ಸಿಎಂ ಯಡಿಯೂರಪ್ಪ ಮುಂದೆಯೇ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್
Recommended Video
ಗದಗ, ಆಗಸ್ಟ್ 9: ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದೆಯೇ ಪೊಲೀಸರು ಲಾಠಿ ಬೀಸಿದ ಅಮಾನವೀಯ ಘಟನೆ ಗದಗ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ತಮ್ಮ ಕಣ್ಣೆದುರೇ ಸಂತ್ರಸ್ತರ ಮೇಲೆ ಲಾಠಿ ಪ್ರಹಾರ ನಡೆದರೂ ಯಡಿಯೂರಪ್ಪ ಅವರು ಅದನ್ನು ನೋಡಿಯೂ ನೋಡದಂತೆ ತೆರಳಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ನೆರೆ ಪೀಡತರ ನೆರವಿಗೆ ದಾನಕ್ಕಾಗಿ ಮನವಿ ಮಾಡಿದ ಯಡಿಯೂರಪ್ಪ
ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಯಡಿಯೂರಪ್ಪ ಅವರು ಗದಗದ ಕೊಣ್ಣೂರು ಗ್ರಾಮಕ್ಕೆ ಆಗಮಿಸಿದ್ದರು. ಅಲ್ಲಿನ ಪ್ರವಾಹ ಸ್ಥಿತಿಯನ್ನು ಅವರು ವೀಕ್ಷಿಸಿದ್ದರು. ಆಗ ಕೆಲವು ಪ್ರವಾಹ ಸಂತ್ರಸ್ತರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಲು ಅವಕಾಶ ನೀಡುವಂತೆ ಕೋರಿದರು.
ಯಡಿಯೂರಪ್ಪ ಅವರ ಬಳಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಅವರ ಕಾರಿನ ಬಳಿ ಸಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯಡಿಯೂರಪ್ಪ ಅವರ ಬಳಿ ಜನರು ಹೋಗದಂತೆ ತಡೆದಿದ್ದಾರೆ. ಅಲ್ಲದೆ, ಅವರ ಮೇಲೆ ಲಾಠಿ ಜಾರ್ಜ್ ಮಾಡುವ ಮೂಲಕ ಕ್ರೌರ್ಯ ಪ್ರದರ್ಶಿಸಿದ್ದಾರೆ.
ಕೊಡಗಿನ ಭೀಕರ ಮಳೆಗೆ 7 ಮಂದಿ ಬಲಿ, 8 ಮಂದಿ ಕಣ್ಮರೆ
ತಮ್ಮ ಎದುರೇ ಲಾಠಿ ಚಾರ್ಜ್ ನಡೆದರೂ ಯಡಿಯೂರಪ್ಪ ಅವರು ಅದನ್ನು ಕಾಣದಂತೆ ಮುಂದೆ ತೆರಳಿದ್ದಾರೆ. ನಾಲ್ಕೈದು ದಿನಗಳಿಂದ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ಕಂಗಾಲಾಗಿರುವ ಜನರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲು ಬಂದಿದ್ದರು. ಅದಕ್ಕೆ ಅವಕಾಶ ಸಿಗದ ಕಾರಣ ಅವರು ಸಿಟ್ಟಿಗೆದ್ದರು. ಪೊಲೀಸ್ ವಾಹನವನ್ನು ಅಡ್ಡಗಟ್ಟಿ ಅದಕ್ಕೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿರೋಧ ಪಕ್ಷದ ನಾಯಕರು ಯಡಿಯೂರಪ್ಪ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆಡಳಿತ ನಿಷ್ಕ್ರಿಯ
