ಪ್ರದ್ಯುಮ್ನ ಹತ್ಯೆಯ ಹಿಂದೆ ಮತ್ತೋರ್ವ ವಿದ್ಯಾರ್ಥಿ ಕೈವಾಡ
ನವೆಂಬರ್ 10, ಹರಿಯಾಣ : ಗುರುಗಾಂವ್ ನಗರದ ರಯನ್ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಬಾಲಕ ಪ್ರದ್ಯುಮ್ನ ಠಾಕೂರ್ ಕೊಲೆ ದೇಶಾದ್ಯಂತ ಸಂಚಲನ ಸೃಷ್ಠಿಸಿತ್ತು. ಪ್ರದ್ಯುಮ್ನನ ಶವ ಕತ್ತು ಸೀಳಲ್ಪಟ್ಟ ಸ್ಥಿತಿಯಲ್ಲಿ ಶಾಲೆಯ ಬಾತ್ ರೂಮ್ ನಲ್ಲಿ ಸಿಕ್ಕಿತ್ತು.
ನಂತರದ ಬೆಳವಣಿಗೆಯಲ್ಲಿ ಕೊಲೆಯನ್ನು ಅದೇ ಶಾಲೆಯ ವಿದ್ಯಾರ್ಥಿ ಮಾಡಿದ್ದ ಎಂಬುದು ಬೆಳಕಿಗೆ ಬಂತು. ಹೊಸ ಬೆಳವಣಿಗೆಯಲ್ಲಿ ಕೊಲೆ ಮಾಡಿದ ಬಾಲಕನಿಗೆ ಸಹವರ್ತಿಯೊಬ್ಬನಿದ್ದ ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಜೊತೆಗೆ ಈ ಕೇಸಿನಲ್ಲಿ ಪೊಲೀಸರು ತೋರಿದ ಅಜಾಗರೂಕತೆ, ನಿರ್ಲಕ್ಷ್ಯದ ಬಗ್ಗೆಯೂ ಚರ್ಚೆಯಾಗುತ್ತಿದೆ. ಹಾಗಿದ್ದರೆ ಪೊಲೀಸರು ಏನು ಮಾಡಿದ್ದರು ಎಂದು ತಿಳಿಕೊಳ್ಳಲು ಮುಂದೆ ಓದಿ.
ಪ್ರದ್ಯುಮ್ನ ಹತ್ಯೆ : ಹನ್ನೊಂದನೇ ತರಗತಿ ವಿದ್ಯಾರ್ಥಿ ವಶಕ್ಕೆ
ಬಾಲಕ ಪ್ರದ್ಯುಮ್ನನ ಶವ ಪತ್ತೆಯಾದ ಕೆಲವೇ ದಿನದಲ್ಲಿ ಅದೇ ಶಾಲೆಯ ಬಸ್ ನಿರ್ವಾಹಕನೊಬ್ಬನನ್ನು ಹಿಡಿದ ಪೊಲೀಸರು ಈತನೇ ಕೊಲೆ ಮಾಡಿದ್ದಾನೆಂದು ಬಿಟ್ಟು, ಚಾರ್ಜ್ ಶೀಟ್ ಸಹ ದಾಖಲು ಮಾಡಿಬಿಟ್ಟರು. ಕೊಲೆ ಮಾಡಲು ಇದೇ ಚಾಕುವನ್ನು ಆತ ಬಳಸಿದ್ದ ಎಂದು ಚಾಕುವನ್ನೂ ತೋರಿಸಿಬಿಟ್ಟರು. ಆದರೆ ಆ ಚಾಕುವನ್ನು ಅವರು ಎಲ್ಲಿ ಜಪ್ತಿ ಮಾಡಿದ್ದರು ಎಂಬುದರ ನಿಖರ ಮಾಹಿತಿಯೇ ಎಲ್ಲಿಯೂ ಇರಲಿಲ್ಲ.
ಇಂಥ ಶಾಲೆಗೆ ಮಕ್ಕಳನ್ನು ಹೇಗೆ ಕಳಿಸುವುದು? ತಾಯಿಯ ಆಕ್ರಂದನ
ಕೊಲೆ ಪ್ರಕರಣ ಸಂಚಲನ ಸೃಷ್ಠಿಸುತ್ತದೆ ಎಂಬುದನ್ನು ಪೊಲೀಸರು ಊಹಿಸಿರಲಿಲ್ಲ ಹಾಗಾಗಿ ನಿರ್ಲಕ್ಷ್ಯದಿಂದಲೇ ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು. ಅದೇ ನಿರ್ಲಕ್ಷ್ಯತನದಿಂದ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದ್ದರು.
ಗೂಬೆ ಕೂರಿಸಿದ ಪೊಲೀಸರು
ಬಾಲಕ ಪ್ರದ್ಯುಮ್ನನ ಕೊಲೆ ಪ್ರಕರಣ ಹೈಪ್ರೊಫೈಲ್ ಶಾಲೆಯದ್ದಾದ್ದರಿಂದ ಸಹಜವಾಗಿಯೇ ದೇಶಾದ್ಯಂತ ಸುದ್ದಿಯಾಗಿ ಸಂಚಲನ ಸೃಷ್ಠಿಯಾಯಿತು. ಪೊಲೀಸರು ಮೊದಲಿಗೆ ಇದನ್ನು ಮಾಮೂಲಿ ಕೇಸೆಂದು ಅಲಕ್ಷಿಸಿ ಕೇಸಿನ ಮೇಲೆ ಹೆಚ್ಚು ಶ್ರದ್ಧೆ ತೋರಿರಲಿಲ್ಲ. ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಮಾಧ್ಯಮಗಳಿಗೆ, ಹಿರಿಯ ಅಧಿಕಾರಿಗಳಿಗೆ ತೋರಿಕೆಗೆಂದು ಹಾಗೂ ತಾವು ನಿಂದನೆಯಿಂದ ತಪ್ಪಿಸಿಕೊಳ್ಳಲು ನಿರ್ವಾಹಕನನ್ನು ಹಿಡಿದು ಅವನ ಮೇಲೆ ಕೊಲೆ ಆರೋಪ ಹೊರಿಸಲಾಯಿತು.
