ಜನರ ಪ್ರಾಣ ರಕ್ಷಣೆಗೆ ಎದೆಯೊಡ್ಡಿದ ಪೊಲೀಸರ ಪ್ರಾಣ ತ್ಯಾಗದ ಕಥೆ ಹೇಳುವ ಲಡಾಯಿ ಕಟ್ಟೆ
ಗದಗ, ಜುಲೈ 26: ಕರ್ತವ್ಯದ ಸಮಯದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ನಿಜಾಮರ ಸೈನಿಕರ ಗುಂಡಿನ ದಾಳಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ ಪೊಲೀಸರ ಮತ್ತು ಧೈರ್ಯ, ಸಾಹಸ ಸ್ಮರಿಸುವ ಲಡಾಯಿ ಕಟ್ಟೆಯೊಂದು ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಮತ್ತು ಸಂಗನಾಳ ಗ್ರಾಮದ ಮಧ್ಯದ ಹೊಲದಲ್ಲಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಡುತ್ತಿದ್ದ ಪ್ರದೇಶಗಳು ಭಾರತದ ಒಕ್ಕೂಟಕ್ಕೆ ಸೇರಿರಲಿಲ್ಲ. ಅಖಂಡ ಧಾರವಾಡ ಜಿಲ್ಲೆಯ ಹಾಲಕೆರೆ ಗ್ರಾಮವು ಮುಂಬೈ ಪ್ರಾಂತ್ಯದ ಕಟ್ಟಕಡೆಯ ಗ್ರಾಮವಾಗಿತ್ತು. ಶೇ 80ರಷ್ಟು ಈ ಗ್ರಾಮದ ರೈತರ ಜಮೀನುಗಳು ಹೈದರಾಬಾದ್ ಪ್ರಾಂತ್ಯದ ಗ್ರಾಮಗಳಾದ ಮುಧೋಳ, ಕರಮುಡಿ, ಯಲಬುರ್ಗಾ, ಕುಕನೂರ, ಸಂಗನಾಳ ಸೀಮೆಯಲ್ಲಿದ್ದವು. ಇವರೆಲ್ಲರೂ ನಿಜಾಮನ ಸೈನಿಕರಿಂದ ಸದಾ ತೊಂದರೆಯನ್ನು ಅನುಭವಿಸುತ್ತಿದ್ದರು.
ಕಾರ್ಗಿಲ್ ವಿಜಯ್ ದಿವಸ್ 2022: ಈ ದಿನದ ಇತಿಹಾಸ, ಮಹತ್ವ ಮತ್ತು ವಿಶೇಷತೆ ತಿಳಿಯಿರಿ
ಜಮೀನಿನಲ್ಲಿ ಏನೇ ಬೆಳೆ ಬೆಳೆದರೂ ಅದನ್ನು ಆ ಪ್ರಾಂತ್ಯದ ಗ್ರಾಮಗಳಲ್ಲಿಯೇ ಮಾರಬೇಕಾಗಿತ್ತು. ಹೊಲದಲ್ಲಿ ಬೆಳೆದ ಫಸಲು, ದನಗಳಿಗೆ ಹೊಟ್ಟು ಮೇವು ಮನೆಗೆ ತರಲು ಅವಕಾಶ ಇರಲಿಲ್ಲ. ಕೆಲವೊಮ್ಮೆ ಗುಂಪು ಗುಂಪಾಗಿ ಹಾಲಕೆರೆಗೆ ಬಂದು ದರೋಡೆ ಮಾಡುತ್ತಿದ್ದರು.
ರಜಾಕರ ಹಾಗೂ ನಿಜಾಮನ ಅನುಯಾಯಿಗಳ ಹಾವಳಿ ಮಿತಿಮೀರಿದಾಗ ಗ್ರಾಮದಲ್ಲಿ ಆಡಳಿತ ನಡೆಸುತ್ತಿದ್ದ ರಾವ್ ಬಹದ್ದೂರ್ ಮನೆತನದವರು ಹಾಗೂ ಮುಖಂಡರು ಸ್ವಾತಂತ್ರ್ಯದ ನಂತರ ಬಾಂಬೆ ವಿಭಾಗದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಬಾಲಾಸಾಹೇಬ ಗಂಗಾಧರ ಖೇರ್ ಅವರ ಗಮನಕ್ಕೆ ತರುತ್ತಾರೆ. ಆಗ ಹಾಲಕೆರೆ ಸೀಮೆಯಲ್ಲಿ ಧಾರವಾಡ ಜಿಲ್ಲೆ ವತಿಯಿಂದ ಪೊಲೀಸರ ನೇಮಕ ಮಾಡಿದ್ದರು ಎಂದು ಗ್ರಾಮಸ್ಥರು ಸ್ಮರಿಸಿದರು.
