ಪ್ರದ್ಯುಮ್ನ ಹತ್ಯೆ : ಹನ್ನೊಂದನೇ ತರಗತಿ ವಿದ್ಯಾರ್ಥಿ ವಶಕ್ಕೆ
ಗುರ್ಗಾಂವ್, ನವೆಂಬರ್ 08 : ಪ್ರಮುಖ ಬೆಳವಣಿಗೆಯೊಂದರಲ್ಲಿ ಗುರ್ಗಾಂವ್ ನ ರಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದಿದ್ದ 7 ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯನ್ನು ಸಿಬಿಐ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರದ್ಯುಮ್ನ ಠಾಕೂರ್ ಹತ್ಯೆಯಲ್ಲಿ ಈ ವಿದ್ಯಾರ್ಥಿಯ ಕೈವಾಡವಿರಬಹುದು ಎಂದು ಶಂಕಿಸಲಾಗಿದ್ದು, 11ನೇ ತರಗತಿಯಲ್ಲಿ ಓದುತ್ತಿರುವ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 8ರಂದು ಶಾಲೆಯ ಶೌಚಾಲಯದಲ್ಲಿ ಪ್ರದ್ಯುಮ್ನನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಇಂಥ ಶಾಲೆಗೆ ಮಕ್ಕಳನ್ನು ಹೇಗೆ ಕಳಿಸುವುದು? ತಾಯಿಯ ಆಕ್ರಂದನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದ್ಯುಮ್ನ ಶಾಲೆಗೆ ಬರುತ್ತಿದ್ದ ವಾಹನದ ಕಂಡಕ್ಟರ್ ನನ್ನು ಬಂಧಿಸಲಾಗಿದ್ದು, ಅನೈತಿಕ ಲೈಂಗಿಕ ಕ್ರಿಯೆಯನ್ನು ಪ್ರದ್ಯುಮ್ನ ಪ್ರತಿಭಟಿಸಿದ್ದಕ್ಕೆ ಆತನ ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಆದರೆ, ಈಗ ಹಿರಿಯ ವಿದ್ಯಾರ್ಥಿಯ ಹತ್ಯೆಯಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಪ್ರದ್ಯುಮ್ನ ಶೌಚಾಲಯವನ್ನು ಪ್ರವೇಶಿಸುವಾಗ ಮತ್ತೊಬ್ಬ ವಿದ್ಯಾರ್ಥಿ ಇದ್ದಿದ್ದನ್ನು ಸಿಸಿಟಿವಿ ಫುಟೇಜ್ ದೃಢಪಡಿಸಿದೆ. ಕತ್ತು ಸೀಳಿದ ನಂತರ ಪ್ರದ್ಯುಮ್ನ ತೆವಳಿಕೊಂಡ ಹೊರಬಂದಿದ್ದ, ಸ್ಥಳದಲ್ಲಿಯೇ ಸಾವಿಗೀಡಾಗಿದ್ದ. ಒಂದು ಮಾಹಿತಿಯ ಪ್ರಕಾರ, ಹಿರಿಯ ವಿದ್ಯಾರ್ಥಿ ಪರೀಕ್ಷೆ ಮುಂದೂಡಲೆಂದು ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ನನ್ನ ಮಗನನ್ನು ನಿನ್ನೆ (ಮಂಗಳವಾರ) ರಾತ್ರಿಯೇ ಬಂಧಿಸಲಾಗಿದೆ. ಆತನಿಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಹತ್ಯೆ ಆಗಿರುವುದು ತಿಳಿಯುತ್ತಿದ್ದಂತೆ ಆತನೇ ತೋಟದ ಮಾಲಿ ಮತ್ತು ಶಿಕ್ಷಕರಿಗೆ ಮಾಹಿತಿ ತಿಳಿಸಿದ ಎಂದು ಬಂಧಿತನಾಗಿರುವ ವಿದ್ಯಾರ್ಥಿಯ ತಂದೆ ಅಳಲು ತೋಡಿಕೊಂಡಿದ್ದಾರೆ.