ಗದಗ: ಕೆರೆ ಕಟ್ಟೆ ಒಡೆದು 100ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಗದಗ, ಜುಲೈ, 28: ಗದಗದಲ್ಲಿ ಭಾರೀ ಮಳೆ ಸುರಿದ ಕಾರಣ ಎಸ್.ಎಂ.ಕೃಷ್ಣ ನಗರದ ಬಳಿ ಕೆರೆ ಕಟ್ಟೆ ಒಡೆದಿದೆ. ಪರಿಣಾಮ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿನ ಜನರು ರಾತ್ರಿಯಿಡೀ ಮನೆಯಲ್ಲಿನ ನೀರು ತುಂಬಿ ಹಾಕಲು ಹರಸಾಹಸವನ್ನೇ ಪಟ್ಟಿದ್ದಾರೆ.
ಬರೀ ಮನೆಗಳಿಗಲ್ಲದೆ ಕೆರೆಯ ಪಕ್ಕದ ಶೆಡ್ಗಳು ಕೂಡ ಜಲಾವೃತವಾಗಿವೆ. ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿವೆ. ಮಧ್ಯರಾತ್ರಿ ಒಮ್ಮಿಂದೊಮ್ಮಲೇ ಕೆರೆ ನೀರು ಮನೆಯೊಳಗೆ ನುಗ್ಗಿ ನಿದ್ದೆಯಲ್ಲಿದ್ದ ಜನರು ಆತಂಕಕ್ಕೆ ಒಳಗಾಗಿದ್ದರು. ಗುಡಿಸಲುಗಳು ಜಲಾವೃತವಾಗಿದ್ದು, ಮಕ್ಕಳು, ವೃದ್ಧರನ್ನು ರಾತ್ರೋರಾತ್ರಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
ಮನೆಯಲಿದ್ದ ದವಸ ಧಾನ್ಯಗಳು ನಿರುಪಾಲಾಗಿದ್ದು, ಅಲ್ಲಿನ ಜನರು ಆಹಾರಕ್ಕಾಗಿ ಪರದಾಡುವಂತಾಗಿದೆ. ಈಗಲೂ ಸಹ ಕೆರೆ ನೀರು ನದಿಯಂತೆ ಹರಿಯುತ್ತಿದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ನಮಗೆ ಪರಿಹಾರ ನೀಡಬೇಕು ಎಂದು ಅಲ್ಲಿನ ಜನರು ಒತ್ತಾಯಿಸಿದ್ದಾರೆ. ಹೀಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ನದಿ, ಕೆರೆ ಪ್ರದೇಶಗಳ ಜನರ ಮನೆಗಳು ಜಲಾವೃತವಾಗಿವೆ. ಗದಗ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ.
ಮೊದಲು ದೇಶದ ಈಶಾನ್ಯ ರಾಜ್ಯಗಳಲ್ಲಿ ವರುಣಾರ್ಭಟದಿಂದ ಜನರು ತತ್ತರಿಸಿದ್ದು, ಅಲ್ಲಿನ ಪ್ರದೇಶಗಳಲ್ಲಿ ಈಗಲೂ ಕೂಡ ಮಳೆ ನಿಂತರೂ ಪ್ರವಾಹ ಮಾತ್ರ ನಿಲ್ಲದಂತಾಗಿದೆ. ಎಷ್ಟೋ ಜನರ ಜೀವನ ನೀರಿನಲ್ಲಿ ಮುಳುಗಿದೆ. ಬಿತ್ತನೆ ಮಾಡುವ ಭೂಪ್ರದೇಶಗಳು ಕೂಡ ಜಲಾವೃತವಾಗಿದ್ದು, ತುತ್ತು ಅನ್ನಕ್ಕಾಗಿ ಅಸ್ಸಾಂ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ರಾಜ್ಯಗಳ ಜನರು ಪರದಾಡುತ್ತಿದ್ದಾರೆ. ಮನೆಮಠಗಳನ್ನು ಕಳೆದುಕೊಂಡು ಅಲ್ಲಿನ ಜನು ಬೀದಿ ಪಾಲಾಗಿದ್ದಾರೆ.
ಗದಗದಲ್ಲಿ ಒಂದು ಕೆರೆ ಕಟ್ಟೆ ಒಡೆದು ಇಷ್ಟೆಲ್ಲಾ ಅವಾಂತರಗಳು ಆಗಿವೆ. ಇನ್ನು ಅಸ್ಸಾಂನಲ್ಲಿ ಆದ ರೀತಿ ಇಲ್ಲಿ ಏನಾದರೂ ಮಳೆ ಆದರೆ ಎಷ್ಟು ಜನರ ಬದುಕು ನೀರಲ್ಲಿ ಮುಳುತ್ತಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಈಗಲೇ ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ.
ಕೆರೆ, ನದಿಗಳಂತಹ ಸ್ಥಳಗಳಲ್ಲಿ ವಾಸ ಮಾಡುವಂತಹ ಜನರಿಗೆ ಬೇರೆಡೆ ಸೂರುಗಳನ್ನು ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಗದಗ ಜನರು ತತ್ತರಿಸಿದ್ದು, ಆದ ಅನಾಹುತಗಳಿಗೆ ಪರಿಹಾರ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.