ಕಾರ್ಗಿಲ್ ವಿಜಯ್ ದಿವಸ್: ಸೈನಿಕರ ಪರಾಕ್ರಮದ ಕಥೆ ಬಿಚ್ಚಿಟ್ಟ ಸೈನಿಕರು
ಗ್ರಾಮದ ಆಸ್ತಿ ಹಾಗೂ ನಾಗರಿಕರ ಪ್ರಾಣ, ಮಾನ, ಆಸ್ತಿ ಕಾಪಾಡಲು ಹಗಲು ರಾತ್ರಿಗಳೆನ್ನದೇ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. 1948 2ನೇ ಮಾರ್ಚ್ ರಂದು ರಜಾಕರು ಗುಂಪು-ಗುಂಪಾಗಿ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಾರೆ. ಊರಿನ ಸಂಪತ್ತನ್ನು ಲೂಟಿ ಮಾಡಲು ಪ್ರಯತ್ನಿಸುತ್ತಾರೆ. ಆಗ ಕಾವಲಿಗಿದ್ದ ಪೊಲೀಸರು ಹಾಗೂ ರಜಾಕರ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ.
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಹಲವಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಇವರ ಜೊತೆಗಿದ್ದ ಕರ್ತವ್ಯ ಪಾಲನೆಯಲ್ಲಿದ್ದ ಕಾನ್ಸ್ಟೇಬಲ್ಗಳಾದ ರಾಮಪ್ಪ ಪವಾರ, ವೀರನಗೌಡ ಅಯ್ಯನಗೌಡ್ರ ಜೀವದ ಹಂಗನ್ನು ಬದಿಗಿಟ್ಟು ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುವಾಗ ನಿಜಾಮನ ಸೈನಿಕರ ಗುಂಡಿನ ದಾಳಿಗೆ ಪ್ರಾಣತ್ಯಾಗ ಮಾಡುತ್ತಾರೆ. ನಂತರದ ದಿನಗಳಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದ ಮೇಲೆ ಮುಂಬೈ ಸರ್ಕಾರ ಗಡಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಿ ಹಾವಳಿಯನ್ನು ತಡೆಯುವಲ್ಲಿ ಯಶಸ್ವಿಯಾಗುತ್ತದೆ.
ಗೌರವ ಸಲ್ಲಿಸಲು ಬರಲ್ಲ; ಕಾನ್ಸ್ಟೇಬಲ್ಗಳ ಸಾಹಸದ ಸ್ಮರಣಾರ್ಥವಾಗಿ 3ನೇ ಮಾರ್ಚ್ 1948 ರಂದು ಹಾಲಕೆರೆಯಿಂದ ಸಂಗನಾಳ ಕಡೆಗೆ ಹೋಗುವ ಗಡಿ ಭಾಗದ ಹೊಲದಲ್ಲಿ ಅವರ ಹೆಸರಿನಲ್ಲಿ ಲಡಾಯಿ ಕಟ್ಟೆಯನ್ನು ಗ್ರಾಮಸ್ಥರ ಸಹಕಾರದಲ್ಲಿ ಸರಕಾರ ನಿರ್ಮಿಸಿದೆ.
ಆದರೆ ವಿಪರ್ಯಾಸವೆಂದರೆ ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸಲು ಇಲಾಖೆಯವರು 39 ವರ್ಷಗಳಿಂದ ಬರುತ್ತಿಲ್ಲ. ಲಡಾಯಿ ಕಟ್ಟೆ ಅನಾಥವಾಗಿದೆ. ಈ ವರ್ಷದಿಂದಾರೂ ಈ ಮೊದಲಿನ ಪದ್ಧತಿಯಂತೆ ಲಡಾಯಿಕಟ್ಟೆಗೆ ಬಂದು ಸ್ಮರಿಸುವ ಕಾರ್ಯ ಆರಂಭವಾಗಬೇಕೆನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
Recommended Video