ಗದಗ ಕಪ್ಪತಗುಡ್ಡ ಉಳಿಸಿ: ಸಿಎಂಗೆ ಪತ್ರ ಬರೆದು ಎಚ್ಚರಿಸಿದ ಎಚ್ಕೆ ಪಾಟೀಲ್
ಗದಗ, ಸೆಪ್ಟೆಂಬರ್ 26: ಎರಡು ವರ್ಷದ ಹಿಂದಷ್ಟೇ ಗದಗ ಜಿಲ್ಲೆಯ ಕಪ್ಪತಗುಡ್ಡದ ಸಂರಕ್ಷಣೆಗಾಗಿ ಜನಾಂದೋಲನ ರೂಪುಗೊಂಡಿತ್ತು. ಮಠಾಧೀಶರು, ಪರಿಸರಪ್ರೇಮಿಗಳು, ರೈತರು, ಜನಪರ ಹೋರಾಟಗಾರರ ಹೋರಾಟದ ಫಲವಾಗಿ ಕಪ್ಪತಗುಡ್ಡ ಬಲ್ದೋಟ ಗಣಿ ದಾಹಕ್ಕೆ ಬಲಿಯಾಗದೆ ಮತ್ತೆ ಸಂರಕ್ಷಿತ ಅರಣ್ಯ ಪ್ರದೇಶವಾಯಿತು.
ಅಂದಿನ ಹೋರಾಟವು ಉತ್ತರ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಆ ಸಂದರ್ಭದಲ್ಲಿ ಹೋರಾಟದ ಜೊತೆಗೆ ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್. ಕೆ. ಪಾಟೀಲ್ ಕಾಳಜಿ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕಪ್ಪತಗುಡ್ಡ ವನ್ಯಜೀವಿ ಧಾಮ ಘೋಷಣೆ ರದ್ದುಪಡಿಸುವ ಕುರಿತ ಒತ್ತಾಯ ಸಣ್ಣಗೆ ಆರಂಭಿಸಿದೆ.
ಕಪ್ಪತಗುಡ್ಡದಲ್ಲಿ ಆಯುರ್ವೇದಿಕ್ ಸಂಸ್ಕರಣಾ ಘಟಕ ಸ್ಥಾಪನೆ
ಇದರಲ್ಲಿ ಬಲ್ದೋಟ ಕಂಪೆನಿ ಪ್ರಾಯೋಜಿತ ಹೋರಾಟಗಾರರಿಂದ ತೆರೆಮರೆಯಲ್ಲಿ ಪ್ರಯತ್ನ ಆರಂಭವಾಗಿದ್ದು, ಹೇಗಾದರೂ ಮಾಡಿ ಕಪ್ಪತಗುಡ್ಡವನ್ನು ಕಬಳಿಸಲೇಬೇಕು ಎಂಬ ಹುನ್ನಾರ ಅಡಗಿದೆ ಎಂಬ ಮಾತು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ (ಸೆಪ್ಟೆಂಬರ್ 26) ಮುಖ್ಯಮಂತ್ರಿ ನೇತೃತ್ವದಲ್ಲಿ ವನ್ಯಜೀವಿ ಮಂಡಳಿ ಸಭೆ ಇದ್ದು, ಈ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ಹೀಗಾಗಿ ಜಿಲ್ಲೆಯ ಜನರಲ್ಲಿ ಈ ಸಭೆ ಕುತೂಹಲ ಮೂಡಿಸಿದೆ. ಈ ಕಾರಣದಿಂದ ಬುಧವಾರವಷ್ಟೇ ಮಾಜಿ ಸಚಿವ, ಶಾಸಕ ಎಚ್. ಕೆ. ಪಾಟೀಲ್ ಅವರು೦ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಕಪ್ಪತಗುಡ್ಡದ ಸಂರಕ್ಷಣೆಗೆ ಧಕ್ಕೆಯಾಗದಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಕುರಿತು ಎಚ್ಚರಿಸಿದ್ದಾರೆ.
ಪಾಟೀಲರು ಬರೆದ ಪತ್ರದ ಸಾರಾಂಶ ಇಲ್ಲಿದೆ.
ಸಂರಕ್ಷಿತ ಅರಣ್ಯ್ ಪ್ರದೇಶ ಪುನಃ ಘೋಷಣೆ
ಈ ಹಿಂದೆ 19-12-2015 ರಂದು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಕಪ್ಪತಗುಡ್ಡವನ್ನು ಘೋಷಣೆ ಮಾಡಲಾಗಿತ್ತು. ಆ ನಂತರ 31-08-2016 ರಲ್ಲಿ 9ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಡೆಸಿತ್ತು. ಆ ಸಭೆಯ ನಂತರ 4-11-2016 ರಂದು ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆ ಹಿಂಪಡೆಯಲಾಯಿತು. ಆ ಮೇಲೆ ವ್ಯಾಪಕ ಹೋರಾಟ ನಡೆದು, ಹೈಕೋರ್ಟ್ ನಿರ್ದೇಶನದ ಮೇರೆಗೆ 16-1-2017 ರಂದು ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗಾಗಿ ಗದಗ ಜಿಲ್ಲೆಯ ಡಂಬಳದ ತೋಂಟದಾರ್ಯ ಕಲಾಭವನದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲಾಯಿತು. ಅಭಿಪ್ರಾಯ ಸಂಗ್ರಹದ ನಂತರ 10ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ 'ಸಂರಕ್ಷಿತ ಅರಣ್ಯ ಪ್ರದೇಶ' ಎಂದು ಪುನಃ ಘೋಷಣೆಯಾಯಿತು.
