ಗದಗದಲ್ಲಿ ಹರಕೆ ತೀರಿಸಿ ಮರಳುವಾಗ ಅಪಘಾತ; ಒಂದೇ ಕುಟುಂಬದ ಮೂವರ ಸಾವು
ಗದಗ, ಮಾರ್ಚ್ 10: ದೇವರಿಗೆ ಹರಕೆ ತೀರಿಸಿ ಮರಳುತ್ತಿದ್ದ ಸಂದರ್ಭ ಕಾರು ಪಲ್ಟಿಯಾಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ವೇಳೆಗೆ ಗದಗದಲ್ಲಿ ನಡೆದಿದೆ.
ಜಿಲ್ಲೆಯ ಲಕ್ಕುಂಡಿ ಬೂದಿ ಬಸವೇಶ್ವರ ದೇವಸ್ಥಾನ ಬಳಿ ಈ ನಡೆದಿದೆ. ಬಿಜೆಪಿ ಕೊಪ್ಪಳ ನಗರ ಘಟಕದ ಮಾಜಿ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶಿವಕುಮಾರ್ ಹಕ್ಕಾಪಕ್ಕಿ ಅವರ ಅತ್ತೆ, ಹೆಂಡತಿ ಹಾಗೂ ಮಗು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಾಯವಾಗಿದೆ.
ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ದಾರಿಯಲ್ಲಿ ಕಾದು ನಿಂತಿದ್ದ ಜವರಾಯ
ಪ್ರಮೀಳಾ ಮಸ್ಕಿ (68), ಯಶೋಧಾ ಹಕ್ಕಾಪಕ್ಕಿ (43) ಮತ್ತು ಒಂದೂವರೆ ವರ್ಷದ ಆರ್ಯಾ ಸಾವನ್ನಪ್ಪಿದವರು. ಅವಳಿ ಜವಳಿ ಮಕ್ಕಳಲ್ಲಿ ಗಂಡು ಮಗು ಆರ್ಯಾ ಸಾವನ್ನಪ್ಪಿದ್ದು, ಹೆಣ್ಣು ಮಗು ಬದುಕುಳಿದೆ. ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದುವೆಯಾಗಿ ಬಹಳ ವರ್ಷಗಳಾದರೂ ಹಕ್ಕಾಪಕ್ಕಿ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನವಲಗುಂದದ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ಕಟ್ಟಿಕೊಂಡಿದ್ದರು. ಒಂದೂವರೆ ವರ್ಷದ ನಂತರ ಮಕ್ಕಳಾಗಿತ್ತು. ಹೀಗಾಗಿ ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ಸೋಮವಾರ ಹರಕೆ ತೀರಿಸಿ ಕೊಪ್ಪಳಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಲಕ್ಕುಂಡಿ ಬೂದಿ ಬಸವೇಶ್ವರ ದೇವಸ್ಥಾನ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಉಳಿದಿದ್ದ ಶಿವಕುಮಾರ್ ಹಕ್ಕಾಪಕ್ಕಿ ಮತ್ತು ಇನ್ನೊಂದು ಅವಳಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.