ಪಿ.ಜಿ. ಮಾಲೀಕನ ಕಿರುಕುಳ: ಸ್ಪೈಸ್ ಜೆಟ್ ಗಗನಸಖಿ ಆತ್ಮಹತ್ಯೆ
ನವದೆಹಲಿ, ಡಿಸೆಂಬರ್ 19: ಖಾಸಗಿ ವಿಮಾನಯಾನ ಸಂಸ್ಥೆಯೊಂದರ ಗಗನಸಖಿಯೊಬ್ಬರು ಗುರುಗ್ರಾಮದಲ್ಲಿನ ಡಿಎಲ್ಎಫ್ ಮೂರನೇ ಹಂತದಲ್ಲಿರುವ ಪೇಯಿಂಗ್ ಗೆಸ್ಟ್ (ಪಿ.ಜಿ) ಒಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ.
ಮೃತ ಗಗನಸಖಿಯನ್ನು ಮಿಸ್ತು ಸರ್ಕಾರ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯವರಾದ ಮಿಸ್ತು, ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಮಿಸ್ತು ತಾವು ವಾಸವಿದ್ದ ಪಿ.ಜಿ. ಮಾಲೀಕನ ದುರ್ವರ್ತನೆಯಿಂದಾಗಿ ಬೇಸೆತ್ತುಗೊಂಡಿದ್ದರು. ಆತನ ಕುರಿತು ಭಯ ಹೊಂದಿದ್ದರು ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ಮೆಟ್ರೋ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ: ಮನೆಯಲ್ಲಿ ಪತ್ನಿ, ಮಗಳು ಸಾವಿಗೆ ಶರಣು
'ಮಂಗಳವಾರ ರಾತ್ರಿ 2 ಗಂಟೆ ಸುಮಾರಿಗೆ ಕರೆ ಮಾಡಿದ್ದ ಮಗಳು, ಪಿಜಿ ಮಾಲೀಕ ಅಮರಿಂದರ್ ಸಿಂಗ್ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಳು. ಅದೇ ದಿನ ರಾತ್ರಿ ಆಕೆ ಕೆಲಸ ಮುಗಿಸಿ ಪಿ.ಜಿಗೆ ಮರಳಿದಾಗ ಅಮರಿಂದರ್ ಸಿಂಗ್ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯನ್ನು ನಿಂದಿಸಿ ಅವಮಾನಿಸಿದ್ದಾನೆ. ನನ್ನ ಜತೆ ಮಾತನಾಡುವಾಗ ಆಕೆ ಅಳುತ್ತಿದ್ದಳು. ತನ್ನ ಮೊಬೈಲ್ಅನ್ನು ಆತ ಹ್ಯಾಕ್ ಮಾಡಿದ್ದು, ಹೊರಗೆಲ್ಲೂ ಹೋಗಲು ಬಿಡುತ್ತಿಲ್ಲ ಎಂಬುದಾಗಿ ತಿಳಿಸಿದ್ದಳು' ಎಂದು ಆಕೆಯ ತಂದೆ ಹವಾಲು ಚಾಂದ್ ಸರ್ಕಾರ್ ಹೇಳಿದ್ದಾರೆ.
ಸಿಂಗ್ನ ಸತತ ಕಿರುಕುಳ ತಾಳಲಾರದೆ ಮಗಳು ಸಿಲಿಗುರಿಗೆ ವಾಪಸ್ ಬರಲು ನಿರ್ಧರಿಸಿದ್ದಳು. ಬಳಿಕ ಆಕೆ ಕರೆ ಕಟ್ ಮಾಡಿದ್ದಳು ಎಂದು ಚಾಂದ್ ಸರ್ಕಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಗಳು ಏನೋ ಮಾಡಿಕೊಂಡಿದ್ದಾಳೆ
'ಕೆಲವು ಸಮಯದ ಬಳಿಕ ಕರೆ ಮಾಡಿದ ಸಿಂಗ್, ನಿಮ್ಮ ಮಗಳು ಏನೋ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ. ನನ್ನ ಮಗಳಿಗೆ ಏನಾಯಿತು ಎಂದು ಕೇಳಿದರೆ ಆತ ತಿಳಿಸಲಿಲ್ಲ. ನಾನು ಗುರುಗ್ರಾಮ ಪೊಲೀಸರನ್ನು ಸಂಪರ್ಕಿಸಿ ಪಿ.ಜಿ. ಮಾಲೀಕನನ್ನು ವಿಚಾರಿಸುವಂತೆ ಮನವಿ ಮಾಡಿಕೊಂಡೆ' ಎಂದು ಹೇಳಿದ್ದಾರೆ.
ಫೋನಿನಲ್ಲಿ ಮಾತಾಡುವಾಗ ಸುಳಿವು ಸಿಕ್ಕಿರಲಿಲ್ಲ
'ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ವೇಳೆ, ತನ್ನ ಕೊಠಡಿಯ ಸೀಲಿಂಗ್ ಫ್ಯಾನ್ಗೆ ಆಕೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಮಾಲೀಕ ಸಿಂಗ್ನೇ ನನ್ನ ಮಗಳಿಗೆ ಏನೋ ಮಾಡಿದ್ದಾನೆ ಎಂದು ನನಗೆ ಅನುಮಾನವಿದೆ. ನನ್ನ ಮಗಳು ಖಿನ್ನಳಾಗಿದ್ದಳು. ಆದರೆ ನನ್ನ ಬಳಿ ಕೊನೆಯ ಸಲ ಫೋನಿನಲ್ಲಿ ಮಾತನಾಡುವಾಗ ಈ ರೀತಿಯ ಅತಿರೇಕದ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬ ಯಾವ ಸುಳಿವೂ ಸಿಕ್ಕಿರಲಿಲ್ಲ' ಎಂದು ಚಾಂದ್ ಸರ್ಕಾರ್ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ
ಡೆತ್ ನೋಟ್ ಸಿಕ್ಕಿಲ್ಲ
'ಆಕೆಯ ಬಳಿ ಅಥವಾ ಪಿ.ಜಿಯ ಕೊಠಡಿಯಲ್ಲಿ ಯಾವುದೇ ಆತ್ಮಹತ್ಯೆಯ ಪತ್ರ ದೊರೆತಿಲ್ಲ. ಕೋಣೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಸಿಕ್ಕಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರೊಂದಿಗೆ ಸ್ಥಳಕ್ಕೆ ಬಂದಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ' ಎಂದು ತನಿಖಾಧಿಕಾರಿ ರಾಮ್ ನಿವಾಸ್ ತಿಳಿಸಿದ್ದಾರೆ.
ಸಿಂಗ್ ವಿರುದ್ಧ ಪ್ರಕರಣ
'ಮೃತಳ ತಂದೆ ನೀಡಿರುವ ದೂರಿನ ಅನ್ವಯ, ಡಿಎಲ್ಎಫ್ ಮೂರನೇ ಹಂತದ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರ ಅನ್ವಯ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದೇವೆ. ಆರೋಪಿಯನ್ನು ಬಂಧಿಸಲು ಎಲ್ಲ ಪ್ರಯತ್ನ ನಡೆಸಿದ್ದೇವೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ ಮತ್ತು ಇತರೆ ಉದ್ಯೋಗಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ' ಎಂದು ಹೇಳಿದ್ದಾರೆ.