ಗದಗ: ನಗರ ಸಭೆ ಅಧಿಕಾರಿಗಳ ವಿರುದ್ಧ ಶಾಸಕ ಎಚ್.ಕೆ ಪಾಟೀಲ್ ಗರಂ!
ಗದಗ, ಮೇ 12: ಗದಗ-ಬೆಟಗೇರಿ ನಗರಸಭೆಯಿಂದ ಕೈಗೊಳ್ಳಲಾದ ಒಳಚರಂಡಿ ಕಾಮಗಾರಿಗಳ ಪರಿಶೀಲನೆ ನಗರ ಸಭೆ ಅಧಿಕಾರಿಗಳ ಮೇಲೆ ಮಾಜಿ ಸಚಿವ ಹಾಗೂ ಗದಗ ಶಾಸಕರಾದ ಎಚ್.ಕೆ ಪಾಟೀಲ್ ಗರಂ ಆದರು. ಇದೇ ಗದಗ ನಗರದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರನಿಗೆ ನಿಗದಿಪಡಿಸಿದ್ದ ಅವಧಿ ಮುಗಿದಿದ್ದರೂ ವಿಳಂಬ ಮಾಡಿದ್ದಕ್ಕೆ ಎಷ್ಟು ದಂಡ ಹಾಕಿದ್ದೀರಿ..? ದಂಡ ಯಾಕೆ ಹಾಕಿಲ್ಲ ಎಂದು ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಅವಳಿ ನಗರದ ವ್ಯಾಪ್ತಿಯ ಒಳಚರಂಡಿ ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗದಗ ನಗರಸಭೆ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು.
ಇನ್ನೂ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರನಿಗೆ ನಿಗದಿಪಡಿಸಿದ್ದ ಅವಧಿ ಮುಗಿದಿದ್ದರೂ ವಿಳಂಬ ಮಾಡಿದ್ದಕ್ಕೆ ಎಷ್ಟು ದಂಡ ವಿಧಿಸಿದ್ದೀರಿ.. ದಂಡ ಹಾಕಿಲ್ಲವೇಕೆ..? ಎಂಬುದರ ಬಗ್ಗೆ ವರದಿ ನೀಡಬೇಕು. ಜೊತೆಗೆ ಕಾಮಗಾರಿ ವೇಳೆ ತೆಗೆದಿದ್ದ ಗುಂಡಿ ಮುಚ್ಚದೇ ಉಳಿದಿರುವ ಸಂಖ್ಯೆ ಅಥವಾ ಎಷ್ಟು ಕಿ.ಮೀ ಉದ್ದವಿದೆ, ಅದಕ್ಕೆ ತಗಲಿರುವ ವೆಚ್ಚ ಎಷ್ಟು ಎಂಬುದರ ಬಗ್ಗೆಯೂ ಈ ಪರಿಶೀಲನೆ ವೇಳೆ ಗಮನ ಹರಿಸಬೇಕು. ಅಂದಾಗ ಮಾತ್ರ ಹೆಚ್ಚುವರಿ ಬೇಡಿಕೆ ಹಾಗೂ ಕಾಮಗಾರಿ ಸ್ಥಿತಿ-ಗತಿ ಅರಿಯಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಧಿಕಾರಿಗಳು ನೀಡಿರುವ ವರದಿ ತಾಳೆಯಾಗುತ್ತಿಲ್ಲ, ಮೂರನೇ ವ್ಯಕ್ತಿಯಿಂದ ತಪಾಸಣೆ..!
ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ 44 ಸಾವಿರದ 447 ಗೃಹ ಸಂಪರ್ಕ ಜೋಡಣೆ ಪೈಕಿ 29 ಸಾವಿರದ 520 ಮನೆಗಳಿಗೆ ಸಂಪರ್ಕ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಿರಿ. ಈ ಅಂಕಿ ಅಂಶಗಳು ಒಂದಕ್ಕೊಂದು ತಾಳೆವಾಗುತ್ತಿಲ್ಲ. ಹೀಗಾಗಿ ಮೂರನೇ ವ್ಯಕ್ತಿಯಿಂದ ತಪಾಸಣೆಯಲ್ಲಿ ಗದಗನಲ್ಲಿ ಎಷ್ಟು ಸಂಪರ್ಕ, ಹೊಸ ಬಡಾವಣೆ ಹಾಗೂ ಲೇ ಔಟ್ಗಳಲ್ಲಿ ಎಷ್ಟು ಸಂಪರ್ಕ ಮಾಡಿದ್ದಾರೆ..? ಎಂಬುದರ ಮಾಹಿತಿಯೂ ಸಂಗ್ರಹಿಸಲು ಶಾಸಕ ಎಚ್.ಕೆ. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಸಲಹೆ..!
ಇದೇ ವೇಳೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮಾತನಾಡಿ, 150 ಕೋಟಿ ರೂ. ವೆಚ್ಚದ ಯೋಜನೆ 180 ಕೋಟಿ ರೂ. ತಲುಪಿದ್ದರೂ ಕಾಮಗಾರಿ ಪೂರ್ಣಗೊಳಿಸಲು ಮೊದಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಅಲ್ಲದೇ ಬಾಕಿ ಉಳಿದ ಮನೆ ಸಂಪರ್ಕ ಜೋಡಣೆ ಪೂರ್ಣಗೊಳಿಸಬೇಕು. ಒಳಚರಂಡಿ ಕಾಮಾಗಾರಿಯ 7.5 ಕೀ.ಮೀ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಟೆಂಡರ್ ನಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವತ್ತ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಹೆಚ್ಚುವರಿ ಕಾಮಗಾರಿ ಸೇರಿ ಮೇಲಾಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ..!
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗದ ಅಧಿಕಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಹೊಸಮನಿ ಮಾತನಾಡಿ, ಅವಳಿ ನಗರದಲ್ಲಿ ಮೂರು ಹಂತದಲ್ಲಿ ಒಳಚರಂಡಿ ಕಾಮಗಾರಿ ನಡೆದಿದೆ. ಮೊದಲನೇ ಹಂತದಲ್ಲಿ 75 ಕಿ.ಮೀ ಒಳಚರಂಡಿ ಕಾಮಗಾರಿ 11.14 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆಗೊಂಡು, ಇದೀಗ ಪೂರ್ಣಗೊಂಡಿದೆ. ಕೇಂದ್ರ ಪುರಸ್ಕೃತ ಅಮೃತ ಯೋಜನೆಯಡಿ ಎರಡು ಹಾಗೂ ಮೂರನೇ ಹಂತ ಕಾಮಗಾರಿ ನಡೆದಿವೆ. ಎರಡನೇ ಹಂತದಲ್ಲಿ 160. ಕಿಮೀ ಕಾಮಗಾರಿ ಇತ್ತು. ಅದು 161.78ಕಿ.ಮೀ. ನಷ್ಟಾಗಿದೆ. ಎರಡನೇ ಹಂತದ 151 ಕೋಟಿ ರೂ. ವೆಚ್ಚದ ಯೋಜನೆ ಇದೀಗ ಹೆಚ್ಚುವರಿ ಕಾಮಗಾರಿ ಸೇರಿ ಇನ್ನೂ 30ಕೋಟಿ ರೂ. ಅಗತ್ಯವಿದೆ. ಈ ಬಗ್ಗೆ ಮೇಲಾಧಿಕಾರಿಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರನೇ ಹಂತದ ಕಾಮಗಾರಿಯೂ ನಡೆಯುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.