ಗದಗದಲ್ಲಿ ಭಾರಿ ಮಳೆಗೆ ರೈತ ಹೈರಾಣ; ಸೌತೆ, ಬೆಂಡೆ ಕಾಯಿ ಬೆಳೆ ನಾಶ
ಗದಗ, ಆಗಸ್ಟ್, 04: ಗದಗ ಜಿಲ್ಲೆಯಲ್ಲಿ ನಿರಂತವಾಗಿ ಸುರಿಯುತ್ತಿರುವ ಮಳೆಗೆ ಚಂದ್ರಶೇಖರ್ ಮಜ್ಜಗಿ ಎನ್ನುವವರ ಬೆಳೆಗಳೆಲ್ಲ ಜಲಾವೃತವಾಗಿವೆ. ಧಾರಾಕಾರವಾಗಿ ಸುರಿಯುವ ಮಳೆಯಿಂದಾಗಿ ಬೆಳೆಗಳೆಲ್ಲ ಸಂಪೂರ್ಣವಾಗಿ ನಾಶ ಆಗಿದ್ದು, ಅಲ್ಲಿನ ರೈತರು ನಲುಗಿ ಹೋಗಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಬೆಳೆದ ಬೆಳೆಗಳೆಲ್ಲ ಜಲಾವೃತವಾಗಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಚಂದ್ರಶೇಖರ್ ಮಜ್ಜಗಿ ಎಂಬ ರೈತ ನೂತನ ಕೃಷಿ ಪದ್ಧತಿ ಅಳವಡಿಸಿ ಏನಾದರೂ ಸಾಧನೆ ಮಾಡಬೇಕೆಂದು ಮುಂದಾಗಿದ್ದರು. ಕೃಷಿಯಲ್ಲಿ ಸಾಧನೆ ಮಾಡಬೇಕೆಂದು ಲಕ್ಷಾಂತರ ರೂಪಾಯಿ ಬಂಡವಾಳವನ್ನೂ ಹಾಕಿದ್ದರು. ಮೂರು ಎಕರೆಯಲ್ಲಿ ಸೌತೆಕಾಯಿ, 2 ಎಕರೆಯಲ್ಲಿ ಬೆಂಡೆಕಾಯಿ ತರಕಾರಿಗಳನ್ನು ಬೆಳೆದಿದ್ದರು. ಹನಿ ನೀರಾವರಿ ಪದ್ಧತಿ ಮೂಲಕ ಕೃಷಿ ಮಾಡಿ ಸಮೃದ್ಧವಾಗಿ ತರಕಾರಿ ಬೆಳೆದಿದ್ದರು. ಅದೇ ರೀತಿ ಮಾರ್ಕೆಟ್ನಲ್ಲಿ ಸೌತೆಕಾಯಿ ಮತ್ತು ಬೆಂಡೆಕಾಯಿಗೆ ಉತ್ತಮ ಬೆಲೆ ಇತ್ತು.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಚಂದ್ರಶೇಖರ್ ಅವರ ಸಂತೋಷವನ್ನು ಕಿತ್ತುಕೊಂಡುಬಿಟ್ಟಿದೆ. ಜಮೀನಿನಲ್ಲಿ ನೀರು ನಿಂತಿದ್ದು, ಸೌತೆಕಾಯಿ ಮತ್ತು ಬೆಂಡೆಕಾಯಿ ಬೆಳೆಗಳು ಕೊಳೆಯುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಚಂದ್ರಶೇಖರ್ ಕಣ್ಣೀರಿಡುತ್ತಾ ಗೋಳಾಡುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನಿಸಿ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದರು.
ನಿರಂತರವಾಗಿ ಸುರಿಯುತ್ತಿರುವ ಮಳೆ ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರ ಬದುಕನ್ನು ಕಿತ್ತುಕೊಂಡಿದೆ. ಮಳೆ ಆರ್ಭಟ ಮುಂದುವರೆದಿದ್ದು ಇನ್ನುಳಿದ ರೈತರು ಕೂಡ ಬೆಳೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗೆ ಗದಗ ಜಿಲ್ಲೆಯ ರೈತ ಹೊಸ ಪದ್ಧತಿಯಲ್ಲಿ ಕೃಷಿಯನ್ನು ಮಾಡಲು ಮುಂದಾಗಿದ್ದರು. ಬೆಳೆಗಳು ಕೂಡ ಫಸಲಿಗೆ ಬಂದಿದ್ದವು. ಅಷ್ಟರಲ್ಲೇ ಮಳೆರಾಯನ ಆಟಕ್ಕೆ ಸಮೃದ್ಧವಾಗಿ ಬೆಳೆದಿದ್ದ ಬೆಳೆಗಳೆಲ್ಲ ನೀರಲ್ಲಿ ಕೊಳೆಯುತ್ತಿದ್ದು, ಚಂದ್ರಶೇಖರ ಮಜ್ಜಗಿ ಎಂಬ ರೈತ ಆತಂಕಕ್ಕೆ ಒಳಗಾಗಿದ್ದಾರೆ.
Recommended Video