ಕರ್ನಾಟಕಕ್ಕೆ ವಿಪತ್ತು ನಿರ್ವಹಣೆ ಪ್ರಾಧಿಕಾರ ನೀಡಲಿ: ಎಚ್ಕೆಪಿ ಆಗ್ರಹ
ಗದಗ, ಆಗಸ್ಟ್ 12: ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹದಿಂದ ತತ್ತರಿಸಿರುವ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಸಂಬಂಧ ಉನ್ನತ ಮಟ್ಟದ ಪ್ರಾಧಿಕಾರವನ್ನು ತಕ್ಷಣವೇ ಸ್ಥಾಪಿಸಬೇಕೆಂದು ಮಾಜಿ ಸಚಿವ, ಶಾಸಕ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಬರ ಅಧ್ಯಯನ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗದಗದಲ್ಲಿ ಇಂದು ಪ್ರವಾಹ ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಅವರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ವಿಪತ್ತು ನಿರ್ವಹಣೆಗಾಗಿ ಕರ್ನಾಟಕಕ್ಕೆ ಪ್ರತ್ಯೇಕ ಎನ್ ಡಿ ಆರ್ ಎಫ್ ರೀತಿ ಪಡೆ ಅಗತ್ಯವಿದೆ ಎಂದರು.
ಹಾವೇರಿಯಲ್ಲಿ ಮಳೆ, ಪ್ರವಾಹ ಇಳಿಮುಖ, ತುರ್ತ ಕೆಲಸ ಆರಂಭ
ಭೀಕರ ಪ್ರವಾಹದಿಂದ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿ, ಬೆಳೆ ನಷ್ಟವಾಗಿದೆ. ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದ ಅವರು, ಸರ್ಕಾರ ತಡ ಮಾಡದೇ ಬದುಕು ಕಳೆದುಕೊಂಡಿರುವವರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.
ಹಲವು ಜನರ ಬದುಕು ಕೊಚ್ಚಿ ಹೋಗಿವೆ
ಈ ಪ್ರವಾಹದಿಂದ ಜನರ ಬದುಕೇ ಕೊಚ್ಚಿ ಹೋಗಿದೆ. ಮನೆ ಮಠ ಕಳೆದುಕೊಂಡ ಬಡವರ ಜೀವನ ಅಧೋಗತಿಗೆ ತಲುಪಿದೆ. ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡತೊಡಗಿದೆ. ಈ ಪ್ರವಾಹದಿಂದ ಆಗಿರುವ ನಷ್ಟ ಮತ್ತು ಜನರ ಜೀವನಕ್ಕೆ ಆಗಿರುವ ತೊಂದರೆಗಳು ಲೆಕ್ಕಕ್ಕೇ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಿ ಅವರ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದು ಎಚ್ ಕೆ ಪಾಟೀಲ್ ಹೇಳಿದರು.
ಪ್ರವಾಹ ಪೀಡಿತ ಜಿಲ್ಲೆಗಳ ಭೇಟಿಗೆ ರಾಹುಲ್ ಗಾಂಧಿ ಆಗಮನ
ಶಾಶ್ವತ ನೆರವು ಇರಲಿ
ಈ ಸಂತ್ರಸ್ತರ ಕೇಂದ್ರಗಳು ಕೇವಲ ತಾತ್ಕಾಲಿಕವಷ್ಟೇ. ಇಲ್ಲಿರುವ ಜನರಿಗೆ ಸರ್ಕಾರ ಸದ್ಯದ ಮಟ್ಟಿಗಿನ ಪುನರ್ವಸತಿ ಕಲ್ಪಿಸದೇ ಅವರಿಗೊಂದು ಶಾಶ್ವತ ಪುನರ್ವಸತಿಯನ್ನು ಕಲ್ಪಿಸಬೇಕು. ಇದಕ್ಕಾಗಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಹಾನಿಯಾಗಿದೆ, ಜನ ಜಾನುವಾರುಗಳಿಗೆ ಆಗಿರುವ ತೊಂದರೆಗಳು, ಆಸ್ತಿಪಾಸ್ತಿ ನಷ್ಟ ಸೇರಿದಂತೆ ಒಟ್ಟಾರೆ ನಷ್ಟದ ಬಗ್ಗೆ ಅಧ್ಯಯನ ನಡೆಸಬೇಕು.
ಕೇಂದ್ರ ಸಚಿವರಿಂದ ಬಾರದ ಭರವಸೆ: ಆಕ್ರೋಶ
ಈ ಮಧ್ಯೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಬಂದು ನೆರೆಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದರು. ಆದರೆ, ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದನ್ನು ಕಣ್ಣಾರೆ ಕಂಡರೂ ಆ ಇಬ್ಬರು ಸಚಿವರು ಪರಿಹಾರದ ಬಗ್ಗೆ ಯಾವುದೇ ಭರವಸೆ ನೀಡದಿರುವುದು ಸಂತ್ರಸ್ತರಿಗಷ್ಟೇ ಅಲ್ಲ, ಇಡೀ ಮಾನವ ಸಂಕುಲಕ್ಕೇ ಬೇಸರ ಮೂಡಿಸಿದೆ ಎಂದು ಆಕ್ರೋಶ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ ಊಟ ಬಡಿಸಿದ ಪಾಟೀಲ್
ಇದಕ್ಕೂ ಮುನ್ನ ಎಚ್.ಕೆ.ಪಾಟೀಲ್ ಅವರು, ಗದಗದಲ್ಲಿ ಆರಂಭಿಸಿರುವ ಮೂರು ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಮನೆಗಳನ್ನು ಕಳೆದುಕೊಂಡವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸಿ ಪೂರಕ ಯೋಜನೆಗಳನ್ನು ರೂಪಿಸಲು ಕೂಡಲೇ ಉನ್ನತ ಮಟ್ಟದ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಈ ಪ್ರಾಧಿಕಾರವು ಸಮರೋಪಾದಿಯಲ್ಲಿ ಈ ಸಂತ್ರಸ್ತ ಜನರಿಗೆ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದರು.