ಗದಗ: ಕೊರೊನಾಗೆ ತುತ್ತಾಗಿ ಮುಂಡರಗಿ ಟಿಎಚ್ ಒ ಸಾವು
ಗದಗ, ಸೆಪ್ಟೆಂಬರ್ 2: ಕೊರೊನಾ ಸೋಂಕಿಗೆ ತುತ್ತಾಗಿ ಗದಗ ತಾಲೂಕು ವೈದ್ಯಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
Recommended Video
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಟಿಎಚ್ ಒ ಕೆ.ಬಸವರಾಜು ಅವರಲ್ಲಿ ಆಗಸ್ಟ್ 9ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ತೀವ್ರ ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡು ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ 18ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಾಮರಾಜನಗರ: ಕೊರೊನಾ ವೈರಸ್ ಗೆ ಆಯುಷ್ ವೈದ್ಯಾಧಿಕಾರಿ ಸಾವು
ಆನಂತರ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯಲು ಚಿಕಿತ್ಸಾ ವೆಚ್ಚಕ್ಕಾಗಿ ಸರ್ಕಾರದ ಮೊರೆ ಹೋಗಿದ್ದರು. ಹುಬ್ಬಳ್ಳಿ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸುಮಾರು 1೦ ಲಕ್ಷದವರೆಗೂ ಖರ್ಚು ಮಾಡಿದ್ದು, ಮುಂದಿನ ಚಿಕಿತ್ಸೆಗೆ ವೆಚ್ಚವನ್ನು ಭರಿಸಬೇಕೆಂದು ಆರೋಗ್ಯ ಸಚಿವರಿಗೆ ಸ್ವತಃ ಬಸವರಾಜು ಅವರೇ ಮನವಿ ಸಲ್ಲಿಸಿದ್ದರು. ಎಕ್ಮೋ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಅವಶ್ಯಕತೆಯಿದ್ದು, ಇದಕ್ಕಾಗಿ ನೆರವು ಕೇಳಿದ್ದರು.
ಆದರೆ ಇಂದು ಬಸವರಾಜು ಅವರು ಸಾವನ್ನಪ್ಪಿದ್ದಾರೆ. ಸರ್ಕಾರದ ನೆರವು ದೊರೆಯದೇ ಇವರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಸಚಿವ ಸಿಸಿ ಪಾಟೀಲ್ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಎಲ್ಲ ರೀತಿಯ ನೆರವನ್ನು ಸರ್ಕಾರದಿಂದ ಒದಗಿಸುವ ಭರವಸೆ ನೀಡಿದ್ದರು.
ಡಾ.ಬಸವರಾಜು ಅವರ ನಿಧನಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ಪರಿಹಾರ ಹಾಗೂ ಸವಲತ್ತುಗಳನ್ನು ಆದಷ್ಟು ಬೇಗ ಒದಗಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.