ಗದಗದಲ್ಲಿ ನೆರೆ ಹಾವಳಿಯಿಂದ ತತ್ತರಿಸಿದವರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ
ಗದಗ, ಡಿಸೆಂಬರ್ 01: ಇದೇ ಏಪ್ರಿಲ್ ತಿಂಗಳಿನಿಂದ ಸಂಭವಿಸಿದ ಪ್ರವಾಹಕ್ಕೆ ಇಡೀ ಊರಿಗೆ ಊರೇ ನಲುಗಿಹೋಗಿತ್ತು. ಮಲಪ್ರಭಾ ನದಿ ಉಕ್ಕಿ ಹರಿದು ಜಿಲ್ಲೆಯ ಬಹುಪಾಲು ಗ್ರಾಮಗಳು ಮುಳುಗಡೆಯಾಗಿದ್ದವು. ಮನೆ ಮಠ ಎಲ್ಲವನ್ನೂ ಕಳೆದುಕೊಂಡ ಜನರು ಕಾಳಜಿ ಕೇಂದ್ರಗಳತ್ತ ಮುಖ ಮಾಡಿದ್ದರು. ಪ್ರವಾಹದ ನೀರಿನಲ್ಲಿ ಜಮೀನುಗಳು ಮುಳುಗಡೆಯಾಗಿ ಬೆಳೆಹಾನಿಯಿಂದ ರೈತರು ಕಂಗಾಲಾದರು. ಆ ಸಂದರ್ಭ ಜನರ ನೆರವಿಗೆ ನಿಲ್ಲುವುದಾಗಿ ಸರ್ಕಾರ ಘೋಷಿಸಿತು.
ದಿನಗಳೆದಂತೆ ಬದುಕು ಸಹಜ ಸ್ಥಿತಿಯತ್ತ ಮರಳಿತು. ಆದರೆ ಪ್ರವಾಹದಿಂದಾದ ಪರಿಣಾಮ ಮಾತ್ರ ಜನರನ್ನು ಬಿಡಲಿಲ್ಲ. ಸರ್ಕಾರದ ಭರವಸೆ ನಂಬಿ ಮನೆಗಳತ್ತ ಮುಖ ಮಾಡಿದ್ದವರು ಇದೀಗ ಸಮರ್ಪಕ ಪರಿಹಾರ ಸಿಗದೇ ಅಲೆದಾಡುವಂತಾಗಿದೆ.
ಗದಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 159 ಕೋಟಿ ರೂ. ನಷ್ಟ
ಗದಗ ಜಿಲ್ಲೆಯ ರೋಣ ತಾಲೂಕು ಹೊಳೆ ಆಲೂರು ಗ್ರಾಮಸ್ಥರು ಪ್ರವಾಹದಲ್ಲಿ ಬದುಕನ್ನೇ ಕಳೆದುಕೊಂಡು ಇದೀಗ ಬಿದ್ದ ಮುರುಕಲು ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ನೆರೆ ಹಾನಿಯ ಪರಿಹಾರಕ್ಕೆ ಮೂರ್ನಾಲ್ಕು ಬಾರಿ ಹೋರಾಟ ಮಾಡಿ ಮನವಿ ನೀಡಿದ್ದಾರೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ತಹಶೀಲ್ದಾರ್, ಎಸಿ, ಡಿಸಿ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಿಲ್ಲ. ಗ್ರೇಡ್ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪ ಮಾಡುತ್ತಿದ್ದಾರೆ. ಪ್ರವಾಹದಿಂದ ಹಾಳಾದ ಖುಷ್ಕಿ ಹಾಗೂ ನೀರಾವರಿ ಜಮೀನುಗಳಿಗೂ ಪರಿಹಾರ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಸರಿಯಾದ ಗ್ರೇಡ್ ನೀಡಲು ಫಲಾನುಭವಿಗಳು ಆಗ್ರಹಿಸಿ ಸಮರ್ಪಕ ಪರಿಹಾರ ನೀಡಬೇಕು ಎಂದು ಕಣ್ಣೀರು ಹಾಕಿದ್ದಾರೆ.