ವೈರಲ್ ವಿಡಿಯೋ: ಕುರಿ ಕಾಯುವನ ಹಾಡಿಗೆ ಕರ್ನಾಟಕ ಫಿದಾ
ಬೆಂಗಳೂರು, ಜೂನ್ 09: ಗದಗ ಜಿಲ್ಲೆ ಶಿರಹಟ್ಟಿಯ ಕುರಿಗಾಹಿಯೊಬ್ಬನ ಕಂಠಕ್ಕೆ ಕರ್ನಾಟಕ ಫಿದಾ ಆಗಿದೆ. ಅವನ ಧ್ವನಿಯಲ್ಲಿನ ಏರಿಳಿತ ಸಂಗೀತ ಪ್ರಿಯರ ತಲೆದೂಗುವಂತೆ ಮಾಡಿದೆ.
ಕುರಿ ಕಾಯುವ ಕಾಯಕದಲ್ಲಿ ನಿರತನಾಗಿದ್ದಾಗಲೇ 'ಸಾಗರಿಯೇ ಸಾಗರಿಯೇ..' ಹಾಡನ್ನು ಹಾಡಿ ಹನುಮಂತ ಬಟ್ಟೂರ ಒಂದೇ ದಿನದಲ್ಲಿ ಫೇಮಸ್ ಆಗಿಬಿಟ್ಟಿದ್ದಾನೆ. ಅವರ ಹಾಡಿನ ಮಾಧುರ್ಯ ಹಾಗಿದೆ.
ಕುರಿ ಕಾಯುವ ಸಮಯದಲ್ಲಿ ಮೊಬೈಲ್ ವಿಡಿಯೋ ಆನ್ ಮಾಡಿಕೊಂಡು ಹಾಡು ಹಾಡಿರುವ ಹನುಮಂತ ಬಟ್ಟೂರ ಆ ನಂತರ ಅದನ್ನು ಫೇಸ್ಬುಕ್ಗೆ ಹಾಕಿದ್ದಾರೆ. ಅಲ್ಲಿಂದ ಅವರ ಅದೃಷ್ಠವೇ ಬದಲಾಗಿದೆ ಅವರ ಹಾಡು ಒಂದೇ ರಾತ್ರಿಗೆ ಕನ್ನಡಿಗರ ಮನಗೆದ್ದಿದೆ.
ಪತ್ರಿಕೆಗಳು, ಟಿವಿಗಳು ಅವರ ಹಿಂದೆ ಬಿದ್ದು ಸಂದರ್ಶನ ಪಡೆದುಕೊಂಡಿವೆ. ಶಮಿತಾ ಮಲ್ನಾಡ್ ಸೇರಿ ಹಲವು ಖ್ಯಾತನಾಮ ಗಾಯಕರು ಕುರಿಗಾಹಿ ಹಾಡುಗಾರನ ಹಾಡಿಗೆ ಶಹಬ್ಬಾಸ್ ಹೇಳಿದ್ದಾರೆ.
ಮುಂಚಿನಿಂದಲೂ ಡಾ.ರಾಜ್ಕುಮಾರ್ ಅಭಿಮಾನಿ ಆಗಿರುವ ಹನುಮಂತ ಓದಿರುವುದು ಎಸ್ಎಸ್ಎಲ್ಸಿ ಮಾತ್ರ. ಕುಲವೃತ್ತಿ ಮಾಡಿಕೊಂಡು ಹೊರಟಿರುವ ಇವರಿಗೆ ಸಂಗೀತದ ರಿಯಾಲಿಟಿ ಶೋಗಳೆಂದರೆ ಅಚ್ಚುಮೆಚ್ಚಂತೆ.
ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿರುವ ಡಾನ್ಸರ್ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಇಷ್ಟೆಲ್ಲಾ ಆದಮೇಲೆ ಕನ್ನಡದ ಸಿಂಗಿಂಗ್ ರಿಯಾಲಿಟಿ ಶೋಗಳು ಸುಮ್ಮನೆ ಬಿಡುತ್ತವೆಯೇ. ಹತ್ತಿರದಲ್ಲೇ ಹನುಮಂತ ಬಟ್ಟೂರ ಅವರನ್ನು ಯಾವುದಾದರೊಂದು ರಿಯಾಲಿಟಿ ಶೋನಲ್ಲಿ ಕನ್ನಡಿಗರು ನೋಡುವುದು ಖಾತ್ರಿ ಎನ್ನಲಾಗುತ್ತಿದೆ.