ಸಿಎಂ ವಿರುದ್ಧ ಈಶ್ವರಪ್ಪ ದೂರಿಗೆ ಸಚಿವ ಸಿಸಿ ಪಾಟೀಲ್ ಆಕ್ರೋಶ
ಗದಗ, ಏಪ್ರಿಲ್ 2: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಎಸ್ವೈ ಬಣದ ಸಚಿವರಿಂದ ಆಕ್ರೋಶ ವ್ಯಕ್ತವಾಗಿದೆ.
ಗದಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಸಿ ಪಾಟೀಲ್, ಕೆ.ಎಸ್ ಈಶ್ವರಪ್ಪನವರು ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡಬಾರದಿತ್ತು. ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಈಶ್ವರಪ್ಪನವರ ನಡೆ ಖಂಡಿಸಿದರು.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಈಶ್ವರಪ್ಪ ಪತ್ರ
ಈಸ್ವರಪ್ಪ ಅವರು ವಿನಾಕಾರಣ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಬ್ಬರೂ ಒಂದೇ ಜಿಲ್ಲೆಯವರು, ಭಿನ್ನಾಭಿಪ್ರಾಯಗಳಿದ್ದರೆ ಇಬ್ಬರೂ ಕೂತು ಬಗೆಹರಿಸಿಕೊಳ್ಳಬೇಕಿತ್ತು. ಇದರಿಂದಾಗಿ ಉಪ ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಮುಜುಗರ ಆಗುತ್ತದೆ, ಇದನ್ನು ಖಂಡಿಸುತ್ತೇನೆ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು.
ಇನ್ನು ಕೆ.ಎಸ್ ಈಶ್ವರಪ್ಪ ಅವರ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಕ್ಕೂ ಸಿ.ಸಿ ಪಾಟೀಲ್ ತಿರುಗೇಟು ನೀಡಿ, ಕಾಂಗ್ರೆಸ್ ಟೀಕೆ ಮಾಡಿದರೆ ಈಶ್ವರಪ್ಪನಿಗೆ ಮೆದುಳಿಲ್ಲ ಎನ್ನುವುದು, ನಮ್ಮ ಪಕ್ಷದ ಬಗ್ಗೆ ಮಾತನಾಡಿದಾಗ ಶಹಬ್ಬಾಷ್ ಹೇಳುವುದು. ಸಿದ್ದರಾಮಯ್ಯನವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನೀವೇ ತೂಕ ಮಾಡಿ ಎಂದು ಲೇವಡಿ ಮಾಡಿದರು.
Recommended Video
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಅವರು, ಡಿಕೆಶಿ ಮೊದಲು ಸಿಡಿ ಲೇಡಿ ಹಗರಣದ ಬಗ್ಗೆ ಸಮರ್ಪಕವಾದ ಉತ್ತರ ಕೊಡಲಿ. ಸಿಡಿ ಹಗರಣದಲ್ಲಿ ಅವರ ಪಾತ್ರ ಏನು ಎಂಬುದರ ಬಗ್ಗೆ ಉತ್ತರಿಸಲಿ. ಮೊದಲು ಅವರ ಪಕ್ಷ ಭದ್ರ ಮಾಡಿಕೊಳ್ಳಲಿ. ಯಡಿಯೂರಪ್ಪನವರ ಸರ್ಕಾರ ಅತ್ಯಂತ ಸುಭದ್ರವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಗಮೇಶ ದುಂದೂರ ಇದ್ದರು.