ಗದಗ: ಕುಸಿದ ರಸ್ತೆ ಕಂದಕಕ್ಕೆ ಬಿದ್ದ ಬೈಕ್; ಇಬ್ಬರು ಯುವಕರ ದಾರುಣ ಸಾವು
ಗದಗ, ಸೆಪ್ಟೆಂಬರ್ 28: ಗದಗ ತಾಲೂಕಿನ ನಾಗಾವಿ ಗ್ರಾಮದ ಹೊರವಲಯದಲ್ಲಿ ಕುಸಿದಿದ್ದ ರಸ್ತೆ ಕಂದಕಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಂಜುನಾಥ್ ಮಾದರ್ (19) ಬಸವರಾಜ್ ಜವಳಬೆಂಚಿ (17) ಮೃತ ಯುವಕರು. ಲಕ್ಕುಂಡಿಯಿಂದ ಎಲೆಸಿರುಂದ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದ ಇಬ್ಬರು ಕಂದಕದಲ್ಲಿ ಬಿದ್ದು ದುರ್ಮರಣಕ್ಕೀಡಾಗಿದ್ದಾರೆ.
ಬರ್ತ್ ಡೇ ಆಚರಣೆಗೆ ಹೊರಟಿದ್ದ ಯುವಕರು
ಮಂಜುನಾಥ್ ಮಾದರ್ ಅವರ ಸಂಬಂಧಿಕರ ಮನೆಗೆ ಜನ್ಮದಿನಾಚರಣಗಾಗಿ ಸ್ನೇಹಿತ ಬಸವರಾಜ್ ಜೊತೆ ಕೇಕ್ ತೆಗೆದುಕೊಂಡು ಎಲೆಸಿರುಂದಕ್ಕೆ ಹೊರಟಿದ್ದರು. ನಾಗಾವಿ-ಬೆಳದಡಿ ಮಧ್ಯ ರಸ್ತೆ ಕಂದಕ ಬಿದ್ದಿರುವುದು ಅವರಿಗೆ ಗೊತ್ತಾಗಿರಲಿಲ್ಲ. ಸಂಜೆ ಏಳು ಗಂಟೆ ಸುಮಾರಿಗೆ ಕತ್ತಲೆಲ್ಲೇ ಬೈಕ್ ಸಾಗುವಾಗ ಕಂದಕ ಗಮನಿಸದೇ ಬಿದ್ದಿದ್ದಾರೆ.
ಪ್ರಯಾಣಿಕರಿಗೆ ಶಾಕ್: ಟ್ಯಾಕ್ಸಿ, ಆಟೋ ದರದಲ್ಲಿ ಮತ್ತಷ್ಟು ದುಬಾರಿ!
ಎಚ್ಚರಿಕೆ ಫಲಕ ಇಲ್ಲ
ರಸ್ತೆ ಕುಸಿದಿದ್ದರೂ ಬ್ಯಾರಿಕೇಡ್, ಸುರಕ್ಷತಾ ಫಲಕ ಅಳವಡಿಸದಿರುವುದೇ ಸಾವಿಗೆ ಕಾರಣ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂದಕ ಬಿದ್ದು ಸುಮಾರು ತಿಂಗಳು ಕಳಿದಿದೆ. ಹೀಗಿದ್ರೂ ಬ್ಯಾರಿಕೇಡ್ ಹಾಕಿಲ್ಲ ಮತ್ತು ಪೊಲೀಸರ ನಿಯೋಜನೆ ಮಾಡ್ಲಿಲ್ಲ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳೇ ಇಬ್ಬರು ಯುವಕರ ಸಾವಿಗೆ ಕಾರಣಕರ್ತರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೃತ ದೇಹ ಮೇಲೆತ್ತದಿರಲು ಗ್ರಾಮಸ್ಥರ ನಿರ್ಧಾರ
ಕಂದಕಕ್ಕೆ ಬಿದ್ದು ಯುವಕರ ಮೃತಪಟ್ಟಿರುವ ಹಿನ್ನಲೆ ಕುಟುಂಬಕ್ಕೆ ನೆರವಾಗುವ ಅಗತ್ಯವಿದೆ. ಹಾಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಹಾರ ಕೊಡಬೇಕು. ಹಾಗ ಮಾತ್ರ ಮೃತ ದೇಹ ಮೇಲೆತ್ತಲು ಅವಕಾಶ ಕೊಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದಾರೆ.