ಫೋಟೋ ಸಾಕ್ಷ್ಯ: ಅಸ್ಪೃಶ್ಯತೆ ನಿವಾರಣೆ ಜಾಗೃತಿ ಮೂಡಿಸಿದ ತಹಶೀಲ್ದಾರ್!
ಗದಗ, ಮಾರ್ಚ್.06: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 21ನೇ ಶತಮಾನದ ಕಾಲದಲ್ಲೂ ಅಸ್ಪೃಶ್ಯತೆ ಜಾರಿಯಲ್ಲಿದೆ. ಮೇಲು-ಕೀಳು ಎಂಬ ಬೇಧ-ಭಾವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಂಡರಗಿ ತಾಲೂಕು ತಹಶೀಲ್ದಾರ್ ಆಶಪ್ಪ ಪೂಜಾರ ತೋರಿದ ದಿಟ್ಟತನಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿರುವ ವಿಷಯ ತಿಳಿದ ತಹಶೀಲ್ದಾರ್ ಆಶಪ್ಪ ಪೂಜಾರ ಅವರು ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮದ ಸವರ್ಣಿಯರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯ ಮಾಡಿದರು.
ಪರಿಶಿಷ್ಟರಿಗೆ ಕ್ಷೌರ ಮಾಡಿದ್ದಕ್ಕೆ ಕ್ಷೌರಿಕನಿಗೇ ಸಾಮಾಜಿಕ ಬಹಿಷ್ಕಾರ
ಅಸ್ಪೃಶ್ಯತೆ ನಿವಾರಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಆಶಪ್ಪ ಪೂಜಾರ ಅವರು ಸ್ವತಃ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಕುಡಿದು ಬಿಟ್ಟ ಚಹಾ ಕಪ್ಪನ್ನು (ಗ್ಲಾಸ್) ತೊಳೆದರು.
ಚಹಾ ಅಂಗಡಿಯಲ್ಲಿ ಕೆಳವರ್ಗದವರಿಗೆ ಪ್ರವೇಶವಿಲ್ಲ
ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಬಹಳ ದಿನಗಳಿಂದ ಅಸ್ಪಶ್ಯತೆಯನ್ನು ಆಚರಣೆ ಮಾಡಲಾಗುತ್ತಿತ್ತು. ಕೆಳವರ್ಗದ ಜನರನ್ನು ಚಹಾ ಅಂಗಡಿ, ಹೋಟೆಲ್ ಗಳಲ್ಲಿ ಬಿಟ್ಟುಕೊಳ್ಳುವುದಕ್ಕೂ ನಿರಾಕರಿಸಲಾಗುತ್ತಿತ್ತು. ಇಂಥ ಆಚರಣೆ ಬಗ್ಗೆ ಹಲವು ಬಾರಿ ದೂರುಗಳನ್ನು ನೀಡಲಾಗಿತ್ತು. ಇನ್ನು ಅಸ್ಪಶ್ಯತೆ ಆಚರಣೆ ಇಷ್ಟಕ್ಕೆ ನಿಂತಿರಲಿಲ್ಲ.
ಚಹಾ ಅಂಗಡಿಗಳನ್ನು ಬಂದ್ ಮಾಡುವ ಪರಿಪಾಟಲು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರನ್ನು ಚಹಾ ಅಂಗಡಿಯಲ್ಲಿ ಬಿಟ್ಟುಕೊಳ್ಳದಿರುವುದು ಒಂದು ಆಚರಣೆಯಾಗಿತ್ತು. ಇದರ ಜೊತೆಗೆ ಈ ಹಿಂದೆ ಎಸ್ ಸಿ ಮತ್ತು ಎಸ್ ಟಿ ಕುಟುಂಬಗಳಲ್ಲಿ ಸಾವು ಸಂಭವಿಸಿದರೆ ಸವರ್ಣೀಯರು ಇಡೀ ಗ್ರಾಮದಲ್ಲಿರುವ ಎಲ್ಲ ಚಹಾ ಅಂಗಡಿಗಳನ್ನು ಬಂದ್ ಮಾಡುತ್ತಿದ್ದರು.
ಕೆಳವರ್ಗದ ಜನರಿಗೆ ಕ್ಷೌರ ಮಾಡುವುದಕ್ಕೂ ನಿಷೇಧ
ಚಹಾ ಅಂಗಡಿಗಳದ್ದು ಒಂದು ಕಥೆಯಾದರೆ ಕ್ಷೌರಿಕ ಅಂಗಡಿಗಳಲ್ಲಿ ಇನ್ನೊಂದು ರೀತಿಯ ಆಚರಣೆ ಜಾರಿಯಲ್ಲಿತ್ತು. ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿರುವ ಕ್ಷೌರಿಕ ಅಂಗಡಿಗಳಲ್ಲಿ ಕೆಳವರ್ಗದ ಜನರಿಗೆ ಕಟಿಂಗ್, ಶೇವಿಂಗ್ ಮಾಡುವುದನ್ನು ನಿಷೇಧಿಸಲಾಗಿತ್ತು.
Recommended Video
ಗ್ರಾಮಸ್ಥರಲ್ಲಿ ಅಧಿಕಾರಿಗಳಿಂದ ಜಾಗೃತಿ ಮೂಡಿಸುವ ಕಾರ್ಯ
ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ತಹಶೀಲ್ದಾರ್ ಆಶಪ್ಪ ಪೂಜಾರಿ, ಸಿಪಿಐ ಸುಧೀರ್ ಕುಮಾರ್ ಬೆಂಕಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಅವರು ಜಾಗೃತಿ ಸಭೆ ನಡೆಸಿದರು. ಗ್ರಾಮಸ್ಥರೊಂದಿಗೆ ಚಹಾದ ಅಂಗಡಿಗೆ ಹೋಗಿ ಚಹಾ ಗ್ಲಾಸ್ ತೊಳೆಯುವ ಮೂಲಕ ಜಾಗೃತಿ ಮೂಡಿಸಿ, ಮಾದರಿ ಎನಿಸಿದರು. ಈ ವೇಳೆ ಕಂದಾಯ ನಿರೀಕ್ಷಕ ಎಂ.ಎ.ನದಾಫ್, ಹಾರೋಗೇರಿ ಗ್ರಾಪಂ ಪಿಡಿಒ ಮಹೇಶ್ ಅಲ್ಲಿಪೂರ ಅವರ ಜೊತೆಗಿದ್ದರು.