ಗದಗ: ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿ ಇನ್ನಿಲ್ಲ
ಗದಗ, ಅಕ್ಟೋಬರ್ 20: ಗದುಗಿನ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹೃದಯಾಘಾತದಿಂದ ಶನಿವಾರ ನಿಧನರಾದರು.
ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಶುಕ್ರವಾರ ಬನ್ನಿ ಹಂಚುವ ಕಾರ್ಯದಲ್ಲಿ ಭಾಗಿಯಾಗಿದ್ದರು. ರಾತ್ರಿ 1.30ರ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಗದಗಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.
ಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕು
1949ರ ಫೆಬ್ರುವರಿ 21ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೋರವಾರದಲ್ಲಿ ಜನಿಸಿದ್ದ ಅವರು, 1974ರಲ್ಲಿ ತೋಂಟದಾರ್ಯ ಮಠದ 19ನೇ ಪೀಠಾಧಿಪತಿಯಾಗಿದ್ದರು. 1994ರಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ದೊರಕಿತ್ತು. 1995ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿತ್ತು.
ಮದುಮೇಹಕ್ಕೆ ತುತ್ತಾಗಿದ್ದ ಅವರು, ಮೊಣಕಾಲಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ರಾಜ್ಯದ ವಿವಿಧೆಡೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು.
ನಲವತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ಅವರು ತೋಂಟದಾರ್ಯ ಮಠದ ಸ್ವಾಮೀಜಿಯಾಗಿದ್ದರು. ಪ್ರತ್ಯೇಕ ಧರ್ಮದ ಹೋರಾಟದ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಸ್ವಾಮೀಜಿಗಳಲ್ಲಿ ಒಬ್ಬರಾಗಿದ್ದರು.
ಡಿಕೆ ಶಿವಕುಮಾರ್ ಲಿಂಗಾಯತರ ಕ್ಷಮೆ ಯಾಚಿಸಬೇಕು: ಮಾತೆ ಮಹಾದೇವಿ
ತಮ್ಮ ನೇರ ಮಾತುಗಳು ಮತ್ತು ಪ್ರವಚನಗಳಿಂದ ತೋಂಟದಾರ್ಯ ಸ್ವಾಮೀಜಿಗಳು ಅಪಾರ ಅಭಿಮಾನಿಗಳನ್ನು, ಭಕ್ತರನ್ನು ಸಂಪಾದಿಸಿದ್ದರು.
ಹಿಂದೂ ಧರ್ಮದ ಮಠ ಮಾನ್ಯಗಳನ್ನು ದತ್ತಿ ಇಲಾಖೆ ಸುಪರ್ದಿಗೆ ಒಳಪಡಿಸುವ ಸರ್ಕಾರದ ಉದ್ದೇಶಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಗದಗದಲ್ಲಿ ವೀರಶೈವ-ಲಿಂಗಾಯತ ಸಮಾವೇಶ, 8 ನಿರ್ಣಯ
ತೋಂಟದಾರ್ಯ ಸ್ವಾಮೀಜಿ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶ್ರೀಗಳ ಲಿಂಗೈಕ್ಯ ಸುದ್ದಿಯಿಂದ ಆಘಾತವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.