ರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷ
ಬೆಂಗಳೂರು, ಸೆಪ್ಟೆಂಬರ್ 06 : ಹರ್ಯಾಣದ ಗುರುಗ್ರಾಮ್ ನ ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪ್ರದ್ಯುಮ್ನ ಎಂಬ ಬಾಲಕನ ಹತ್ಯೆಯಾಗಿ ಸೆಪ್ಟೆಂಬರ್ 8ಕ್ಕೆ ಸರಿಯಾಗಿ 1 ವರ್ಷ. ಈ ದಿನವನ್ನು 'ಮಕ್ಕಳ ಸುರಕ್ಷತಾ ದಿನ'ವನ್ನಾಗಿ ಆಚರಿಸುವಂತೆ ಪ್ರದ್ಯುಮ್ನನ ತಂದೆ ವರುಣ್ ಚಂದ್ರ ಠಾಕೂರ್ ಅವರು ಆಗ್ರಹಿಸಿದ್ದಾರೆ.
ಮಕ್ಕಳಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಸುರಕ್ಷತಾ ಸಂದೇಶವಿರುವ ಬೇಟನ್ ಇಡೀ ದೇಶ ಸುತ್ತಲಿದ್ದು, ಪ್ರತಿ ರಾಜ್ಯದ ರಾಜಧಾನಿಗೆ ಆಗಮಿಸಲಿದೆ. ಎಲ್ಲ ರಾಜ್ಯಗಳನ್ನು ಸುತ್ತಿದ ನಂತರ ಈ ಬೇಟನ್ ಅನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಹಸ್ತಾಂತರಿಸಲಾಗುವುದು.
ಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳು
ಬಾಲಕ ಪ್ರದ್ಯುಮ್ನ ಹೆಸರಿನಲ್ಲಿ ಫೌಂಡೇಷನ್ ಕೂಡ ಸ್ಥಾಪಿಸಲಾಗಿದ್ದು, ಸೆಪ್ಟೆಂಬರ್ 8ನ್ನು ಮಕ್ಕಳ ಸುರಕ್ಷತಾ ದಿನವನ್ನಾಗಿ ಆಚರಿಸಬೇಕೆಂದು ಅಭಿಯಾನವನ್ನು ಆರಂಭಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಬಂಧಿತ ಇಲಾಖೆಗಳಿಗೆ ಕೂಡ ಮನವಿ ಪತ್ರವನ್ನು ಬರೆಯಲಾಗುತ್ತಿದೆ.
ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ, ಅಪರಾಧಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಉಂಟು ಮಾಡುವುದು, ಮಕ್ಕಳ ಹಕ್ಕಿಗಾಗಿ ಹೋರಾಟ ಮಾಡುವುದು ಪ್ರದ್ಯುಮ್ನ ಫೌಂಡೇಷನ್ ನ ಮೂಲ ಉದ್ದೇಶವಾಗಿದೆ.
ಪ್ರದ್ಯುಮ್ನನ ಕೊಲೆ ನಡೆದದ್ದು ಹೇಗೆ?
ಆ ಘಟನೆಯ ಬಗ್ಗೆ ವಿವರಿಸುವುದಾದರೆ, ಅದೇ ಶಾಲೆಯಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದ ಹದಿನಾರು ವರ್ಷದ ವಿದ್ಯಾರ್ಥಿಯೊಬ್ಬ ಎರಡನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಪ್ರದ್ಯುಮ್ನನನ್ನು ಸೆಪ್ಟೆಂಬರ್ 8ರಂದು ಶೌಚಾಲಯದಲ್ಲಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದ ಮತ್ತು ತನ್ನಿಂದ ಏನೂ ನಡೆದಿಲ್ಲದಿರುವ ಹಾಗೆ ಶಿಕ್ಷಕರಿಗೆ ಕೊಲೆಯ ಬಗ್ಗೆ ತಿಳಿಸಿ ನಾಟಕವಾಡಿದ್ದ.