ನಾಚಿಕೆಗೇಡು. ಹತಾಶೆಯಿಂದಿರುವ ಹಳ್ಳಿಗರ ಮೇಲೆ ಲಾಠಿ ಚಾರ್ಜ್. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಒನ್ ಮ್ಯಾನ್ ಶೋ ಆಗಿರುವ ಕರ್ನಾಟಕ ಸರ್ಕಾರ, ನಿರ್ಜನವಾಗಿರುವ ವಿಧಾನಸೌಧ ಮತ್ತು ಕಂದಾಯ, ಆರ್ಡಿಪಿಆರ್, ನೀರಾವರಿ ಇತ್ಯಾದಿ ಪ್ರಮುಖ ಇಲಾಖೆಗಳನ್ನು ನೋಡಿಕೊಳ್ಳಲು ಸಚಿವರೇ ಇಲ್ಲದೆ ಆಡಳಿತ ನಿಷ್ಕ್ರಿಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಜನರಿಗೆ ಯಡಿಯೂರಪ್ಪ ಉಡುಗೊರೆ
ಯಡಿಯೂರಪ್ಪ ಮತ್ತೆ ಅದನ್ನು ಮಾಡಿದರು. ತಮ್ಮ ಸಂಕಷ್ಟಗಳನ್ನು ಸಿಎಂ ಕೇಳುತ್ತಾರೆ ಎಂಬ ಭರವಸೆಯೊಂದಿಗೆ ಬಂದ ಜನರಿಗೆ ಸರ್ಕಾರ ಲಾಠಿ ಚಾರ್ಜ್ಅನ್ನು ಉಡುಗೊರೆಯಾಗಿ ನೀಡಿದೆ. ಪ್ರವಾಹದಿಂದ ಜನರು ಭಾರಿ ನಷ್ಟಕ್ಕೆ ಸಿಲುಕಿದ್ದರೆ, ಸಿಎಂ ಅವರನ್ನು ಥಳಿಸಲು ಬಯಸುತ್ತಾರೆ. ಕಳೆದ ಬಾರಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರಸಗೊಬ್ಬರಕ್ಕಾಗಿ ಮನವಿ ಸಲ್ಲಿಸಿದ್ದ ರೈತನೊಬ್ಬನನ್ನು ರಸ್ತೆಯಲ್ಲಿಯೇ ಗುಂಡಿಕ್ಕಲಾಗಿತ್ತು ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಇದಕ್ಕಿಂತ ಘೋರ ಇನ್ನೇನಿದೆ?
ಪ್ರಧಾನಿ ಮೋದಿ ಅವರೇ, ನೀವು ಪ್ರತಿ ಹಂತದಲ್ಲಿಯೂ ಅಭಿವೃದ್ಧಿಯನ್ನು ಮಾಡುವಲ್ಲಿ ವಿಫಲರಾಗಿದ್ದೀರಿ. ಕರ್ನಾಟಕದಲ್ಲಿ ಜನರು ಭಯಾನಕ ಪ್ರವಾಹದಿಂದ ಸಂಕಷ್ಟದಲ್ಲಿದ್ದರೆ, ಬಿಜೆಪಿ ಸರ್ಕಾರದಲ್ಲಿ ಒಬ್ಬರೂ ಸಂಪುಟ ಸಚಿವರಿಲ್ಲ. ಯಡಿಯೂರಪ್ಪ ಅವರು ಬೆಂಗಳೂರು ಮತ್ತು ದೆಹಲಿ ನಡುವೆ ಇತ್ತೀಚೆಗೆ ಅಡ್ಡಾಡುತ್ತಿದ್ದರು. ಮತ್ತೀಗ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಈಗಾಗಲೇ ನೊಂದಿರುವ ಜನರ ಮೇಲೆ ಲಾಠಿ ಜಾರ್ಚ್ ಮಾಡುವುದಕ್ಕಿಂತ ಘೋರ ಇನ್ನೇನಿದೆ? ಎಂದು ಶ್ರೀವತ್ಸ ಎಂಬುವವರು ಪ್ರಶ್ನಿಸಿದ್ದಾರೆ.
ನಾಚಿಕೆಗೇಡಿನ ಕೃತ್ಯ
ಮಳೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡ ಗದಗದ ಮುಗ್ಧ ಜನರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಡಾ. ಸೀಮಾ ಸಾದಿಕಾ ಎಂಬುವವರು ಖಂಡಿಸಿದ್ದಾರೆ.