ಕೊಲೆಗೆ ಸಾಕ್ಷಿ ವಿಡಿಯೋದಲ್ಲೇ ಇತ್ತು
ಸಿಸಿಟಿವಿ ವಿಡಿಯೊವನ್ನು ಪೊಲೀಸರು ಸರಿಯಾಗಿ ನೋಡಿದ್ದರೆ ತನಿಖೆಯನ್ನು ಸರಿಯಾಗಿ ಮಾಡಬಹುದಿತ್ತು ಎನ್ನುತ್ತಿವೆ ರಾಷ್ಟ್ರೀಯ ಮಾಧ್ಯಮಗಳು. ಸಿಸಿಟಿವಿಯಲ್ಲೇ ಕೊಲೆ ಮಾಡಿದವನನ್ನು ಗುರುತಿಸಲು ಬೇಕಾದ ಸಾಕಷ್ಟು ಸಾಕ್ಷ್ಯಗಳು ಲಭ್ಯವಿದ್ದವು ಆದರೆ ಪೊಲೀಸರು ಸಿಸಿಟಿವಿ ವಿಡಿಯೋ ನೋಡದೆ ಕಾಟಾಚಾರಕ್ಕೆ ನಿರ್ವಾಹಕನನ್ನು ಹಿಡಿದು ಅವನ ಮೇಲೆ ಕೊಲೆ ಆರೋಪ ಹೊರಿಸಿಬಿಟ್ಟಿರು.
ಹೊಸ ಹಾದಿಯಲ್ಲಿ ತನಿಖೆ
ತನಿಖೆಯನ್ನು ಸಿ.ಬಿ.ಐ ವಹಿಸಿಕೊಂಡಿದ್ದೆ ತಡ ಪೊಲೀಸರು ಮಾಡಿದ್ದ ತನಿಖೆಯನ್ನು ಬಿಟ್ಟು ಹೊಸ ಹಾದಿಯಲ್ಲಿ ತನಿಖೆ ಪ್ರಾರಂಭ ಮಾಡಲಾಯಿತು. ಪೊಲೀಸರು ಕಲೆ ಹಾಕಿದ್ದ ದಾಖಲೆಗಳ ಸತ್ಯಾಸತ್ಯತೆಯನ್ನೂ ಸಿಬಿಐ ಪರಿಶೀಲಿಸಿತು. ಇದರಿಂದಲೇ ಪೊಲೀಸರ ನಿರ್ಲಕ್ಷ್ಯತೆ ಬಯಲಿಗೆ ಬಂದದ್ದು. ಜೊತೆಗೆ ನಿಜ ಕೊಲೆಗಾರ ಕೂಡ ಹೊರಬರುವಂತಾಯಿತು.
ಚಾಕು ಮಾರಿದವನ ಮೇಲೂ ಕೇಸು
ಪ್ರದ್ಯುಮ್ನನ ಹತ್ಯೆ ಚಾಕುವಿನಿಂದಲೇ ಆಗಿತ್ತು. ಚಾಕು ಬಳಸಿ ಭಿಕರವಾಗಿ ಪ್ರದ್ಯುಮ್ನನ ಕತ್ತು ಸೀಳಲಾಗಿತ್ತು. ಆದರೆ ಆ ಚಾಕು ನಿರ್ವಾಹಕನದ್ದಲ್ಲವೆಂದರೆ ಯಾರದ್ದು ಎಂಬ ಪ್ರಶ್ನೆಗೆ ಸಿ.ಬಿ.ಐ ಉತ್ತರ ನೀಡಿದೆ. ಕೊಲೆ ಮಾಡಿದ ಬಾಲಕ ಶಾಲೆಯ ಹತ್ತಿರದಲ್ಲಿದ್ದ ಅಂಗಡಿಯೊಂದರಿಂದ ಚಾಕು ಕೊಂಡಿದ್ದ. ಅಪ್ರಾಪ್ತನಿಗೆ ಆಯುಧ ಮಾರಿದ್ದಕ್ಕೆ ಈಗ ಅಂಗಡಿಯವನ ಮೇಲೂ ಕೇಸು ದಾಖಲಾಗಿದೆ.
ಪರೀಕ್ಷೆ ಮುಂದೂಡಿಸಲು ಕೊಲೆ!
ಅದೇ ಶಾಲೆಯಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿ ಪರೀಕ್ಷೆ ಮುಂದೂಡುವ ಕಾರಣ ಪ್ರದ್ಯುಮ್ನನನ್ನು ಕೊಲೆ ಮಾಡಿದ್ದಾನೆ ಎಂದು ಸಿಬಿಐ ತನಿಖೆಯಿಂದ ಬಹಿರಂಗವಾಗಿದೆ. ಪರೀಕ್ಷೆಗಳನ್ನು ಮುಂದೂಡುವ ಸಲುವಾಗಿ ಆ ಬಾಲಕ ಪ್ರದ್ಯುಮ್ನನ ಕೊಲೆ ಮಾಡಿದ್ದ ಎನ್ನಲಾಗುತ್ತಿದೆ.