ಕರ್ನಾಟಕ ಬಂದ್: ಗದಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಗದಗ, ಜನವರಿ 24 : ಮಹದಾಯಿ ಕಳಾ ಬಂಡೂರಿ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಜನವರಿ 25 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಮಹದಾಯಿಗಾಗಿ ಕರ್ನಾಟಕ ಬಂದ್ ಕರೆ ಹಿನ್ನೆಲೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಕನ್ನಡಪರ ಸಂಘಟನೆಗಳು ಬಂದ್ ಆರಂಭಿಸಲಿವೆ.. ಜಿಲ್ಲೆಯ ಇತರೆಡೆಯೂ ಕೂಡ ಬಂದ್ ಆಗುವ ಸಂಭವವಿದ್ದು ಕೆಲ ಸಂಘಟನೆಗಳು ಬುಧವಾರ ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳಲಿವೆ.
ಮಹದಾಯಿಗಾಗಿ ಕರ್ನಾಟಕ ಬಂದ್, ಏನಿರುತ್ತೆ? ಏನಿರಲ್ಲ?
ಮುಂಜಾಗ್ರತಾ ಕ್ರಮವಾಗಿ ಗದಗ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು,3 ಡಿವೈ ಎಸ್ ಪಿ, 9 ಸಿಪಿಐ, 20 ಪಿಎಸ್ ಐ, 800 ಪೊಲೀಸ್ ಸಿಬ್ಬಂದಿ, 500 ಹೋಮ್ ಗಾರ್ಡ್ಸ್, 6 ಕೆಎಸ್ ಆರ್ ಪಿಸಿ, 8 ಡಿ ಆರ್ ತುಕಡಿ ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ.
ನರಗುಂದಕ್ಕೆ 3 ಡಿಆರ್, 3 ಕೆಎಸ್ ಆರ್ ಪಿ ರವಾನೆ ಮಾಡಲಾಗುತ್ತದೆ ಎಂದು ಎಸ್ ಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ವಿಚಾರವಾಗಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಗದಗದಲ್ಲಿ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಗದಗ ಡಿಸಿ ಮನೋಜ್ ಜೈನ್ ಸ್ಪಷ್ಟನೆ ನೀಡಿದ್ದಾರೆ.