ಕಪ್ಪತ್ತಗುಡ್ಡದ ಸುಜಲಾನ್ ಕಂಪನಿ ವಿರುದ್ಧ ನಿಂತ ಸಿಬ್ಬಂದಿ
ಗದಗ, ಜನವರಿ 29: ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದ ಸುಜಲಾನ್ ಪವನ ವಿದ್ಯುತ್ ಕಂಪನಿ ವಿರುದ್ಧ ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದ ಎದುರು ಕಾರ್ಮಿಕ ಸಂಘದವರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಕಪ್ಪತ್ತಗುಡ್ಡದಲ್ಲಿ ಸುಜಲಾನ್ ಕಂಪನಿಯಲ್ಲಿ ಕನಿಷ್ಠ ವೇತನವೂ ಇಲ್ಲದೇ ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳನ್ನೂ ಪಡೆಯದೇ 13 ವರ್ಷಗಳಿಂದ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಂಪನಿ ಈಗ ಏಕಾಏಕಿ ಇಲ್ಲದ ನೆಪ ಹೇಳಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ. ಜೊತೆಗೆ 10 ತಿಂಗಳ ಸಂಬಳ ನೀಡದೇ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ.
ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ರೈಲಿಗೆ ಅಡ್ಡ ನಿಂತರು ಜನ, ಯಾಕೆ ಗೊತ್ತಾ?
ಹೀಗಾಗಿ ಕಂಪನಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬಾಗೇವಾಡಿಯಿಂದ ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದವರೆಗೆ 22 ಕಿ.ಮೀ ವರೆಗೆ ಉತ್ತರ ಕರ್ನಾಟಕ ಮಹಾಸಭಾದ ಕಪ್ಪತ್ತಗುಡ್ಡದ ಸುಜಲಾನ್ ಕಂಪನಿ ಭದ್ರತಾ ಸಿಬ್ಬಂದಿ ಹೋರಾಟ ಸಮಿತಿ ವತಿಯಿಂದ ಪಾದಯಾತ್ರೆ ಮೂಲಕ ತಹಶೀಲ್ದಾರ ಕಾರ್ಯಾಲಯ ತಲುಪಿ ಅಹೋರಾತ್ರಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ, "13 ವರ್ಷದಿಂದ ಕಾರ್ಮಿಕರು 1500 ರಿಂದ 6000ವರೆಗೆ ಮಾತ್ರ ಸಂಬಳ ಪಡೆದಿದ್ದಾರೆ. ಆದರೆ ಈಗ ಕನಿಷ್ಠ ವೇತನವೂ ನೀಡದೇ ವಂಚಿಸಲಾಗಿದೆ. ಕಂಪನಿ ಸಿಸಿ ಕ್ಯಾಮರಾ ಮೂಲಕ ಪವನ ಯಂತ್ರಗಳನ್ನು ಸಂರಕ್ಷಿಸುತ್ತೇವೆ ಎಂದು ಹೇಳುತ್ತಿದೆ. ಜೊತೆಗೆ ಕಂಪನಿ ನಷ್ಟದಲ್ಲಿದೆ ಎಂಬ ಕುಂಟು ನೆಪ ಹೇಳುತ್ತಿದೆ. ಕೈಗಾರಿಕೆ ಸ್ಥಾಪಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕೆಂಬ ನಿಯಮವಿದೆ. ಆದರೆ 400 ಸಿಬ್ಬಂದಿಗಳ ಕಾರ್ಯವನ್ನು 130 ಜನರಿಂದ ಈವರೆಗೂ ಮಾಡಿಸಿಕೊಂಡಿದ್ದಾರೆ. ತುತ್ತಿನ ಚೀಲ ತುಂಬಿಕೊಳ್ಳುವ ಅನಿವಾರ್ಯತೆಯಿಂದ ಬಡ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಆದಾಗ್ಯೂ ಕಂಪನಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ" ಎಂದು ಕಿಡಿಕಾರಿದರು.
'ಗೋ ಬ್ಯಾಕ್ ಗವರ್ನರ್' ಚಳುವಳಿ ನಡೆಸಿದ್ಯಾಕೆ ಆ ವಿದ್ಯಾರ್ಥಿಗಳು?
ಪವನ ವಿದ್ಯುತ್ ಯಂತ್ರ ಸ್ಥಾಪನೆಯ ನೆಪದಲ್ಲಿ ರಸ್ತೆ ನಿರ್ಮಿನಿಸ ಅಪಾರ ಖನಿಜ ಸಂಪತ್ತು ಅಗೆದಿದ್ದಾರೆ. ಆ ಮಣ್ಣು ಎಲ್ಲಿಗೆ ಹೋಯಿತು? ಪವನ ಯಂತ್ರದ ಸ್ಪಾರ್ಕ್ ನಿಂದ ಕಪ್ಪತ್ತಗುಡ್ಡಕ್ಕೆ ಬೆಂಕಿ ಬಿದ್ದು ಅಪಾರ ಆಯುರ್ವೇದ ಸಂಪತ್ತಿ ನಾಶವಾಗ್ತಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ? ರಸ್ತೆ ನಿರ್ಮಾಣದ ನೆಪದಲ್ಲಿ ಗಿಡಮರಗಳನ್ನು ಕಡಿದರೂ ಅರಣ್ಯ ಇಲಾಖೆ ಏಕೆ ಮೌನವಾಗಿದೆ? ಈ ಬಗ್ಗೆ ತನಿಖೆಯಾಗಬೇಕು. ಕೂಡಲೇ 130 ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಿ ಹತ್ತು ತಿಂಗಳ ಸಂಬಳ ನೀಡಬೇಕು. ಇಲ್ಲದಿದ್ದರೆ ಜ.31ರಿಂದ ಹೋರಾಟದ ರೂಪರೇಷೆ ಬದಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧರಣಿ ಸ್ಥಳದಲ್ಲೇ ಪ್ರತಿಭಟನಾಕಾರರರು ಕಡಕ್ ರೊಟ್ಟಿ, ಚಟ್ನಿ ತಿಂದು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.