ಗದಗ : ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕಹಳೆ ಮೊಳಗಲಿದೆ
ಗದಗ, ನವೆಂಬರ್ 06: ಗದಗದಲ್ಲಿ ನವೆಂಬರ್ 11 ರಂದು ಲಿಂಗಾಯತ ಧರ್ಮದ ಕಹಳೆ ಪುನಃ ಮೊಳಗಲಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ನವೆಂಬರ್ 11ರಂದು ನಡೆಯಲಿರುವ ಲಿಂ.ತೋಂಟದಾರ್ಯ ಶ್ರೀಗಳ ಶ್ರದ್ಧಾಂಜಲಿ ಮತ್ತು ನಾಗನೂರು ಮಠದ ಶ್ರೀಗಳ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮದ ಕಹಳೆ ಪುನಃ ಮೊಳಗಲಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ ತಿಳಿಸಿದರು.
ದಾವಣಗೆರೆಯ ನಗರ ಆಂಜನೇಯ ಬಡಾವಣೆಯ ಶ್ರೀಬಸವೇಶ್ವರ ಉದ್ಘಾಟನಾ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು. ಗದುಗಿನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾಗೂ ಅನೇಕ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಲಿಂಗಾಯತ ಧರ್ಮವನ್ನು ಕೇಂದ್ರ ಸರ್ಕಾರ ಮಾನ್ಯತೆ ಮಾಡಬೇಕೆಂದು ಹೋರಾಟವನ್ನು ಪುನರಾರಂಭಗೊಳ್ಳಲಿದೆ ಎಂಬ ಮುನ್ಸೂಚನೆ ನೀಡಿದರು.
ಬಸವಣ್ಣನವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು
ಬಸವಣ್ಣನವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಗೆ ಇನ್ನೂ ಹೆಚ್ಚಿನ ಪ್ರಮಾಣದ ಹೋರಾಟ ಅಗತ್ಯವೆಂದು ಪ್ರತಿಪಾದಿಸಿದರು.ಇಷ್ಟು ದಿನ ಲಿಂಗಾಯತರು ಕತ್ತಲಿನಲ್ಲಿದ್ದರು. ಈಗ ಬಸವ ಕಿರಣವೆಂಬ ಬೆಳಕು ಕತ್ತಲನ್ನು ಹೊಡೆದೊಡಿಸಲು ಬರುತ್ತಿದೆ. ಬಸವ ಪಥವನ್ನು ಅನುಸರಿಸಬೇಕು ಎಂದು ಹೇಳಿದರು.
12ನೇ ಶತಮಾನದಲ್ಲಿಯೇ ಹೊಸ ಧರ್ಮವನ್ನು ಸ್ಥಾಪಿಸಿದರು
ಬಸವಣ್ಣನವರು 12ನೇ ಶತಮಾನದಲ್ಲಿಯೇ ಹೊಸ ಧರ್ಮವನ್ನು ಸ್ಥಾಪಿಸಿದರು. ಆದರೆ, ವೈದಿಕ ಧರ್ಮ ಪ್ರಭಾವದಿಂದಾಗಿ ಲಿಂಗಾಯತರು ವಂಚನೆಗೊಳಗಾದರು. ವೈದಿಕ ಸಾಹಿತ್ಯ, ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಪ್ರಭಾವದಿಂದ ಲಿಂಗಾಯತರು ಶೋಷಣೆಗೆ ಒಳಗಾದರು. 1907ರಲ್ಲಿಯೇ ಲಿಂಗಾಯತ ಧರ್ಮವಾಗಬೇಕೆಂಬ ತೀವ್ರತರಹದ ಚರ್ಚೆದಾವಣಗೆರೆಯಲ್ಲಿ ನಡೆಯಿತು. 1941 ರಲ್ಲಿ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಯಿತು ಎಂದರು.
ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟ
2017 ಮತ್ತು 2018 ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ರಾಜ್ಯದಾದ್ಯಂತ ಬಿರುಸಿನಿಂದ ನಡೆಯಿತು. ಕೆಲವು ರಾಜಕಾರಣಿಗಳು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಆಪಾದಿಸಿದರೂ ನಾವು ಧರ್ಮವನ್ನು ಒಡೆಯಲು ಎಂದೂ ಪ್ರಯತ್ನಿಸಿಲ್ಲ. ಹಿಂದೆ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟಕ್ಕೆ ಮುಂದುವರಿಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್ ಅವರು ಮಾತನಾಡಿದರು. ಸಮಾರಂಭದಲ್ಲಿ ಬಸವ ಬಳಗದ ವಿ. ಸಿದ್ಧರಾಮ ಶರಣರು, ವಾಣಿಜ್ಯ ತೆರಿಗೆ ಅಧಿಕಾರಿ ಪಿ. ರುದ್ರಪ್ಪ ಮತ್ತಿತರರು ಬಸವಣ್ಣ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿದರು.
ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ
ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, . "ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು. ಐವರು ತಂದೆಗೆ ಹುಟ್ಟಿದವರು ವೀರಶೈವರು" ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವೀರಶೈವರಿಗೆ 5 ಪೀಠಗಳಿದ್ದು, ಐವರು ಗುರುಗಳು. ಲಿಂಗಾಯತರಿಗೆ ಬಸವಣ್ಣ ಒಬ್ಬರೇ ಗುರು ಎನ್ನುವ ಅರ್ಥದಲ್ಲಿ ಶ್ರೀಗಳು ಮಾತನಾಡಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ, ಕೀಳು ಭಾವನೆ ಇಲ್ಲ ಎಂದು ಸಮರ್ಥಿಸಿಕೊಂಡರು.