ಗದಗ: ಟೈಲ್ಸ್ ಫ್ಯಾಕ್ಟರಿ ಕೆಮಿಕಲ್ ನೀರು ಜಮೀನುಗಳಿಗೆ: ರೈತರು ಹೈರಾಣ
ಗದಗ, ಜುಲೈ, 26: ನಗರದ ಹೊರವಲಯದ ರೋಣ ರಸ್ತೆಯಲ್ಲಿರುವ ಟೈಲ್ಸ್ ಫ್ಯಾಕ್ಟರಿಯ ಕಲುಶಿತ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ, ರೈತರು ಹೈರಾಣಾಗಿ ಹೋಗಿದ್ದಾರೆ. ಫ್ಯಾಕ್ಟರಿಯಿಂದ ಹೊರಗಡೆ ಬಿಡುತ್ತಿರುವ ಕೆಮಿಕಲ್ ಮಿಶ್ರಿತ ನೀರು ಇದೀಗ ರೈತರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಫ್ಯಾಕ್ಟರಿ ಪಕ್ಕದಲ್ಲೇ ಹೊಂಡ ನಿರ್ಮಿಸಿ ಅದರಲ್ಲಿ ತ್ಯಾಜ್ಯ ನೀರನ್ನ ಸಂಗ್ರಹಿಸಿದ್ದಾರೆ. ಇದರ ಪರಿಣಾಮ ಕಲುಷಿತ ನೀರು ಪಕ್ಕದ ಜಮೀನುಗಳಿಗೆ ನುಗ್ಗಿವೆ. ಇದರಿಂದ ರೈತರು ಬೆಳೆದ ಬೆಳೆಗಳು ನೆಲಕಚ್ಚುತ್ತಿವೆ. ಕಲುಷಿತ ನೀರಿನಿಂದ ಮೆಕ್ಕೆಜೋಳ, ಹೆಸರು, ಶೇಂಗಾ, ಮೆಣಸಿನ ಕಾಯಿ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೇ ಹೊಲಗಳಲ್ಲಿ ನಿರ್ಮಾಣ ಮಾಡಿರುವ ಕೃಷಿ ಹೊಂಡಗಳಿಗೂ ಕೂಡ ಈ ನೀರು ಸೇರುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ರೈತರು ಈ ಬಗ್ಗೆ ಟೈಲ್ಸ್ ಫ್ಯಾಕ್ಟರಿ ಸಿಬ್ಬಂದಿಗಳಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ.
ರೈತರು ಪೊಲೀಸರ ಬಳಿ ನ್ಯಾಯ ಕೇಳಲು ಹೋದಾಗ ಅಲ್ಲಿಯೂ ಯಾವುದೇ ಪ್ರಯೋಜನೆ ಆಗಿಲ್ಲ. ಟೈಲ್ಸ್ ಫ್ಯಾಕ್ಟರಿಯವರು ದರ್ಪ ಮುಂದುವರೆಸಿದ್ದು, ಆಡಿದ್ದೇ ಆಟ ಎನ್ನುವಂತಾಗಿದೆ. ರೈತರು ತಮ್ಮ ಬೆಳೆಗಳ ಉಳಿವಿನ ನ್ಯಾಯಕ್ಕಾಗಿ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಫ್ಯಾಕ್ಟರಿ ಸಿಬ್ಬಂದಿಗಳ ದರ್ಪ ಮಿತಿ ಮೀರಿದ್ದು, ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಧಿಕಾರಿಗಳ ಸಾಥ್ನಿಂದ ಈ ರೀತಿ ದರ್ಪದಿಂದ ಮೆರೆಯುತ್ತಿದ್ದಾರೆ ಅಂತ ರೈತರು ಕಾರ್ಖಾನೆ ವಿರುದ್ಧ ಆರೋಪಿಸಿದ್ದಾರೆ.
ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಫ್ಯಾಕ್ಟರಿಯ ಕೆಮಿಕಲ್ ಮಿಶ್ರಿತ ನೀರು ಸಂಸ್ಕರಣೆ ಮಾಡದೇ ಹೊರಗೆ ಬಿಡುತ್ತಿದ್ದಾರೆ. ಈ ನೀರನ್ನು ಸೇವಿಸಿದ ಎಷ್ಟೋ ಜಲಚರಗಳು ಪ್ರಾಣ ಕಳೆದುಕೊಂಡಿವೆ. ಫ್ಯಾಕ್ಟರಿಯ ಕಲುಷಿತ ನೀರು ಹೊರಹೋಗಲು ಯಾವ ಪರ್ಯಾಯ ಮೂಲಗಳು ಇಲ್ಲ. ಕೊನೆಗೆ ನಾಲೆ ಮೂಲಕವಾದರೂ ಹೊರಗಡೆ ಹರಿಬಿಡುತ್ತಿಲ್ಲ. ಬದಲಾಗಿ ಕಲುಷಿತ ನೀರನ್ನು ನೇರವಾಗಿ ಹೊರಗಡೆ ಬಿಡುತ್ತಿರುವುದು, ರೈತರ ಜಮೀನುಗಳಿಗೆ ಹಾನಿಯಾಗುತ್ತಿದೆ.
ಜಮೀನುಗಳ ಪಕ್ಕದಲ್ಲಿಯೇ ಕೆಮಿಕಲ್ ನೀರು ಸಂಗ್ರಹ ಮಾಡಿರುವುದರಿಂದ ಯಾವ ಬೆಳೆಯಿಂದಲೂ ಸರಿಯಾದ ಫಸಲು ಬರುತ್ತಿಲ್ಲ ಎಂದು ರೈತರು ತಮ್ಮ ಗೋಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನಮ್ಮ ಕಷ್ಟಗಳನ್ನು ಯಾರಿಗೆ ಹೇಳೋದು ಅಂತಿದ್ದಾರೆ ಇಲ್ಲಿನ ರೈತರು.
ಸಾಮಾನ್ಯವಾಗಿ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಪ್ರಕೃತಿ ದತ್ತವಾಗಿ ರೋಗಗಳು ಬರುವುದು ಸಹಜ. ಈ ರೋಗಗಳು ಬಹಳ ದಿನ ಇರುವುದಿಲ್ಲ. ಇನ್ನು ಕೆಲವರು ರೈತರ ಜಮೀನುಗಳ ಪಕ್ಕದಲ್ಲೇ ಕಾರ್ಖಾನೆಗಳನ್ನು ಕಟ್ಟಿಕೊಂಡು ಬಿಡುತ್ತಾರೆ. ಇಂತಹವರಿಂದ ರೈತರು ಪ್ರತಿನಿತ್ಯವೂ ಕಿರುಕುಳ ಅನುಭವಿಸುವಂತಾಗಿದೆ. ಅಧಿಕಾರಿಗಳನ್ನು ಕೂಡ ತಮ್ಮ ಪರವಾಗಿ ಇಟ್ಟುಕೊಂಡು ರೈತರಿಗೆ ಯಾವುದೇ ಸಹಾಯವಾಗದಂತೆ ಮಾಡಿಬಿಡುತ್ತಾರೆ.
ಅಷ್ಟೇ ಅಲ್ಲ ಕಾರ್ಖಾನೆಗಳಿಂದ ನೀರನ್ನು ಸಂಸ್ಕರಣೆ ಮಾಡದೇ ನೇರವಾಗಿ ರೈತರ ಜಮೀನುಗಳಿಗೆ ಬಿಡುತ್ತಿದ್ದು, ದರ್ಪ ಮೆರೆಯುತ್ತಿದ್ದಾರೆ. ಇನ್ನೂ ದರ್ಪ ತೋರುವ ಕಾರ್ಖಾನೆಗಳ ಪರವಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ರೈತರು ಕಿಡಿಕಾರುತ್ತಿದ್ದಾರೆ. ಕಾರ್ಖಾನೆ ಮಾಲಿಕನ ವಿರುದ್ಧವೂ ಜಿಲ್ಲೆಯಲ್ಲಿ ಎಲ್ಲೆಡೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.