ಲಿಂಗಾಯತ ಪ್ರತ್ಯೇಕ ಧರ್ಮ : ಕೇಂದ್ರದ ನಿಲುವು ಖಂಡಿಸಿದ ಗದಗ ಜಗದ್ಗುರು
ಗದಗ, ಡಿಸೆಂಬರ್ 10 : ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕರ್ನಾಟಕ ಸರಕಾರ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದು ವಿವೇಚನಾ ರಹಿತ ಕ್ರಮವಾಗಿದೆ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಬಲವಾಗಿ ಖಂಡಿಸಿದ್ದಾರೆ.
ಸಮಸ್ತ ಲಿಂಗಾಯತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಈ ಸಂವಿಧಾನ ವಿರೋಧಿ ಕ್ರಮವನ್ನು ವಿರೋಧಿಸುವುದಾಗಿ ಮಹಾಸ್ವಾಮಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸು ತಿರಸ್ಕಾರ, ಹೈಕೋರ್ಟಿಗೆ ಮಾಹಿತಿ
ಲಿಂಗಾಯತರು ತಮ್ಮ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಳುತ್ತಿರುವುದು ಯಾವುದೇ ಭಿಕ್ಷೆಯಲ್ಲ, ಅದು ಲಿಂಗಾಯತರ ಸಂವಿಧಾನ ಬದ್ಧವಾದ ಹಕ್ಕು. ಕೇಂದ್ರ ಸರಕಾರವು ಈ ಧರ್ಮಕ್ಕೆ ಮಾನ್ಯತೆಯನ್ನು ನೀಡುವ ಮೂಲಕ ಕೋಟ್ಯಂತರ ಲಿಂಗಾಯತರ ಭಾವನೆಗಳನ್ನು ಗೌರವಿಸಬೇಕಾಗಿತ್ತು ಎಂಬುದು ಶ್ರೀಗಳ ಅಭಿಪ್ರಾಯ. ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆದಿರುವ ಹೋರಾಟ ಜೈನ, ಬೌದ್ಧ, ಸಿಖ್ಖ ಧರ್ಮೀಯರಂತೆ ಲಿಂಗಾಯತರ ಅಸ್ಮಿತೆಯ ಹೋರಾಟವಾಗಿದೆ ಎಂದಿದ್ದಾರೆ ಅವರು.
ಭಾರತದ ಪ್ರಪ್ರಥಮ ವಿಚಾರವಾದಿ ಎನಿಸಿದ ಜಗತ್ತಿಗೆ ಮೊಟ್ಟ ಮೊದಲ ಪಾರ್ಲಿಮೆಂಟ್ನ್ನು ಪರಿಚಯಿಸಿದ ಮಹಾ ಮಾನವತಾವಾದಿ ಬಸವಣ್ಣನವರನ್ನು ಕುರಿತು ಸಾಕಷ್ಟು ಅಧ್ಯಯನ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಆಶ್ಚರ್ಯ ಮತ್ತು ಆಘಾತವನ್ನುಂಟು ಮಾಡಿದೆ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.
ಲಿಂಗಾಯತ ಧರ್ಮವು ತಾತ್ವಿಕವಾಗಿ ಸಾಮಾಜಿಕವಾಗಿ ಹಿಂದು ಧರ್ಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಧರ್ಮವನ್ನು ಸ್ವತಂತ್ರ ಧರ್ಮವೆಂದು ಮಾನ್ಯ ಮಾಡುವುದರಿಂದ ಈ ಧರ್ಮದ ವ್ಯಾಪ್ತಿಯಲ್ಲಿ ಬರುವ ಯಾವುದೇ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯಾವುದೇ ಸಮುದಾಯವು ಈ ರೀತಿ ಸ್ವತಂತ್ರಧರ್ಮದ ಮಾನ್ಯತೆಯನ್ನೂ ಕೇಳಲು ಸಾಧ್ಯವಿಲ್ಲ. ಏಕೆಂದರೆ ಲಿಂಗಾಯತ ಧರ್ಮದ ತಾತ್ವಿಕ ನೆಲೆಗಟ್ಟು ಯಾವ ಸಮುದಾಯಕ್ಕೂ ಇಲ್ಲ ಎಂಬುದು ಅವರ ಅನಿಸಿಕೆ.
ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ತಿರಸ್ಕಾರ : ಯಾರು, ಏನು ಹೇಳಿದರು?
ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕ್ರಮ ಸೂಕ್ತವಲ್ಲ. ಬರುವ ಚುನಾವಣೆಯಲ್ಲಿ ಕೇಂದ್ರ ಸರ್ಕಾರವು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ ಕೇಂದ್ರ ಸರ್ಕಾರ ತಿರಸ್ಕೃತ ಪ್ರಸ್ತಾವನೆಯನ್ನು ಪುನಃ ಪರಿಶೀಲಿಸಬೇಕೆಂದು ಶ್ರೀಗಳು ಕೇಂದ್ರ ಸರ್ಕಾರವನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸಿದ್ದಾರೆ.