ಮರಳು ಮಾರಾಟಕ್ಕೆ, ಕೊಳ್ಳುವುದಕ್ಕೆ ಬರುತ್ತಿದೆ ಮೊಬೈಲ್ ಆ್ಯಪ್
ಗದಗ, ಮೇ 1: ಮರಳು ಮಾಫಿಯಾದಿಂದ ಮರಳು ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಬಡ ಮಧ್ಯಮ ವರ್ಗದವರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಬ್ರೇಕ್ ಹಾಕಲು ಗಣಿ ಇಲಾಖೆ ಮುಂದಾಗಿದೆ.
ಇನ್ಮುಂದೆ ಮರಳನ್ನು ಕೊಳ್ಳುವುದಕ್ಕೆ ಹಾಗೂ ಮಾರಾಟ ಮಾಡುವುದಕ್ಕೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸುತ್ತಿದೆ.
ಆರೋಗ್ಯ ಸೇತುವಿನಲ್ಲಿ ಬಳಕೆದಾರರ ಗೌಪ್ಯತೆ ಎಷ್ಟು ಸುರಕ್ಷಿತ?
ಈ ಬಗ್ಗೆ ಗದಗದಲ್ಲಿ ಮಾತನಾಡಿರುವ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ, ಡಿಜಿಟಲ್ ವಹಿವಾಟಿನ ಮೂಲಕ ಮರಳು ನೀತಿಯನ್ನು ಪಾರದರ್ಶಕಗೊಳಿಸಲಾಗುವುದು ಎಂದು ಹೇಳಿದ್ದಾರೆ. ಜನತೆಗೆ ಕಡಿಮೆ ದರದಲ್ಲಿ ಸುಲಭ ಹಾಗೂ ಪಾರದರ್ಶಕವಾಗಿ ಮರಳು ದೊರೆಯುವಂತೆ ತೆಲಂಗಾಣ ರಾಜ್ಯದ ಮರಳು ನೀತಿಯನ್ನು ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ರಾಜ್ಯದಲ್ಲಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪಾರದರ್ಶಕವಾಗಿ ನಿರ್ವಹಿಸುವ ಉದ್ದೇಶದಿಂದ
ಮರಳು ಮಾರಾಟ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಿರ್ವಹಿಸುವ ಉದ್ದೇಶದಿಂದ ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಮೋಬೈಲ್ ಆಪ್ ಮೂಲಕ ಗ್ರಾಹಕರು ನೇರವಾಗಿ ಮರಳು ಪಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಲೇ ಲೀಸ್ ಪಾಯಿಂಟ ಪಡೆದಂತಹವರು ತಮ್ಮ ಲೀಸ್ ಅವಧಿ ಮುಗಿದ ನಂತರ ಮತ್ತೆ ಆ ಅವದಿಯನ್ನು ನವೀಕರಣಗೊಳಿಸಲಾಗುವುದಿಲ್ಲ ಎಂದರು.
ಹೊಸ ಮರಳು ನೀತಿಯನ್ವಯ ಮಾರಾಟ
ಹೊಸ ಮರಳು ನೀತಿಯನ್ವಯ ಹಳ್ಳ, ತೊರೆ, ಕೆರೆಗಳಲ್ಲಿನ ಮರಳು ನಿಕ್ಷೇಪಗಳನ್ನು ಗ್ರಾಮ ಪಂಚಾಯತಿ ಅನುಮತಿಯೊಂದಿಗೆ ರೈತರೆ ನೇರವಾಗಿ ಮರಳನ್ನು ತೆಗೆಯಬಹುದಾಗಿದೆ ಎಂದರು. ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ನಿರ್ವಹಿಸುವ ಸಮುದಾಯಿತ್ವ ಕಾಮಗಾರಿಗಳು, ಮನೆ, ರಸ್ತೆ ಕಾಮಗಾರಿಗಳಿಗೆ ಲಘು ವಾಹನ ಮತ್ತು ಎತ್ತಿನ ಗಾಡಿಗಳ ಮೂಲಕ ಮರಳು ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನದಿ, ಆಣೆಕಟ್ಟುಗಳ ಹಿನ್ನೀರಿನ ಪ್ರದೇಶಗಳಲ್ಲಿನ ಮರಳು ನಿಕ್ಷೇಪಗಳನ್ನು ಸರರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳ ಮೂಲಕ ಗ್ರಾಹಕರಿಗೆ ಜಿಲ್ಲಾ ಮರಳು ಸಮಿತಿ ನಿಗಧಿಪಡಿಸಿದ ದರದಲ್ಲಿ ಮರಳು ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಖನಿಜ ರಕ್ಷಣಾ ಪಡೆ
ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಹೊಸದಾಗಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲಾಗುತ್ತಿದೆ. ಅಕ್ರಮ ಮರಳುಗಾರಿಕೆಯಲ್ಲದೇ ಅನಧಿಕೃತ ಖನಿಜ ಗಣಿಗಾರಿಕೆ, ಸಾಗಾಣಿಕೆ ಮತ್ತು ಅನಧಿಕೃತ ಖನಿಜ ದಾಸ್ತಾನ ವಿರುದ್ಧ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಶುಶ್ರ್ರೂಕಿಯರಿಗೆ ಸಿ.ಸಿ.ಪಾಟೀಲ ಅಭಿನಂದನೆ
ಜಿಲ್ಲೆಯ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಪಿ-04 59 ವರ್ಷದ ಮಹಿಳೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಸಂತಸದ ವಿಷಯವಾಗಿದ್ದು ಸೊಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಶುಶ್ರ್ರೂಕಿಯರಿಗೆ ಸಿ.ಸಿ.ಪಾಟೀಲ ಅಭಿನಂದನೆ ಸಲ್ಲಿಸಿದರು. ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಯತೀಶ ಎನ್. ಉಪಸ್ಥಿತರಿದ್ದರು.