ಕೋವಿಡ್ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಮಾದರಿಯಾದ ಡಿಸಿ!
ಬೆಂಗಳೂರು, ಆ. 09: ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಬಹುತೇಕ ಜನಪ್ರತಿನಿಧಿಗಳಿಗೆ ಸರ್ಕಾರಿ ಆಸ್ಪತ್ರೆಗಳು ಎಂದರೆ ಅಷ್ಟಕ್ಕಷ್ಟೆ. ಹೀಗಾಗಿಯೇ ಅನಾರೋಗ್ಯದ ಸಂದರ್ಭದಲ್ಲಿ ಸುಸಜ್ಜಿತ ಖಾಸಗಿ ಆಸ್ಪತ್ರೆಗಳನ್ನೇ ಚಿಕಿತ್ಸೆಗೆ ಆಯ್ದುಕೊಳ್ಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ ಭದ್ರತಾ ದೃಷ್ಟಿಯಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ ಎಂಬ ಸಬೂಬು ಬೇರೆ ಹೇಳುತ್ತಾರೆ.
ಆದರೆ ರಾಜ್ಯದ ಜಿಲ್ಲಾಧಿಕಾರಿಯೊಬ್ಬರ ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಕೊರೊನಾ ವೈರಸ್ ಸಂಕಷ್ಟದ ಕಾಲದಲ್ಲಿಯೂ ಜನರಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಭರವಸೆ ತುಂಬುವ ನಿಟ್ಟಿನಲ್ಲಿ ಆ ಜಿಲ್ಲಾಧಿಕಾರಿಗಳ ನಡೆ ನಮ್ಮನ್ನು ಆಳುವವರಿಗೂ ಮಾದರಿಯಾಗಿದೆ. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಮೂಲಕ ನಾಡಿನ ಜನರಿಗೆ ಮಾದರಿ ಆಗಬೇಕಾಗಿದ್ದ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆ
ನಮ್ಮನ್ನಾಳುವ ಜನಪ್ರತಿನಿಧಿಗಳು ಮಾರಣಾಂತಿಕವಲ್ಲದ ಕೋವಿಡ್ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ ಬದಲು ಪಂಚತಾರಾ ಖಾಸಗಿ ಆಸ್ಪತ್ರೆಗಳನ್ನು ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರ ಪತ್ನಿ ಶಿವಶಂಕರಿ ಅವರು ತಮ್ಮ ಹೆರಿಗೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗದಗ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.
ಗದಗ; ಬೆಣ್ಣೆಹಳ್ಳದ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಡಿಸಿ
ಇಂದು ಬೆಳಿಗ್ಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದು, ತಾಯಿ ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತಪಾಸಣೆ ಕೂಡ
ಈ ಮೊದಲು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಮ್ಮ ಪತ್ನಿಯ ನಿಯಮಿತ ತಪಾಸಣೆಯನ್ನೂ ಎರಡು ತಿಂಗಳಿಂದ ಗದಗ್ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿಯೇ ಮಾಡಿಸುತ್ತಿದ್ದರು.
ಮಹಿಳಾ ವೈದ್ಯರಾದ ಡಾ. ಜಯಶ್ರೀ ಮತ್ತು ಡಾ. ಶೃತಿ ನೇತೃತ್ವದಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಲಾಗಿದೆ. ಸರ್ಕಾರಿ ಶಾಲೆ, ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಜನಪ್ರತಿನಿಧಿಗಳು, ಕೆಲ ಅಧಿಕಾರಿಗಳಿಗಿದೆದೆ. ಅದನ್ನು ಹೋಗಲಾಡಿಸಲು ಡಿಸಿ ಸುಂದರೇಶ ಬಾಬು ಅವರು ಅನುಸರಿಸಿದ ಮಾರ್ಗ ಮಾದರಿಯಾಗಿದೆ.
ಕೋವಿಡ್ ಸಂಕಷ್ಟ
ಗದಗ್ ಜಿಲ್ಲೆಯಲ್ಲಿಯೂ ಕೊರನಾ ವೈರಸ್ ಸಂಕಷ್ಟವಿದೆ. ಆದರೂ ಯಾವುದೇ ಆತಂಕಕ್ಕೆ ಎಡೆ ಮಾಡಿಕೊಡದಂತೆ ಡೀಸಿ ಸುಂದರೇಶ್ ಆವರು ಸರ್ಕಾರಿ ಹರಿಗೆ ಆಸ್ಪತ್ರೆಯಲ್ಲಿಯೇ ತಮ್ಮ ಪತ್ನಿಗೆ ತಪಾಸಣೆ, ಬಳಿಕ ಹೆರಿಗೆ ಮಾಡಿಸಲು ನಿರ್ಧಾರ ಮಾಡಿದ್ದರು. ಗದಗ್ ಜಿಲ್ಲೆಯಲ್ಲಿ ಈವರೆಗೆ 2,165 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಕೊರೊನಾ ವೈರಸ್ನಿಂದ 46 ಜನರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. 1,073 ಸಕ್ರೀಯ ಸೋಂಕಿತರಿಗೆ ಚಿಕಿತ್ಸೆ ಕೊಡಲಾಗುತ್ತಿದೆ.
ಆನ್ ಲೈನ್ ಶಿಕ್ಷಣದ ಎಫೆಕ್ಟ್: ತಾಳಿ ಅಡವಿಟ್ಟು ಟಿವಿ ಕೊಡಿಸಿದ ಮಹಾತಾಯಿ!
ಕೊವಿಡ್ & ಅಧಿಕಾರಿಗಳು
ಕೊರೊನಾ ವೈರಸ್ ಸಂಕಷ್ಟ ರಾಜ್ಯಕ್ಕೆ ಎದುರಾದ ಬಳಿಕ ಬಹುತೇಕ ಶ್ರಮಿಸಿದ್ದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು. ಆರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಬಿಟ್ಟರೆ ಬಹುತೇಕ ಸಚಿವರು, ಶಾಸಕರು ಮನೆಯಿಂದ ಹೊರಗೆ ಬಂದಿರಲಿಲ್ಲ.
ಆಗ ಜನಸಾನ್ಯರಲ್ಲಿ ಧೈರ್ಯ ತುಂಬಿದ್ದು ಕೂಡ ಅಧಿಕಾರಿಗಳೇ. ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಮತ್ತೊಂದು ರೀತಿಯಲ್ಲಿ ಗದಗ್ ಡೀಸಿ ಮಾದರಿ ಆಗಿದ್ದಾರೆ.