'ಗಣಿಯೊಳಗೆ ಸಿಲುಕಿ ಕಾರ್ಮಿಕರು ಪರದಾಡ್ತಿದ್ದಾರೆ, ಮೋದಿ ಕ್ಯಾಮೆರಾಗೆ ಪೋಸು ಕೊಡ್ತಿದ್ದಾರೆ'
ಗುವಾಹತಿ (ಅಸ್ಸಾಂ), ಡಿಸೆಂಬರ್ 26: "ಹದಿನೈದು ಮಂದಿ ಗಣಿಗಾರಿಕೆ ಕಾರ್ಮಿಕರು ಕಲ್ಲಿದ್ದಲು ಗಣಿಯಲ್ಲಿ ಎರಡು ವಾರದಿಂದ ಸಿಲುಕಿ, ಉಸಿರಾಡಲು ಪರದಾಡುತ್ತಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಬೊಗಿಬೀಲ್ ಸೇತುವೆ ಉದ್ಘಾಟನೆ ಮಾಡಿ, ಕ್ಯಾಮೆರಾಗೆ ಪೋಸು ನೀಡುತ್ತಿದ್ದಾರೆ. ಪರಿಹಾರ ಕಾರ್ಯಕ್ಕೆ ನೆರವಾಗುವಂಥ ಹೈ ಪ್ರೆಷರ್ ಪಂಪ್ಸ್ ಒದಗಿಸಲು ಕೇಂದ್ರ ಸರಕಾರ ನಿರಾಕರಿಸಿದೆ".
-ಹೀಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ರಾಹುಲ್, ಕಳೆದ ಒಂದು ವಾರದಿಂದ ನೂರು ಎಚ್.ಪಿ. ಸಾಮರ್ಥ್ಯದ ಪಂಪ್ಸ್ ಗಳಿಗಾಗಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವವರು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೋದಿಗೆ ಬಿಜೆಪಿ ಕಾರ್ಯಕರ್ತರಿಂದ ಮುಜುಗರ, ವ್ಯಂಗ್ಯವಾಡಿದ ರಾಹುಲ್
ಮೇಘಾಲಯ ರಾಜ್ಯದ ಪೂರ್ವ ಜೈಂತಿಯಾ ಬೆಟ್ಟದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ನೀರು ಹೊರಗೆ ತೆಗೆಯಲು ಬೇಕಾದಂಥ ಪಂಪ್ ಗಳು ಮೇಘಾಲಯ ಸರಕಾರದ ಬಳಿ ಇಲ್ಲ ಎಂದು ಅಧಿಕಾರಿಗಳು ಈಗಾಗಲೇ ಹೇಳಿದ್ದಾರೆ.
ಇಪ್ಪತ್ತೈದು ಎಚ್.ಪಿ. ಪಂಪ್ ಗಳನ್ನು ಸದ್ಯಕ್ಕೆ ಬಳಸಲಾಗುತ್ತಿದೆ. ಆದರೆ ಅದು ಪರಿಣಾಮಕಾರಿಯಾಗಿಲ್ಲ. "ಯಾರನ್ನೇ ಆಗಲಿ ಜೀವಂತವಾಗಿ ಅಥವಾ ಶವವಾಗಿ ಪತ್ತೆ ಮಾಡಿಲ್ಲ. ಈ ರಕ್ಷಣಾ ಕಾರ್ಯಾಚರಣೆಗೆ ರಾಜ್ಯ ಸರಕಾರದ ನೆರವು ಬೇಕಿದೆ" ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ನರೇಂದ್ರ ಮೋದಿ 'ಅಭದ್ರತೆಯ ಸರ್ವಾಧಿಕಾರಿ': ರಾಹುಲ್ ಗಾಂಧಿ ಟೀಕೆ
ಎಪ್ಪತ್ತು ಅಡಿ ಆಳದ ನೀರಿನ ತನಕ ಕಾರ್ಯಾಚರಣೆ ಕೈಗೊಳ್ಳಬೇಕು. ಎನ್ ಡಿಆರ್ ಎಫ್ ನ ಮುಳುಗು ತಜ್ಞರು ನಲವತ್ತು ಅಡಿ ಆಳದ ತನಕ ಹೋಗಬಲ್ಲರು. ಆದ್ದರಿಂದ ನೀರನ್ನು ಬರಿದು ಮಾಡದ ಹೊರತು ರಕ್ಷಣಾ ಕಾರ್ಯಾಚರಣೆ ಪುನರಾರಂಭಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.