just in: ಕಾಣೆಯಾಗಿದ್ದ 19 ಅಸ್ಸಾಂ ಕಾರ್ಮಿಕರಲ್ಲಿ ಮತ್ತಿಬ್ಬರು ಪತ್ತೆ
ಗುವಾಹಟಿ ಜುಲೈ 25: ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯ ಭಾರತ-ಚೀನಾ ಗಡಿಯ ಬಳಿ ರಸ್ತೆ ನಿರ್ಮಾಣ ಸ್ಥಳದಿಂದ ನಾಪತ್ತೆಯಾಗಿದ್ದ 19 ಕಾರ್ಮಿಕರಲ್ಲಿ ಮತ್ತಿಬ್ಬರು ಕಾರ್ಮಿಕರನ್ನಯ ರಕ್ಷಣೆ ಮಾಡಲಾಗಿದೆ.
20 ದಿನಗಳ ಹಿಂದೆ ಕುರುಂಗ್ ಕುಮೇ ಜಿಲ್ಲೆಯ ಭಾರತ-ಚೀನಾ ಗಡಿಯ ಬಳಿ 19 ಕಾರ್ಮಿಕರು ನಾಪತ್ತೆಯಾಗಿದ್ದರು. ಅದರಲ್ಲಿ ಏಳು ಮಂದಿಯನ್ನು ಎರಡು ದಿನಗಳ ಹಿಂದೆ ರಕ್ಷಣೆ ಮಾಡಲಾಗಿತ್ತು. ಉಳಿದ 10 ಮಂದಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾಗಿರುವ ಖೋಲೆಬುದ್ದೀನ್ ಶೇಕ್ (27) ಮತ್ತು 19 ವರ್ಷದ ಶಮೀದುಲ್ ಶೇಕ್ ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರಿಗೆ ಇಟಾನಗರ ಬಳಿಯ ನಹರ್ಲಾಗುನ್ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುರುಂಗ್ ಕುಮೇ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಬೆಂಗಿಯಾ ನಿಘೀ ತಿಳಿಸಿದ್ದಾರೆ.
ವಿಷಕಾರಿ ಹಾವುಗಳ ಬೆದರಿಕೆಯಿಂದಾಗಿ ಸ್ಥಳೀಯ ಮಾರ್ಗದರ್ಶಕರು ಸೇರಿದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಭಾನುವಾರ ತಡರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು. ಇಂದು ಮತ್ತೆ ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಭಾನುವಾರ ಕಾರ್ಯಾಚರಣೆಯಲ್ಲಿ ತೊಡಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜುಲೈ 5 ರಂದು ರಾತ್ರಿ ಹುರಿಯಲ್ಲಿನ ತಮ್ಮ ಪ್ರಾಜೆಕ್ಟ್ ಸೈಟ್ ಕ್ಯಾಂಪ್ನಿಂದ ತಪ್ಪಿಸಿಕೊಂಡು ಹೋಗಿದ್ದ 19 ಕಾರ್ಮಿಕರು ವಿಷಕಾರಿ ಹಾವುಗಳು ಮತ್ತು ಕಾಡು ಪ್ರಾಣಿಗಳಿಂದ ಮುತ್ತಿಕೊಂಡಿರುವ ದಟ್ಟ ಅರಣ್ಯವನ್ನು ಪ್ರವೇಶಿಸಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಸ್ವಯಂಸೇವಕರೊಂದಿಗೆ ಎಸ್ಡಿಆರ್ಎಫ್ನ 25 ಸದಸ್ಯರ ತಂಡವು ದಾಮಿನ್ ವೃತ್ತದಲ್ಲಿ ಕಾಣೆಯಾದ ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ರಕ್ಷಣಾ ಕಾರ್ಯಾಚರಣೆಯನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಹೇಳಿದ್ದಾರೆ.
ಅಸ್ಸಾಂನ ಕೊಕ್ರಜಾರ್ ಮತ್ತು ಧುಬ್ರಿ ಗಡಿ ಪ್ರದೇಶದವರು ಎನ್ನಲಾಗಿರುವ ಈ ಕಾರ್ಮಿಕರು ಈದ್ ಆಚರಿಸಲು ಅಸ್ಸಾಂನಲ್ಲಿರುವ ತಮ್ಮ ಮನೆಗಳಿಗೆ ತೆರಳಲು ರಜೆ ಕೇಳಿದ್ದರು. ಆದರೆ, ರಜೆ ನೀಡಲು ನಿರಾಕರಿಸಲಾಗಿತ್ತು. ರಜೆ ನಿರಾಕರಿಸಿದ ನಂತರ ಜುಲೈ 5 ರ ರಾತ್ರಿ ತಮ್ಮ ಶಿಬಿರದಿಂದ ಪಲಾಯನ ಮಾಡಿದ್ದರು. ಅವರು ದಟ್ಟವಾದ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದರು, ಬಳಿಕ ಅವರ ಬಗ್ಗೆ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ ಎಂದು ವರದಿಯಾಗಿದೆ. ಜುಲೈ 13 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
Recommended Video