ಪ್ರದ್ಯುಮ್ನ ಹತ್ಯೆಯ ಹಿಂದೆ ಮತ್ತೋರ್ವ ವಿದ್ಯಾರ್ಥಿ ಕೈವಾಡ
ಏನೂ ಮಾಡದೆ ಇದ್ದರೂ ಪ್ರದ್ಯುಮ್ನನ ಕೊಲೆ
ಪ್ರದ್ಯುಮ್ನ ಮತ್ತು ಹದಿನಾರು ವರ್ಷ ವಯಸ್ಸಿನ ಶಂಕಿತ ಕೊಲೆಗಡುಕ ವಿದ್ಯಾರ್ಥಿ ಮೊದಲೇ ಪರಿಚಿತರಾಗಿದ್ದರು. ಇಬ್ಬರೂ ಶಾಲೆಯಲ್ಲಿಯೇ ಪಿಯಾನೋ ಕಲಿಯುತ್ತಿದ್ದರು ಮತ್ತು ಒಟ್ಟಿಗೇ ಪಿಯಾನೋ ತರಗತಿಗೆ ಹೋಗುತ್ತಿದ್ದರು. ಪ್ರದ್ಯುಮ್ನ ಏನೂ ಮಾಡದೇ ಇದ್ದರೂ ಕೂಡ 11ನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನನನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಆ ಕೊಲೆಗೆ ಆತ ಭರ್ಜರಿ ತಯಾರಿ ನಡೆಸಿದ್ದ ಮತ್ತು ಕೊಲೆಯ ಹಿಂದಿನ ಉದ್ದೇಶ ಪೊಲೀಸರನ್ನು ಬೆಚ್ಚಿಬೀಳಿಸುವಂತಿತ್ತು.
ಪ್ರದ್ಯುಮ್ನ ಹತ್ಯೆ : ಹನ್ನೊಂದನೇ ತರಗತಿ ವಿದ್ಯಾರ್ಥಿ ವಶಕ್ಕೆ
ಬೆಚ್ಚಿ ಬೀಳಿಸಿತ್ತು ಕೊಲೆಯ ಹಿಂದಿನ ಕಾರಣ
ಓದಿನಲ್ಲಿ ಮೊದಲಿನಿಂದಲೂ ಹಿಂದೆಯಿದ್ದ ಆ ವಿದ್ಯಾರ್ಥಿ ರಯಾನ್ ಶಾಲೆಯ ಪರೀಕ್ಷೆಯನ್ನು ಮುಂದೂಡುವ ಮೂಲ ಉದ್ದೇಶದಿಂದ ಪ್ರದ್ಯುಮ್ನನ ಹತ್ಯೆಗೈದಿದ್ದ. ಅಲ್ಲದೆ, ಆ ಓದಿನಲ್ಲಿ ಹಿಂದಿದ್ದರಿಂದ ಶಿಕ್ಷಕರು ಆತನ ಪೋಷಕರನ್ನು ಶಾಲೆಗೆ ಕರೆಸಬೇಕೆಂದು ದುಂಬಾಲು ಬಿದ್ದಿದ್ದರು. ಪಾಲಕರ ಮತ್ತು ಶಿಕ್ಷಕರ ಭೇಟಿಯನ್ನು ಕೂಡ ಮುಂದೂಡುವ ಉದ್ದೇಶ ಆ ಕೊಲೆಗಡುಕನ ತಲೆ ಹೊಕ್ಕಿತ್ತು. ಇದಕ್ಕಾಗಿ ಆತ ಬಳಸಿಕೊಂಡಿದ್ದು ತನಗೆ ಪರಿಚಯವಿರುವ ಅಮಾಯಕ ಬಾಲಕ ಪ್ರದ್ಯುಮ್ನ.