ಪರಿಸರಕ್ಕೆ ಹಾನಿಯಾಗುವ ನಿರ್ಧಾರ ಬೇಡ
ಈ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗಾಗಿ ಗದಗ ಜಿಲ್ಲೆ ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಯಿತು. ಈ ಕಾರಣದಿಂದ ಕೆಲವು ಪಟ್ಟಭದ್ರರ ಹಿತಾಸಕ್ತಿಗೆ ಮಣಿದು, ಪರಿಸರಕ್ಕೆ ಹಾನಿಯಾಗುವ ಯಾವುದೇ ನಿರ್ಣಯಗಳನ್ನು ಕೈಗೊಳ್ಳುವುದು ಸೂಕ್ತವಲ್ಲ ಎಂದು ಯಡಿಯೂರಪ್ಪ ಅವರಿಗೆ ಎಚ್. ಕೆ. ಪಾಟೀಲ್ ಪತ್ರದಲ್ಲಿ ಸಲಹೆ ನೀಡಿದ್ದಾರೆ. ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಪ್ರಾಸ್ಪೆಕ್ಸಿಂಗ್ ಲೈಸನ್ಸ್ ನೀಡುವುದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ಇದನ್ನು ಎಂ. ಎಂ. ಆರ್. ಡಿ ಕಾಯ್ದೆಯ ಸೆಕ್ಷನ್ 5ರ ಸಬ್ ಸೆಕ್ಷನ್ (3)ರ ಅಡಿ 20-2-2008 ರ ಅಧಿಸೂಚನೆ ಮೂಲಕ 6.11 ಚದರ ಕಿಲೋಮೀಟರ್ ಮತ್ತು 11.7 ಚದರ ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ರಾಮಘಡ ಮಿನಿರಲ್ಸ್ ಮತ್ತು ಮೈನಕಂಗ್ಸ್ ಲೈನಿಂಗ್ ಲಿ. ಕಂಪೆನಿಯವರಿಗೆ ನೀಡಲಾಗಿತ್ತು.
ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ವರದಿ
ಆ ನಂತರ ಮೈನಿಂಗ್ ಕಂಪೆನಿಯು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ, ಪ್ರಾಸ್ಪೆಕ್ಸಿಂಗ್ ಲೈಸನ್ಸ್ ಕೈಗೊಳ್ಳಲು ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಕಾಯ್ದೆಯಡಿ ಅನುಮತಿ ನೀಡಲು ಕೋರಿತ್ತು. ಇದರಿಂದ ಅರಣ್ಯ ಇಲಾಖೆಯು ಭಾರತ ಸರ್ಕಾರದ ಅರಣ್ಯ ಮಂತ್ರಾಲಯದ ಮಾರ್ಗಸೂಚಿ ಪ್ರಾಸ್ಪೆಕ್ಸಿಂಗ್ ಲೈಸೆನ್ಸ್ ನೀಡಿತ್ತು. ಈ ಕಾರಣದಿಂದ ಕಂಪೆನಿ, ಧಾರವಾಡ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಮೂರು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿತ್ತು. ನಂತರ 2014ರಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಸದರಿ ಕಂಪೆನಿಯೂ ಅರಣ್ಯ ಸಂರಕ್ಷಣಾ ಕಾಯ್ದೆ ಮಾರ್ಗಸೂಚಿ ಅನ್ವಯ ಕ್ಷೇತ್ರದಲ್ಲಿ ಸಮರ್ಪಕವಾಗಿ ಕಾರ್ಯ ಮಾಡದೇ ಕೆಲವು ನಿಯಮ ಉಲ್ಲಂಘನೆ ಮಾಡಿದ್ದು, ಇದನ್ನು ಕೇಂದ್ರ ಸರ್ಕಾರ ಸೂಕ್ತ ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ವರದಿ ಕಳಿಸಿತ್ತು.
ಕಂಪೆನಿ ಮನವಿ ಮಾನ್ಯ ಮಾಡದಿರಲು ಪತ್ರ
ಈ ಬೆಳವಣಿಗೆ ನಂತರ 2008 ರಿಂದ 2013ರ ವರೆಗೆ ನಡೆದ ಕೆಲವು ಪ್ರಮುಖ ಬೆಳವಣಿಗೆ ಕಾರಣ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಕಂಪೆನಿಯ ಮನವಿಯನ್ನು ಮಾನ್ಯ ಮಾಡದಿರಲು ವಿವರಗಳನ್ನು ಸಲ್ಲಿಸಿದ್ದರು. ಈ ಎಲ್ಲ ಕಾರಣದಿಂದ ಗುರುವಾರ ವನ್ಯಜೀವಿ ಮಂಡಳಿ ಸಭೆಯಲ್ಲಿ ಪರಿಸರಕ್ಕೆ ಪೂರಕವಾದ ನಿರ್ಧಾರ ಕೈಗೊಳ್ಳಬೇಕು ಎಂದು ಎಚ್.ಕೆ. ಪಾಟೀಲ್ ಒತ್ತಾಯಿಸಿದ್ದಾರೆ.