುವಹಾಟಿಯ ರ್ಯಾಡಿಸನ್ ಐಶರಾಮಿ ಹೋಟೆಲ್ ನಲ್ಲಿ ತಂಗಿದೆ. ರೆಬೆಲ್ ಲೀಡರ್ ಏಕನಾಥ್ ಶಿಂಧೆ ಜತೆ ಮಹಾರಾಷ್ಟ್ರ ತೊರೆದ ರೆಬೆಲ್ ಶಾಸಕರು ಗುಜರಾತ್ ತಲುಪಿದ್ದರು. ಆ ಬಳಿಕ ಅಸ್ಸಾಂನ ಗುವಹಾಟಿಗೆ ಹಾರಿದ್ದರು. ಕಳೆದ ಸೋಮವಾರ ಸಂಜೆಯಿಂದಲೂ ಇಲ್ಲಿನ ಐಶಾರಾಮಿ ಹೋಟೆಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಹೋಟೆಲ್ ನಲ್ಲಿರುವ ಐಶರಾಮಿ ಸಿಮ್ಮಿಂಗ್ ಪೂಲ್, ಸ್ಪಾ, ರೆಸ್ಟೋರೆಂಟ್ ಬುಕ್ ಮಾಡಿದ್ದು, ಬರೋಬ್ಬರಿ 70 ಐಶಾರಾಮಿ ಕೊಠಡಿಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, ಇವರ ಈವರೆಗಿನ ವೆಚ್ಚ ಬರೊಬ್ಬರಿ 1.12 ಕೋಟಿ ರೂಪಾಯಿ ದಾಟಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಸರ್ಕಾರ ಉರುಳಿಸಿ ಬಿಜೆಪಿ ಜತೆ ಸಕ್ಯ ಬೆಳೆಸಿ ಸರ್ಕಾರ ರಚಿಸುವ ಸಂತಸದಲ್ಲಿ ತಲೇಲಾಡುತ್ತಿರುವ ಶಿವಸೇನಾ ರೆಬಲ್ ಶಾಸಕರ ಗ್ಯಾಂಗ್ನ ಐಶಾರಾಮಿ ಜೀವನದ ವೆಚ್ಚ ಇದೀಗ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ರೆಬೆಲ್ ಶಾಸಕರ ಏಳು ದಿನದ ರ್ಯಾಡಿಸನ್ ಹೋಟೆಲ್ ವೆಚ್ಚ 1.12 ಕೋಟಿ ರೂ. ದಾಟಿದೆ. ಆಹಾರ, ಇತರೆ ಸೇವೆ ಸೇರಿ ಒಂದು ದಿನಕ್ಕೆ ಸರಾಸರಿ 8 ಲಕ್ಷ ಊ. ವೆಚ್ಚ ವಾಗುತ್ತಿದೆ. ಪ್ಲೈಟ್, ಇತರೆ ವೆಚ್ಚ ಸೇರಿ ಏಳು ದಿನದ ವೆಚ್ಚ ಕೋಟಿ ದಾಟಿದ್ದು, ಜನ ಪ್ರತಿನಿಧಿಗಳ ರೆಸಾರ್ಟ್ ರಾಜಕೀಯ, ಅವರ ದುಬಾರಿ ದುನಿಯಾವನ್ನು ನೋಡಿ ಮಹಾರಾಷ್ಟ್ರದ ಜನ ಮಾತನಾಡಿಕೊಳ್ಳುವಂತಾಗಿದೆ.196 ರೂಮ್ ಇರುವ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಹೊಸ ರೂಮ್ ಬುಕ್ಕಿಂಗ್ ನ್ನು ಆಡಳಿತ ಮಂಡಳಿ ಬ್ಲಾಕ್ ಮಾಡಿದೆ.
ಬಂಡಾಯ ಶಾಸಕರನ್ನು ರೆಸಾರ್ಟ್ ಅಥವಾ ಐಶಾರಾಮಿ ಹೋಟೆಲ್ ಗೆ ಕರೆದೊಯ್ದು ವಿಲಾಸಿ ಜೀವನ ಪರಿಚಯಿಸಿದ್ದ ಕರ್ನಾಟಕ. ಕರ್ನಾಟಕದ ಆಪರೇಷನ್ ಕಮಲ ಕಾರ್ಯಾಚರಣೆಗಳೆಲ್ಲವೂ ರೆಸಾರ್ಟ್ ರಾಜಕೀಯಕ್ಕೆ ನಾಂದಿ ಹಾಡುತ್ತಿತ್ತು. ಕುಮಾರಸ್ವಾಮಿ ಸರ್ಕಾರ ಬೀಳುವ ವೇಳೆ ರೆಬಲ್ ಶಾಸಕರು ಮುಂಬಯಿನ ತಾಜ್ ಹೋಟೆಲ್ ನಲ್ಲಿ ಠಿಕಾಣಿ ಹೂಡಿದ್ದರು. ಇದೀಗ ಮಹಾರಾಷ್ಟ್ರದ ಸೇನಾ ಶಾಸಕರು ಅದೇ ಹಾದಿ ಹಿಡಿದಿದ್ದಾರೆ. ಕರ್ನಾಟಕದ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲ ಸರ್ಕಾರ ಬರುವ ಎಲ್ಲಾ ತಯಾರಿ ನಡೆದಿದೆ.