ಕೊಲೆಗೆ ಆತ ಸಾಕಷ್ಟು ತಯಾರಿ ನಡೆಸಿದ್ದ
ಕೊಲೆ ಮಾಡುವುದು ಹೇಗೆಂದು ಆತ ಭಾರೀ ತಲೆ ಕೆಡಿಸಿಕೊಂಡಿದ್ದ. ಇದಕ್ಕಾಗಿ ಆತ ಅಂತರ್ಜಾಲವನ್ನು ಸಾಕಷ್ಟು ಜಾಲಾಡಿದ್ದ. ವಿಷ ಕುಡಿಸಿ ಕೊಂದರೆ ಹೇಗೆ ಎಂದು ಮೊದಲಿಗೆ ಪ್ಲಾನ್ ಹಾಕಿದ್ದ. ಈ ಕುರಿತು ಆತ ಸಾಕಷ್ಟು ಮಾಹಿತಿಗಳನ್ನೂ ಕಲೆ ಹಾಕಿದ್ದ. ಆದರೆ, ಆತ ವಿಷ ಕೊಳ್ಳಲಿಲ್ಲ. ಆತ ತಲೆಯಲ್ಲಿ ಬೇರೇನೋ ಓಡಾಡುತ್ತಿತ್ತು. ಸೆಪ್ಟೆಂಬರ್ 7ರಂದು, ಪ್ರದ್ಯುಮ್ನನನ್ನು ಕೊಲ್ಲುವ ಮುನ್ನಾದಿನ ಆತ ಅನಾಜ್ ಮಂದಿರದ ಬಳಿಯ ಅಂಗಡಿಯೊಂದರಲ್ಲಿ ಚಾಕುವನ್ನು ಕೊಂಡಿದ್ದಾನೆ. ಆದರೆ ಅದನ್ನು ಹೇಗೆ ಬಳಸುವುದು, ಹೇಗೆ ಕೊಲ್ಲುವುದು ಎಂಬ ಬಗ್ಗೆ ಗೊಂದಲವಿತ್ತು.
ಕಿರುಚಿಕೊಂಡಾನೆಂದು ಕತ್ತು ಕತ್ತರಿಸಿದ
ಮೊದಲಿಗೆ ವಿಷವನ್ನು ನೀರಿನಲ್ಲಿ ಸೇರಿಸಿ ಪ್ರದ್ಯುಮ್ನನನ್ನು ಕೊಲ್ಲುವುದೆಂದು ಲೆಕ್ಕ ಹಾಕಿದ್ದ. ಆದರೆ ಇದರಿಂದ ಆತ ಸಾಯುತ್ತಾನೋ ಇಲ್ಲವೋ ಎಂಬ ಅನುಮಾನವೂ ಆತನಿಗಿತ್ತು. ಅದಕ್ಕಾಗಿಯೇ ಆತ ಕೊಂಡಿದ್ದು ಚಾಕು. ಸರಿಯಾಗಿ ಪಿಯಾನೋ ಕ್ಲಾಸಿಗೆ ಹೋಗುವ ಮುನ್ನ ಪ್ರದ್ಯುಮ್ನ ಕಂಡಿದ್ದಾನೆ. ಆತನನ್ನು ಏನೋ ಹೇಳಿ ಪುಸಲಾಯಿಸಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಅದೇ ಸಮಯದಲ್ಲಿ ಬಸ್ ಕಂಡಕ್ಟರ್ ಕೂಡ ಅಲ್ಲಿಯೇ ಇದ್ದ. ಆತ ಅಲ್ಲಿಂದ ಹೋದ ಕೂಡಲೆ, ಮೊದಲು ಚುಚ್ಚಿ ಕೊಲೆ ಮಾಡಬೇಕೆಂದುಕೊಂಡವನು, ಪ್ರದ್ಯುಮ್ನ ಎಲ್ಲಿ ಕಿರುಚುತ್ತಾನೆಂದು ಕತ್ತು ಕತ್ತರಿಸಿ ಕೊಂದು ಹಾಕಿದ್ದಾನೆ. ಓಡೋಡುತ್ತ ಬಂದು ತೋಟದ ಮಾಲಿಗೆ ತಿಳಿಸಿದ್ದ.