ವಂಚನೆ ಪ್ರಕರಣ: ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಸಂಕಷ್ಟ
ಗುರುಗ್ರಾಮ, ಸೆಪ್ಟೆಂಬರ್ 02: ಕಾಂಗ್ರೆಸ್ಸಿನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾರ್ಬಟ್ ವಾದ್ರಾ ಅವರಿಗೆ ಮತ್ತೆ ಭೂ ಕಟಂಕ ಶುರುವಾಗಿದೆ. 2008ರ ಜಮೀನು ಹಂಚಿಕೆ ಅಕ್ರಮ ಪ್ರಕರಣದಲ್ಲಿ ರಾಬರ್ಟ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
2008ರ ಗುರುಗ್ರಾಮ(ಗುರ್ ಗಾಂವ್) ಜಮೀನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಗುರುಗ್ರಾಮದಲ್ಲಿರುವ ಡಿಎಲ್ಎಫ್ ಕಂಪೆನಿ ಹಾಗೂ ಓಂಕಾರೇಶ್ವರ ಪ್ರಾಪರ್ಟಿಸ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಾದ್ರಾ ಮತ್ತು ಹೂಡಾ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಧಿ 120ಬಿ (ಅಪರಾಧಿ ಸಂಚು), 420 (ವಂಚನೆ), 467 (ವೌಲ್ಯಯುತ ಭದ್ರತೆಯ ನಕಲು), 468 (ವಂಚನೆಯ ಉದ್ದೇಶದಿಂದ ದಾಖಲೆ ತಿದ್ದುವುದು) ಮತ್ತು 471 ( ನಕಲಿ ದಾಖಲೆಯನ್ನು ಅಸಲಿ ಎಂದು ಬಿಂಬಿಸುವುದು) ಅಡಿ ದೂರು ದಾಖಲಿಸಲಾಗಿತ್ತು.
ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿಯು ಗುರುಗ್ರಾಮದಲ್ಲಿ 7.5 ಕೋಟಿ ರೂ. ಬೆಲೆಗೆ ಜಮೀನನ್ನು ಖರೀದಿಸಿತ್ತು. ಆದರೆ, ಸದರಿ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ 55 ಕೋಟಿ ರೂ.ಗೆ ಮಾರಾಟ ಮಾಡಿದ ಆರೋಪ ರಾಬರ್ಟ್ ಮೇಲಿದೆ.