ಹಿಂದಿ ಭಾಷೆ ಹೇರಿಕೆ ವಿಚಾರ ಸರ್ವಪಕ್ಷ ಸಭೆ ಕರೆದರೆ ಸೂಕ್ತ: ಎಚ್ ಕೆ ಪಾಟೀಲ್
ಗದಗ ಜೂನ್ 4: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡೂ ವಿನಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿದೆ. ಈ ಕರಡು ನೀತಿಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹಾಗೂ ಗದಗ ಶಾಸಕರಾದ ಎಚ್ ಕೆ ಪಾಟೀಲ್ ಅವರು, ಈ ಬಗ್ಗೆ ಸಿ ಎಂ ಸರ್ವಪಕ್ಷ ಸಭೆ ಕರೆದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು.
ಗದಗ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡೂ ವಿನಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿದೆ. ಇದಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರು ಅಧ್ಯಯನ ಮಾಡಿ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಆದರೆ ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಸರ್ವಪಕ್ಷಗಳ ಸಭೆಯನ್ನು ಕರೆಯುವುದು ಸೂಕ್ತ. ಯಾವುದೇ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯವನ್ನು ತಗೆದುಕೊಳ್ಳುವುದಕ್ಕಿಂತಾ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಿ ಸೂಕ್ತ ತಿರ್ಮಾನವನ್ನು ಕೇಂದ್ರಕ್ಕೆ ಕಳುಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ವೆಬ್ ತಾಣದಿಂದ ತ್ರಿಭಾಷಾ ಸೂತ್ರದ ಕರಡು ಪ್ರತಿ ಮಾಯ!
ಕರ್ನಾಟಕ ರಾಜ್ಯ ಹಿಂದಿ ಹೇರಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆಯನ್ನು ಕರೆಯಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಇದಕ್ಕೂ ಮುನ್ನ ಹೆಚ್ ಕೆ ಪಾಟೀಲ್ ಅವರು ಹುಲಕೋಟಿ ಹಾರ್ಟಿ ಕಲ್ಚರ್ ಫಾರ್ಮರ್ಸ್ ಪ್ರೋಡ್ಯೂಸರ್ ಕಂಪನಿಯನ್ನು ಉದ್ಘಾಟಿಸಿದರು. ಹಾಗೂ ಗದಗ ತೋಟಗಾರಿಕೆ ಇಲಾಖೆ ಗದಗ ಮತ್ತು ಕೆ.ಎಚ್ ಪಾಟೀಲ್ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಂಯುಕ್ತ ಆಶ್ರಯ ನಡೆದ ಆಪರೇಷನ್ ಗ್ರೀನ್ - ಈರುಳ್ಳಿ ಬೆಳೆಯ ಸಮಗ್ರ ಅಭಿವೃದ್ದಿ ಹಾಗೂ ಮೌಲ್ಯವರ್ಧನೆಗಾಗಿ ಯೋಜನೆಯ ಕುರಿತು ರೈತ ಉತ್ಪಾದನಾ ಗುಂಪುಗಳು ಹಾಗೂ ಉದ್ದಿಮೆದಾರರಿಗೆ ನಡೆದ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿದರು.