ಆನ್ ಲೈನ್ ಶಿಕ್ಷಣದ ಎಫೆಕ್ಟ್: ತಾಳಿ ಅಡವಿಟ್ಟು ಟಿವಿ ಕೊಡಿಸಿದ ಮಹಾತಾಯಿ!
ಗದಗ, ಜುಲೈ 31: ಕೂಲಿ ನಾಲಿ ಮಾಡಿಕೊಂಡು ಪ್ರತಿ ದಿನದ ಬದುಕು ಸಾಗಿಸುವ ಬಡ ಕುಟುಂಬಕ್ಕೆ ತಮ್ಮ ಮಕ್ಕಳಿಗೆ ಕೈಲಾದಷ್ಟು ಓದಿಸುವ ಹಂಬಲ. ಆದರೆ, ಕಿಲ್ಲರ್ ಕೊರೊನಾ ಸೋಂಕು ಹಾವಳಿಯಿಂದ ಶಾಲೆಗಳ ಬಾಗಿಲು ತೆಗೆದಿಲ್ಲ. ಎಲ್ಲಾ ಕಡೆಗಳಲ್ಲಿ ಆನ್ ಲೈನ್ ಶಿಕ್ಷಣ ಆರಂಭವಾಗಿದೆ. ಈ ಬಡ ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡಿಸಲು ಆಗುತ್ತಿಲ್ಲ. ಆದರೆ ಇಲ್ಲೊಬ್ಬ ತಾಯಿ ತನ್ನ ತಾಳಿಯನ್ನು ಅಡವಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾಳೆ.
ಕೊರೊನಾ ವೈರಸ್ ಹಾವಳಿಯಿಂದ ಶಿಕ್ಷಣವು ಟಿವಿ ಹಾಗೂ ಮೊಬೈಲ್ ಮೇಲೆ ಅವಲಂಬನೆಯಾಗಿದೆ. ಉಳ್ಳವರ ಮಕ್ಕಳು ಮೊಬೈಲ್ ಮೂಲಕ ಅಥವಾ ದೊಡ್ಡ ಟಿವಿ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಬಡ, ಮಧ್ಯಮ ವರ್ಗದ ಜನರಿಗೆ ಇದೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಅದರಲ್ಲೂ ಬಡ ಕುಟುಂಬಗಳಿಗೆ ಟಿವಿ ಖರೀದಿ ಮಾಡೋದು ಸವಾಲಿನ ಕೆಲಸವೇ ಸರಿ.
ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ
ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠ
ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದ ತಾಯಿ ತನ್ನ ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನು ಅಡವಿಟ್ಟು ಟಿವಿ ಕೊಡಿಸಿದ್ದಾಳೆ. ಕಸ್ತೂರಿ ಎನ್ನುವ ಮಹಿಳೆಯ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿ 8 ನೇ ತರಗತಿಯಲ್ಲಿ ಇನ್ನೋರ್ವ 7 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆದರೆ ಈಗ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನು ಕೇಳಲು ಶಿಕ್ಷಕರು ಪ್ರತಿದಿನ ಫೋನ್ ಮೂಲಕ ಕರೆ ಮಾಡಿ ಟಿವಿ ನೋಡಿ ಅಂತ ಹೇಳುತ್ತಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಮಕ್ಕಳು ಟಿವಿ ನೋಡಲು ಕಷ್ಟ ಪಡುತ್ತಿದ್ದರು
ಮನೆಯಲ್ಲಿ ಟಿವಿ ಇಲ್ಲದ ಕಾರಣ ನೋಡುವುದಕ್ಕೆ ಆಗುತ್ತಿರಲಿಲ್ಲ. ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಆಗ್ತಿರಲಿಲ್ಲ. ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟ ಪಡುತ್ತಿದ್ದರು. ಬೇರೆಯವರ ಮನೆಗೆ ಹೋದರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡುತ್ತಾರೆ. ಹೀಗಾಗಿ ನಮ್ಮ ತಾಯಿ ತನ್ನ ತಾಳಿಯನ್ನು ಅಡವಿಟ್ಟು ಟಿವಿ ಖರೀದಿ ಮಾಡಿದ್ದಾಳೆ. ಈಗ ನಿತ್ಯ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನು ಕೇಳುತ್ತಿದ್ದೇವೆ ಅಂತಾರೆ ವಿದ್ಯಾರ್ಥಿನಿ ಸುರೇಖಾ.
ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಖಂಡಿಸಿ ರಾಮನಗರದಲ್ಲಿ ಪ್ರತಿಭಟನೆ
ಮದುವೆಗಾಗಿ 1 ಲಕ್ಷ ರೂ. ಸಹ ಸಾಲ ಮಾಡಿಕೊಂಡಿದ್ದಾರೆ
ಗ್ರಾಮದಲ್ಲಿ ಅಕ್ಕಪಕ್ಕದ ಮನೆಯವರನ್ನು ಸಾಲ ಕೇಳಿದರೆ ಕೊರೊನಾ ಹಾವಳಿ ನಡುವೆ ಸಾಲವನ್ನು ಹೀಗೆ ಹಿಂದಿರುಗಿಸುತ್ತೀರಿ ಎಂದು ಸಾಲ ಕೊಡಲು ಯಾರೂ ಮುಂದೆ ಬಂದಿಲ್ಲ. ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಓರ್ವ ಹೆಣ್ಣು ಮಗಳನ್ನು ಈಗಾಗಲೇ ಮದುವೆ ಮಾಡಿ ಕೊಟ್ಟಿದ್ದಾರೆ. ಅವಳ ಮದುವೆಗಾಗಿ 1 ಲಕ್ಷ ರೂ. ಸಹ ಸಾಲ ಮಾಡಿಕೊಂಡಿದ್ದಾರೆ. ಹೀಗಾಗಿ ಗದಗ ನಗರಕ್ಕೆ ಬಂದು ತನ್ನ ತಾಳಿಯನ್ನು 20 ಸಾವಿರ ರೂಪಾಯಿ ಅಡವಿಟ್ಟು 14 ಸಾವಿರ ರುಪಾಯಿಯ 32 ಇಂಚಿನ ಟಿ ವಿ ಖರೀದಿ ಮಾಡಿದ್ದಾರೆ.
ಆನ್ ಲೈನ್ ಶಿಕ್ಷಣ ಕೊಡಿಸುವುದು ಬಡ ಕುಟುಂಬಕ್ಕೆ ಸವಾಲು
ಕಸ್ತೂರಿ ಪತಿ ಕೂಡಾ ಕೂಲಿ ಕೆಲಸ ಮಾಡ್ತಾರೆ. ಇಬ್ಬರು ಕೂಲಿ ಮಾಡಿಯೇ ಕುಟುಂಬ ಸಾಗಿಸುತ್ತಾರೆ. ಆದರೆ ಮೊದಲೇ ಕೂಲಿ ಕೆಲಸ ಇಲ್ಲದೆ ಕಂಗಾಲಾಗಿದ್ದ ದಂಪತಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ನಮ್ಮ ಮಕ್ಕಳು ಚೆನ್ನಾಗಿ ಕಲಿತರೆ ಸಾಕು, ಹಂತ ಹಂತವಾಗಿ ಹಣ ಕಟ್ಟಿ ತಾಳಿ ಬಿಡಿಸಿಕೊಳ್ಳಬಹುದು ಅಂತ ವಿಚಾರ ಮಾಡಿದ್ದಾರೆ.
ಈ ಕಿಲ್ಲರ್ ಕೊರೊನಾ ಹಾವಳಿಯಿಂದ ಇಡೀ ಮಾನವ ಕುಲವೇ ಸಂಕಷ್ಟ ಎದುರಿಸುತ್ತಿದೆ. ಅದರಲ್ಲೂ ಬಡ ಕುಟುಂಬಗಳು ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಆನ್ ಲೈನ್ ಶಿಕ್ಷಣ ಕೊಡಿಸುವುದು ಬಡ ಕುಟುಂಬಕ್ಕೆ ಸವಾಲಾಗಿ ಪರಿಣಮಿಸಿದೆ. ಆದರೆ ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನೇ ತ್ಯಾಗ ಮಾಡಿದ್ದಾಳೆ. ತಾಯಿಯ ಋಣವನ್ನು ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಎನ್ನುವುದು ಸುಳ್ಳಲ್ಲ.