ಗದಗ; ಮಳೆಯಿಂದ ಕಂಗೆಟ್ಟ ರೈತರಿಗೆ ಆತಂಕ ತಂದ ಬ್ಯಾಂಕ್ ನೋಟಿಸ್
ಗದಗ, ಆಗಸ್ಟ್, 11: ಕಳೆದ ಕೆಲ ದಿನಗಳಿಂದ ಗದಗ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಅನ್ನದಾತರನ್ನು ಕಂಗಾಲಾಗುವಂತೆ ಮಾಡಿದೆ. ಬಿತ್ತನೆ ಮಾಡಿದ್ದ ಹೆಸರು, ಮೆಕ್ಕೆಜೋಳ ಬೆಳೆಗಳು ನೆಲಕಚ್ಚಿವೆ. ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವಾಗಲೇ ಸಾಲ ಮರುಪಾವತಿಗಾಗಿ ಬ್ಯಾಂಕ್ನಿಂದ ನೋಟಿಸ್ ಬಂದಿದ್ದು, ಅನ್ನದಾತರ ನಿದ್ದೆಗೆಡಿಸಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ರೈತರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿದೆ. ಡೋಣಿ ಗ್ರಾಮದ ರೈತರು 2010ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಬೆಳೆ ಸಾಲ ಪಡೆದಿದ್ದರು.
2016ರಿಂದ ಸರಿಯಾಗಿ ಹಣ ಮರುಪಾವತಿ ಮಾಡಿರಲಿಲ್ಲ ಎಂದು ಬ್ಯಾಂಕ್ವರು ಆರೋಪಿಸಿದರೆ, ಮತ್ತೊಂದೆಡೆ ಅತಿವೃಷ್ಟಿ, ಅನಾವೃಷ್ಟಿಯಿಂದ ಹಣ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ಡೋಣಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಬೆಳೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಲೇ ಇದ್ದಾರೆ. ಈ ಬಾರಿಯೂ ಅತಿಯಾದ ಮಳೆಯಿಂದಾಗಿ ಗ್ರಾಮದ ಮೂರು ಹಳ್ಳಗಳು ತುಂಬಿ 500 ಹೆಕ್ಟೇರ್ ಭೂ ಪ್ರದೇಶ ಜಲಾವೃತವಾಗಿದೆ. ಇನ್ನು ಹಳ್ಳಗಳಲ್ಲಿ ನೀರಿನ ಮಟ್ಟ ತಗ್ಗುವ ಲಕ್ಷಣಗಳು ಕಾಣುತ್ತಿಲ್ಲ. ಇಂತಹ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ಅಂತಿಮ ನೋಟಿಸ್ ನೀಡಿ, ರೈತರ ಜೀವನದ ಜೊತೆ ಆಟವಾಡುತ್ತಿದ್ದಾರೆ.
20ಕ್ಕೂ ಹೆಚ್ಚು ರೈತರಿಗೆ ನೋಟಿಸ್: ಡೋಣಿ ಗ್ರಾಮದ ವ್ಯಾಪ್ತಿಯ 20ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ನೋಟಿಸ್ ನೀಡಿದೆ. ಒಂದು ವಾರದಲ್ಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದು ನೋಟಿಸ್ನಲ್ಲಿ ನಮೂದಿಸಿ, ರೈತರನ್ನು ಅತಂಕಕ್ಕೆ ದೂಡಿದ್ದಾರೆ.
ಈಗಾಗಲೇ ಅಧಿಕ ಮಳೆಯಿಂದ ಕಂಗಾಲಾದ ಅನ್ನದಾತನಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆ ಹಾನಿಯಾಗಿ ಸಂಕಷ್ಟದಲ್ಲಿರುವಾಗಲೇ ಸಾಲ ಮರುಪಾವತಿಗಾಗಿ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುತ್ತಾ ರೈತರು ಕಣ್ಣೀರು ಹಾಕಿದರು. ಪೂರ್ಣ ಪ್ರಮಾಣದ ಹಣ ನೀಡದಿದ್ದರೆ ಜಮೀನು ಜಪ್ತಿ, ಹರಾಜು ಪ್ರಕ್ರಿಯೆ ನಡೆಸುವುದಾಗಿ ನೋಟಿಸ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ದೂರಿದರು.
ರೈತರಿಗೆ ಬ್ಯಾಂಕ್ ನೋಟಿಸ್ ಬರೆ: ಗದಗ ಜಿಲ್ಲೆ 3 ಲಕ್ಷದ 17 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶ ಹೊಂದಿದೆ. ಈ ಪೈಕಿ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 73 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ನಿರಂತರ ಮಳೆಗೆ ಜಲಾವೃತವಾಗಿವೆ.
ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಬೆಳೆಗಳ ನಾಶದಿಂದ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ. ಪಾಟೀಲ್ ಅವರು ರೈತರ ಜಮೀನಿಗೆ ಭೇಟಿ ನೀಡಿ, ಬೆಳೆ ಹಾನಿಯಾದ ಬಗ್ಗೆ ಮಾಹಿತಿ ಪಡೆದರು.
ರೈತರಿಂದ ಹಿಡಿಶಾಪ: ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ರೈತರಿಗೆ ಬ್ಯಾಂಕ್ ನೋಟಿಸ್ ನೀಡಲಾಗಿದ್ದು, ಅಧಿಕಾರಿಗಳಿಗೆ ಮಾಹಿತಿ ಇಲ್ಲ ಅಂತಿದ್ದಾರೆ. ಬೆಳೆಯಿಂದ ಲಾಭನೂ ಇಲ್ಲ, ಸರ್ಕಾರದಿಂದ ಪರಿಹಾರವೂ ಇಲ್ಲ. ಈ ನಡುವೆ ಬ್ಯಾಂಕ್ ನೋಟಿಸ್ ನೀಡಿದ್ದು, ರೈತರನ್ನು ಅಕ್ಷರಶಃ ಕಂಗಾಲಾಗಿಸಿದೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಕಾಲಾವಕಾಶ ಕೊಡುವಂತೆ ಮಾಡಬೇಕಿದೆ ಎಂದು ಆಗ್ರಹಿಸಿದರು.
Recommended Video