ದೆಹಲಿ ಹಿಂಸಾಚಾರ; 'ಸ್ವಾತಂತ್ರ್ಯಾನಂತರ ಇಂತಹ ಹೇಯ ಘಟನೆ ನಡೆದಿರಲಿಲ್ಲ'
ಗದಗ, ಫೆಬ್ರವರಿ 27; ದೆಹಲಿ ಹಿಂಸಾಚಾರದ ಹೊಣೆ ಹೊತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಆಗ್ರಹಿಸಿದ್ದಾರೆ.
ಗದಗನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ಇಂತಹ ಹೇಯ ಘಟನೆ ನಡೆದಿರಲಿಲ್ಲ ಎಂದು ಆರೋಪಿಸಿದರು. ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಮೇಲೆ ಎಫ್ಐಆರ್ ಹಾಕಬೇಕಿತ್ತು. ಈ ಮೂವರಿಗೆ ಮೂಗುದಾರ ಹಾಕಿ ನಿಯಂತ್ರಿಸುವ ಬದಲು ಗೃಹ ಸಚಿವರು ನಾಚಿಕೆಗೇಡಿತನದ ಹೇಳಿಕೆ ನೀಡುತ್ತಾರೆ. ಬಿಜೆಪಿ ಮುಖಂಡರ ಬಾಯಲ್ಲಿನ ಹೇಳಿಕೆಗಳು ದೆಹಲಿಯನ್ನು ಉರಿಯುವಂತೆ ಮಾಡಿವೆ. ಬೆಂಕಿಯಲ್ಲಿ ಪೆಟ್ರೋಲ್ ಎಸದಂತೆ ಮಾಡಿವೆ. ಇದನ್ನೆಲ್ಲಾ ನಿಯಂತ್ರಣ ಮಾಡಬೇಕಾದ ಅಮಿತ್ ಶಾ ಎಲ್ಲಿದ್ದಾರೆ. ಮಾನ ಮರ್ಯಾದೆ ಇದ್ದರೆ ಇವರು ತಕ್ಷಣ ರಾಜೀನಾಮೆ ನೀಡಲಿ ಎಂದು ಎಸ್.ಆರ್. ಹಿರೇಮಠ ಒತ್ತಾಯಿಸಿದರು.
ಹೋರಾಟಗಾರ ಎಸ್ ಆರ್ ಹಿರೇಮಠ್ ಮೇಲೆ ಹಲ್ಲೆ ಆಗಿದ್ದು ಏಕೆ?
ದೆಹಲಿ ಗಲಭೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. 200 ಜನರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಪೊಲೀಸರ ಗುಂಡೇಟು ಇವರೆಲ್ಲರ ಸಾವಿಗೆ ಕಾರಣವಾಗಿದೆ. ದೆಹಲಿ ಪೊಲೀಸರು ಗಲಭೆ ನಿಯಂತ್ರಿಸಲು ವಿಫಲರಾಗಿದ್ಧಾರೆ. ಜವಾಬ್ದಾರಿ ಮರೆತಿರುವ ಗೃಹ ಮಂತ್ರಿ ರಾಜೀನಾಮೆ ನೀಡಬೇಕು. ಇವರು ರಾಜೀನಾಮೆ ನೀಡದಿದ್ದರೆ ಪ್ರಧಾನಿಗಳು ಇವರನ್ನು ಕಿತ್ತೆಸೆಯಬೇಕು ಎಂದರು.
ಅಮಿತ್ ಶಾ ಈಗಾಗಲೇ ಜೈಲಿಗೆ ಹೋಗಿ ಬಂದಿದ್ಧಾರೆ. ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರಲು ಅವರು ಯೋಗ್ಯರಲ್ಲ. ಮುಂದಿನ ಭವಿಷ್ಯದ ಬಗ್ಗೆ ಕಾಳಜಿ ಇರುವವರು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಹಿರೇಮಠ ಹೇಳಿದರು.