ಗದಗ: ಏತ ನೀರಾವರಿ ಯೋಜನೆಗೆ ಮರುಜೀವ, ನರಗುಂದದ ರೈತರಿಗೆ ಶುಭಸುದ್ದಿ
ಗದಗ, ಆಗಸ್ಟ್ 14 : ನರಗುಂದ ತಾಲೂಕಿನ ವ್ಯಾಪ್ತಿಯ ಬನಹಟ್ಟಿ, ಕುರ್ಲಗೇರಿ ಸುರಕೋಡ, ಖಾನಾಪುರ, ರೆಡ್ಡೇರನಾಗನೂರು, ಕೊಣ್ಣೂರು ಗ್ರಾಮದ ಜಮೀನುಗಳಿಗೆ ನೀರು ಪೂರೈಸುವ ದೃಷ್ಟಿಯಿಂದ 25 ವರ್ಷಗಳ ಹಿಂದೆ ರೂಪುಗೊಂಡಿದ್ದ ಏತ ನೀರಾವರಿ ಯೋಜನೆಗೆ ಮರು ಜೀವ ನೀಡುವ ನಿಟ್ಟಿನಲ್ಲಿ 80 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ತಿಳಿಸಿದರು.
ಸಂಪುಟ ಸಭೆಯಲ್ಲಿ ಜಾಕ್ ವೆಲ್ ಪೈಪ್ ರೀ ಮಾಡ್ಲಿಂಗ್ ಮಾಡಲು 80 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಪೈಪ್ ಗಳು ದುರಸ್ಥಿಯಾದಲ್ಲಿ, ನರಗುಂದ ಭಾಗದ 15 ರಿಂದ 20 ಸಾವಿರ ಎಕರೆ ಕೃಷಿ ಜಮೀನಿಗೆ ನೀರು ಹರಿಸಬಹುದಾಗಿದೆ ಎಂದು ಹೇಳಿದರು.
ಗದಗ; ಮಳೆಯಿಂದ ಕಂಗೆಟ್ಟ ರೈತರಿಗೆ ಆತಂಕ ತಂದ ಬ್ಯಾಂಕ್ ನೋಟಿಸ್
ನರಗುಂದ ಪಟ್ಟಣದಲ್ಲಿ ಶನಿವಾರ ನಡೆದ ತಿರಂಗಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಹಿನ್ನೆಲೆ ನರಗುಂದ ಬಿಜೆಪಿ ಯುವ ಘಟಕ, ಲಯನ್ಸ್ ಕ್ಲಬ್ ವತಿಯಿಂದ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ನೂರು ಮೀಟರ್ ಉದ್ದದ ತಿರಂಗ ಧ್ವಜದ ಮೆರವಣಿಗೆ ಮಾಡಲಾಗಿದೆ. ನರಗುಂದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗೆ ಮರು ಜೀವ ನೀಡಲಾಗುವುದು" ಎಂದು ಹೇಳಿದರು.
80 ಕೋಟಿ ರೂಪಾಯಿ ಬಿಡುಗಡೆ; ಏತ ನೀರಾವರಿ ಯೋಜನೆಗಳಿಗೆ ಒಟ್ಟು 34.610 ಕಿ.ಮೀ. ಉದ್ದದ ಮತ್ತು 0.60 ರಿಂದ 1 ಮೀಟರ್ ವ್ಯಾಸದ ಸಿಮೆಂಟ್ ಪೈಪ್ ಗಳನ್ನು ಅಳವಡಿಸಲಾಗಿದೆ. ಈ ಪೈಪ್ಗಳಲ್ಲಿ ನೀರಿನ ಸೋರಿಕೆ ಆಗುತ್ತಿರುವುದರಿಂದ ರೈತರ ಹೊಲಗಳಲ್ಲಿ ನೀರು ನಿಂತು ಕೃಷಿ ಚಟುವಟಿಕೆ ಮಾಡಲು ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಸಿಮೆಂಟ್ ಪೈಪ್ಗಳನ್ನು ಬದಲಾಯಿಸಿ ಎಂ. ಎಸ್. ಪೈಪ್ (ಕಬ್ಬಿಣದ ಪೈಪ್) ಅಳವಡಿಸುವ ಕಾಮಗಾರಿ ಕೈ ಗೊಳ್ಳುವ ಉದ್ದೇಶ ಹೊಂದಲಾಗಿದೆ.
ಆಗಸ್ಟ್ 12 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಯೋಜನೆಗೆ ಬಗ್ಗೆ ಪ್ರಸ್ತಾಪಿಸಿ, ಅಂದಾಜು 80 ಕೋಟಿ ರೂಪಾಯಿ ಬಿಡುಗಡೆಗೊಳಿಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಗಮನ ಸೆಳೆದ ತ್ರಿವರ್ಣ ಧ್ವಜ ಯಾತ್ರೆ; ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ಮುನ್ನ, ಸಂಗೊಳ್ಳಿರಾಯಣ್ಣ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಚಿವ ಸಿ. ಸಿ. ಪಾಟೀಲ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ನಂತರ ನರಗುಂದ ಪ್ರಮುಖ ಬೀದಿಗಳಲ್ಲಿ ತಿರಂಗಾ ಮೆರವಣಿಗೆ ನಡೆಯಿತು.
ನರಗುಂದ ಬಿಜೆಪಿ ಯುವ ಘಟಕ, ಲಾಯನ್ಸ್ ಕ್ಲಬ್ ಆಯೋಜಿಸಲಾಗಿದ್ದ ಧ್ವಜ ಯಾತ್ರೆಯಲ್ಲಿ, ನೂರು ಅಡಿ ಉದ್ದದ ಧ್ವಜ ಹಿಡಿದು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಬಂದು ಮಕ್ಕಳು ಗಮನ ಸೆಳೆಯಿತು. ಬೀದಿಯಲ್ಲಿ ಸಾಗುತ್ತಿದ್ದ ತ್ರಿವರ್ಣ ಯಾತ್ರೆಗೆ ಹೂ ಮಳೆಗರೆದು ಜನ ದೇಶಾಭಿಮಾನ ಮೆರೆದರು.